ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ (ದೊಡ್ಡಬಳ್ಳಾಪುರ ಘಟಕ)ನ ವತಿಯಿಂದ ಜುಲೈ ತಿಂಗಳಿನಲ್ಲಿ ನಾನು ವಿಜ್ಞಾನಿ-೨೦೧೫ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಟೆಲಿಸ್ಕೋಪ್ ತಯಾರಿಸುವ ಮತ್ತು ಶಾಲೆಗೊಂದು ಟೆಲಿಸ್ಕೋಪ್ ವಿತರಿಸುವ ಕಾರ್ಯಕ್ರಮ ದೊಡ್ಡಬಳ್ಳಾಪುರದ ಬ್ಯಾಸೆಂಟ್ ಉದ್ಯಾನ(ಸ್ಕೌಟ್ ಕ್ಯಾಂಪ್)ವನದಲ್ಲಿ ನಡೆಯಲಿದೆ ಎಂದು ಪರಿಷತ್ತಿನ ನಿರ್ದೇಶಕಿ ಪುಷ್ಪಲತಾ ಹೇಳಿದರು.ವಿದ್ಯಾರ್ಥಿಗಳೇ ಟೆಲಿಸ್ಕೋಪ್ ತಯಾರಿಸುವ ರಾಜ್ಯದ ೨೫೦ ಶಾಲೆಗಳಿಂದ ೨೫೦ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ನುರಿತ ತಜ್ಞರಿಂದ ಅವರಿಗೆ ಟೆಲಿಸ್ಕೋಪ್ ತಯಾರಿಸುವ ೮ ದಿನಗಳ ತರಬೇತಿ ನೀಡಲಾಗಿದೆ. ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಅವರು ಮಂಡ್ಯ ಜಿಲ್ಲೆಯ ೧೦ ವಿದ್ಯಾರ್ಥಿಗಳಿಗೆ ಟೆಲಿಸ್ಕೋಪ್ ತಯಾರಿಸುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಪೇಕ್ಷಿತ ೧೦ ಶಾಲೆಗಳಿಂದ ಶಾಲೆಗೆ ತಲಾ ಓರ್ವ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ. ತರಬೇತಿಗೆ ಕಳುಹಿಸಲಾಗುವುದು. ವಿದ್ಯಾರ್ಥಿಯೊಂದಿಗೆ ಶಾಲೆಯ ಓರ್ವ ವಿಜ್ಞಾನ ಶಿಕ್ಷಕ, ಒಬ್ಬ ಪೋಷಕರು ಇರಲು ಅವಕಾಶವಿದ್ದು, ಅವರಿಗೆ ಉಚಿತ ಊಟ ಮತ್ತು ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.ಪರಿಷತ್ ವತಿಯಿಂದ ೧೫ ನುರಿತ ಮತ್ತು ಭೌಗೋಳಿಕ ವಿಷಯದ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತಿದೆ. ತರಬೇತಿಗೆ ಆಯ್ಕೆಯಾಗುವ ವಿದ್ಯಾರ್ಥಿಗಳಿಂದ ಟೆಲಿಸ್ಕೋಪ್ ತಯಾರಿಸುವ ಸಾಮಗ್ರಿಗಳಿಗಾಗಿ ೧೫ ಸಾವಿರ ರು. ಪಾವತಿಸಿಕೊಳ್ಳಲಾಗುವುದು. ಇದನ್ನು ಪೋಷಕರು ಅಥವಾ ಶಾಲೆಯ ವತಿಯಿಂದ ಪಾವತಿ ಮಾಡಬಹುದು. ಜೂ.೨೪ ರೊಳಗೆ ನೋಂದಾಯಿಸಿಕೊಳ್ಳಬಹುದು ಮಾಹಿತಿಗೆ ೯೬೮೬೬ ೬೭೧೩೦, ೯೯೪೫೬ ೨೦೩೪೫, ೯೬೮೬೦ ೦೮೮೧೯ ಸಂಪರ್ಕಿಸಿ ಎಂದು ಮನವಿ ಮಾಡಿದರು.
ಈ ತರಬೇತಿಗೆ ಲಿವ್ಕಾ, ಗಿನ್ನಿಸ್, ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಗಳು ಆಗಮಿಸಲು ಕ್ರಮವಹಿಸಿದ್ದು, ವಿದ್ಯಾರ್ಥಿಗಳು ಶಿಕ್ಷಕರಿಗೆ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಮಹೇಂದ್ರ, ಜಿಲ್ಲಾ ಸಂಚಾಲಕಿ ಬಿ.ಎಸ್.ಅನುಪಮಾ, ವಸಂತಾ, ಶ್ರುತಿ ಇದ್ದರು.