ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಇತಿಹಾಸ ತಜ್ಞರೊಂದಿಗೆ ಚರ್ಚೆ ಮಾಡಿ, ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಇತಿಹಾಸದ ಭಾಗಗಳನ್ನು ಸ್ಮಾರಕಗಳ ಸಂರಕ್ಷಣೆಗಾಗಿ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಚಿಂತನೆ ನಡೆಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ ಹೇಳಿದರು.ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮದ ಅಂಗವಾಗಿ ನಗರದ ವಿವಿಧ ಐತಿಹಾಸಿಕ ಸ್ಥಳಗಳನ್ನು ಸಚಿವರು ವೀಕ್ಷಣೆ ಮಾಡಿ ಸ್ಮಾರಕಗಳ ಸಂರಕ್ಷಣೆಗೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಸೋದ್ಯಮ ಇಲಾಖೆ ಬಸ್ನ ಮೂಲಕ ಪ್ರವಾಸ ಕೈಗೊಂಡು ವಿಜಯಪುರದ ವಿವಿಧ ಐತಿಹಾಸಿಕ ಸ್ಮಾರಕಗಳ ವೀಕ್ಷಣೆ ಮಾಡಿ, ಸ್ಮಾರಕಗಳಲ್ಲಿ ಅಳವಡಿಸಲಾಗಿರುವ ಕಲೆ, ಶಿಲ್ಪಕಲೆ, ಸಂಸ್ಕೃತಿ ಬಿಂಬಿಸುವ ಚಿತ್ರಕಲೆ ವೀಕ್ಷಿಸಿ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಮಾಹಿತಿ ಪಡೆದು, ಸಂರಕ್ಷಣೆಗಾಗಿ ಅಧಿಕಾರಿಗಳಿಗೆ ಸೂಚಿಸಿದರು.ಬೆಳಗ್ಗೆ ಮುತ್ತಗಿಯಲ್ಲಿರುವ ಸ್ಮಾರಕ ಹಾಗೂ ದೇವಾಲಯಗಳ ವೀಕ್ಷಣೆ ನಡೆಸಿ, ವಿಜಯಪುರಕ್ಕೆ ಆಗಮಿಸಿದ ಸಚಿವರು, ಐತಿಹಾಸಿಕ ಸ್ಮಾರಕದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಆದಿಲ್ಶಾಹಿ ದರ್ಬಾರ ಹಾಲ್, ಜಿಲ್ಲಾ ಖಜಾನೆ ಕಚೇರಿ, ಆಡಳಿತಾತ್ಮಕ ಸಭಾಂಗಣಗಳು, ಶೇಖರಣಾ ಕಚೇರಿಗಳು, ೭ ಅಂತಸ್ತಿನ ಆದಿಲ್ ಶಾಹಿ ಅರಮನೆ ಸಾತಮಂಜಿಲ್, ಜಲಮಹಲ್, ನರಸಿಂಹ ದೇವಸ್ಥಾನ, ಆನಂದ ಮಹಲ್, ಗಗನ್ ಮಹಲ್, ಪಾರ್ಶ್ವನಾಥ ಮಂದಿರ, ಹಳೆ ತಹಸೀಲ್ದಾರ್ ಕಚೇರಿ ಸೇರಿದಂತೆ ವಿವಿಧ ಐತಿಹಾಸಿಕ ಸ್ಮಾರಕಗಳ ವೀಕ್ಷಣೆ ನಡೆಸಿದ ಅವರು, ಅಧಿಕಾರಿಗಳು ಹಾಗೂ ಮಾರ್ಗದರ್ಶಕರಿಂದ ಐತಿಹಾಸಿಕ ಸ್ಮಾರಕಗಳಲ್ಲಿ ಅಳವಡಿಸಲಾದ ಶಿಲ್ಪಕಲೆ, ಸಂಸ್ಕೃತಿ, ಕಲಾಕೃತಿ ಕುರಿತು ಸೂಕ್ತ ಮಾಹಿತಿ ಪಡೆದುಕೊಂಡರು.
ಗಮನ ಸೆಳೆದ ವಿದೇಶಿ ಪ್ರವಾಸಿಗರು:ಪ್ರವಾಸೋದ್ಯಮ ಇಲಾಖೆ ಸಚಿವರಾದ ಎಚ್.ಕೆ.ಪಾಟೀಲ ಅವರು ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಣೆ ಮಾಡುತ್ತಿರುವ ಸಂದರ್ಭದಲ್ಲಿ ಸಚಿವರನ್ನು ಭೇಟಿ ಮಾಡಿದ ಅಮೇರಿಕಾ ದೇಶದ ಪ್ರವಾಸಿಗರು, ಜಿಲ್ಲೆಯು ಸುಂದರವಾದ ಸ್ಮಾರಕಗಳನ್ನು ಹೊಂದಿರುವ ಕುರಿತು ಹಾಗೂ ಇಲ್ಲಿನ ಜನರ ಸಂಸ್ಕೃತಿ, ಭಾಷೆ, ನಡವಳಿಕೆಯಿಂದ ಪ್ರಭಾವಿತವಾಗಿರುವ ಕುರಿತು ತಮ್ಮ ಅನಿಸಿಕೆಗಳನ್ನು ಕನ್ನಡದಲ್ಲಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಸಿಂದಗಿ ಶಾಸಕ ಅಶೋಕ ಮನಗೂಳಿ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಮಪ್ರಸಾತ್ ಮನೋಹರ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಉಪವಿಭಾಗಾಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದಶಕ ಮಲ್ಲಿಕಾರ್ಜುನ ಭಜಂತ್ರಿ ಸೇರಿದಂತೆ ಮುಂತಾದವರು ಇದ್ದರು.---
ಕೋಟ್ವಿಜಯಪುರ ದೇಶದಲ್ಲಿ ಅತೀ ಹೆಚ್ಚು ಸ್ಮಾರಕ ಹೊಂದಿರುವ ಐತಿಹಾಸಿಕ ನಗರ ಇಲ್ಲಿ ಹಲವಾರು ಸ್ಮಾರಕಗಳಿವೆ. ಸ್ಮಾರಕಗಳ ರಕ್ಷಣೆ, ಸಂರಕ್ಷಣೆ ಅಗತ್ಯ. ಕರ್ನಾಟಕದಲ್ಲಿನ ಸ್ಮಾರಕಗಳ ದರ್ಶನ ಮಾಡಲು ಹಾಗೂ ಅವುಗಳ ಸಂರಕ್ಷಣೆಗಾಗಿ ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ ಕೈಗೊಂಡಿದ್ದೇನೆ.
-ಎಚ್.ಕೆ.ಪಾಟೀಲ ಪ್ರವಾಸೋದ್ಯಮ ಸಚಿವ