ಬೆಣ್ಣೆಹಳ್ಳದಿಂದ ಪ್ರತಿವರ್ಷ ಹರಿದುಹೋಗುವ 16 ಟಿಎಂಸಿ ನೀರನ್ನು ನಾವು ಹೇಗೆ ಉಪಯೋಗ ಮಾಡಬಹುದು ಎನ್ನುವ ಕುರಿತಂತೆ ಸರ್ಕಾರ ಅಧ್ಯಯನ ಮಾಡಬೇಕು. ಆ ಮೂಲಕ ಈ ಭಾಗದ ಜನರಿಗೆ ಒಂದು ದೊಡ್ಡ ಯೋಜನೆಯನ್ನು ಕಲ್ಪಿಸಿಕೊಡಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಹುಬ್ಬಳ್ಳಿ: ಬೆಣ್ಣೆಹಳ್ಳದಿಂದ ಪ್ರತಿವರ್ಷ ಹರಿದುಹೋಗುವ 16 ಟಿಎಂಸಿ ನೀರನ್ನು ನಾವು ಹೇಗೆ ಉಪಯೋಗ ಮಾಡಬಹುದು ಎನ್ನುವ ಕುರಿತಂತೆ ಸರ್ಕಾರ ಅಧ್ಯಯನ ಮಾಡಬೇಕು. ಆ ಮೂಲಕ ಈ ಭಾಗದ ಜನರಿಗೆ ಒಂದು ದೊಡ್ಡ ಯೋಜನೆಯನ್ನು ಕಲ್ಪಿಸಿಕೊಡಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು. ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿಯಲ್ಲಿ ಭಾನುವಾರ ನಡೆದ ಬೆಣ್ಣೆಹಳ್ಳ ಪ್ರವಾಹ ತಡೆ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೆಣ್ಣೆಹಳ್ಳದ ಪ್ರವಾಹದ ನೀರು ಮೊದಲು ಮಲಪ್ರಭಾ ನದಿ, ಕೃಷ್ಣಾ ನದಿ ಆ ಬಳಿಕ ಕೂಡಲಸಂಗಮದಲ್ಲಿ ಸೇರಿ ಆಂಧ್ರಪ್ರದೇಶ, ತೆಲಂಗಾಣಕ್ಕೆ ಹೋಗುತ್ತದೆ. ಈ 16 ಟಿಎಂಸಿ ನೀರು ರಾಜ್ಯದಲ್ಲಿ ಸದ್ಬಳಕೆ ಆಗಬೇಕು. ಪ್ರವಾಹ ತಡೆ ಯೋಜನೆ ಕಾಮಗಾರಿ ಮುಗಿದ ಬಳಿಕ ಅಧ್ಯಯನವಾಗಬೇಕು ಎಂದು ಹೇಳಿದರು.ಗ್ಯಾರಂಟಿ ಯೋಜನೆ ಜಾರಿ ಮಾಡಿದ ಮೇಲೆ ರಾಜ್ಯದ ಬೊಕ್ಕಸಕ್ಕೆ ಹೊಡೆತ ಬಿದ್ದಿದೆ ಎಂದು ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಬಡವರಿಗೆ ಯೋಜನೆ ಜಾರಿ ಮಾಡಿದರೆ ಅವರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಗ್ಯಾರಂಟಿ ಯೋಜನೆಗೆ ಅನುದಾನ ನೀಡುತ್ತಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಹ ತಡೆ ಯೋಜನೆಗೆ ₹200 ಕೋಟಿ ಅನುದಾನ ಬಿಡುಗಡೆ ಮಾಡುವ ಖಜಾನೆ ಖಾಲಿಯಾಗಿದೆ ಎಂದು ಅಪಪ್ರಚಾರ ನೀಡುವವರಿಗೆ ಸರಿಯಾದ ಉತ್ತರ ನೀಡಿದ್ದಾರೆ ಎಂದರು.
ನಾವು ದೇವರ ಹೆಸರು ಹೇಳಿಲ್ಲ, ಸ್ವಾಮಿಗಳ ಹೆಸರು ಹೇಳಿಲ್ಲ, ಗುಡಿ ಹೆಸರು ಹೇಳಿಲ್ಲ, ಮಠದ ಹೆಸರು ಹೇಳಿಲ್ಲ. ಜನರಲ್ಲಿ ನಾವು ದೇವರನ್ನು ಕಂಡಿದ್ದೇವೆ. ಆ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಬಡವರಿಂದ ಇಷ್ಟು ಪ್ರೀತಿಗೆ ಪಾತ್ರವಾಗಿದೆ ಎಂದು ಹೇಳಿದರು.ಜೋಶಿ ಅವರಿಗೆ ಕಾಲಿಡಲು ನೈತಿಕತೆ ಇಲ್ಲ: ಬಿಜೆಪಿಯವರು ಮಹದಾಯಿ ಯೋಜನೆ ಜಾರಿ ಮಾಡಲು ಪರವಾನಗಿ ಕೊಡುತ್ತಿಲ್ಲ. ಆ ಮೀಟಿಂಗ್, ಈ ಮೀಟಿಂಗ್ ಎಂದು ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಹದಾಯಿ ಯೋಜನೆಗೆ ಅನುಮತಿ ಕೊಡಿಸದೆ ಧಾರವಾಡ ಜಿಲ್ಲೆಯ ಯಾವುದೇ ಭಾಗದಲ್ಲಿ ಕಾಲಿಡುವುದಕ್ಕೆ ನೈತಿಕತೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವ ಎಚ್.ಕೆ. ಪಾಟೀಲ್, ಬಿಜೆಪಿಯ ಈ ನಿರ್ಲಕ್ಷ್ಯವನ್ನು ಈ ಭಾಗದ ರೈತರು ಅರ್ಥ ಮಾಡಿಕೊಳ್ಳಬೇಕು ಎಂದರು.