ಸಾರಾಂಶ
ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಪಂಜಾಬ್ನ ಅಮೃತಸರ ಗಡಿಯಲ್ಲಿ ಕಾರ್ಯನಿರ್ವಹಿಸಿ ಸ್ವಗ್ರಾಮವಾದ ಶಿವಮೊಗ್ಗದ ಹಸೂಡಿ ಗ್ರಾಮಕ್ಕೆ ಆಗಮಿಸಿದ ಯೋಧ ಹವಲ್ದಾರ್ ರಮೇಶ್ ಅವರಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಪಂಜಾಬ್ನ ಅಮೃತಸರ ಗಡಿಯಲ್ಲಿ ಕಾರ್ಯನಿರ್ವಹಿಸಿ ಸ್ವಗ್ರಾಮವಾದ ಶಿವಮೊಗ್ಗದ ಹಸೂಡಿ ಗ್ರಾಮಕ್ಕೆ ಆಗಮಿಸಿದ ಯೋಧ ಹವಲ್ದಾರ್ ರಮೇಶ್ ಅವರಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು.ಏರ್ ಡಿಫೆನ್ಸ್ನಲ್ಲಿ ಕಾರ್ಯನಿರ್ವಹಿಸಿದ ಯೋಧ ಹವಲ್ದಾರ್ ರಮೇಶ್ ಅವರನ್ನು ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಹಾಪ್ಕಾಮ್ಸ್ ಅಧ್ಯಕ್ಷರಾದ ವಿಜಯಕುಮಾರ್ ನೇತೃತ್ವದಲ್ಲಿ ಅವರ ಸಂಗಡಿಗರು, ಗ್ರಾಮಸ್ಥರು ಭರ್ಜರಿ ಸ್ವಾಗತ ಕೋರಿದರು.
ಈ ವೇಳೆ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಯೋಧ ರಮೇಶ್, 26 ಜನ ಪ್ರವಾಸಿಗರ ಮೇಲೆ ಭಯೋತ್ಪಾದಕರು ಹಲ್ಲೆ ಮಾಡಿ ಅವರ ಸಾವಿಗೆ ಕಾರಣರಾಗಿದ್ದಕ್ಕೆ ಅಪರೇಷನ್ ಸಿಂದೂರದ ಮೂಲಕ ಉಗ್ರರ 9 ಅಡಗು ತಾಣವನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ಆ ಕಾರ್ಯಾಚರಣೆಯ ಒಂದು ಭಾಗವಾಗಿ ನಾನು ಕೂಡ ಪಂಜಾಬ್ ಅಮೃತಸರ ಗಡಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಇಲ್ಲಿನ ಭವ್ಯ ಸ್ವಾಗತ ನನಗೆ ಇನ್ನಷ್ಟು ಉತ್ಸಾಹ ನೀಡಿದೆ ಮತ್ತು ಸಂತೋಷ ತಂದಿದೆ ಎಂದರು.ಯೋಧ ರಮೇಶ್ ಪತ್ನಿ ಸಿಂಧು ಮಾತನಾಡಿ, ಹಿಂದೂ ಹೆಣ್ಣು ಮಕ್ಕಳ ಸಿಂದೂರ ಅಳಿಸಿದ ಉಗ್ರರಿಗೆ ನಮ್ಮ ಯೋಧರು ತಕ್ಕ ಪಾಠ ಕಲಿಸಿದ್ದಾರೆ. ನಾನೊಬ್ಬಳು ಯೋಧನ ಪತ್ನಿ ಎನ್ನುವುದಕ್ಕೆ ನನಗೆ ಅತ್ಯಂತ ಸಂತೋಷವಾಗಿದೆ. ಗ್ರಾಮಸ್ಥರ ಮತ್ತು ಸಾರ್ವಜನಿಕರ ಹಾಗೂ ನಾಯಕರ ಈ ಪ್ರೀತಿ ಕಂಡು ನನಗೆ ಹೆಮ್ಮೆ ಎನಿಸಿದೆ. ಎಲ್ಲಾ ಯೋಧರಿಗೂ ಇದೇ ರೀತಿಯ ಸನ್ಮಾನ ಸ್ವಾಗತ ಸಿಗಲಿ ಎಂದು ಹಾರೈಸುತ್ತೇನೆ ಎಂದರು.