ಪುಸ್ತಕ ಸಾಧನೆಯ ಪಯಣಕ್ಕೆ ಸಾಧನ: ಡಿ.ಎಸ್.ಶಂಕರ್‌ ಶೇಟ್‌

| Published : Feb 19 2024, 01:33 AM IST

ಸಾರಾಂಶ

ಸೊರಬ ತಾಲೂಕಿನ ಯಡಗೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಸೊರಬ

ಬದುಕಿನ ಸಾಧನೆಯ ಪಯಣಕ್ಕೆ ಸಾಧನವಾಗುವ ಪುಸ್ತಕಗಳ ಓದಿಗೆ ಪ್ರೇರಣೆ ನೀಡುವ ಶಕ್ತಿ ಪೋಷಕರು ಮತ್ತು ಶಿಕ್ಷಕರದ್ದು, ಹಾಗಾಗಿ ಪುಸ್ತಕಗಳು ಮಕ್ಕಳ ಭವಿಷ್ಯದ ಬದುಕಿಗೆ ಮತ್ತು ಸರಿದಾರಿ ತೋರುವ ದೀವಿಗೆಯಾಗುತ್ತವೆ ಎಂದು ಸಮಾಜ ಸೇವಕ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಡಿ.ಎಸ್.ಶಂಕರ್ ಶೇಟ್ ಹೇಳಿದರು.

ಶನಿವಾರ ತಾಲೂಕಿನ ಯಡಗೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೨೦೨೩-೨೪ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರವೂ ದೊರೆಯುತ್ತದೆ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುತ್ತದೆ. ಪ್ರಾಥಮಿಕ ಶಿಕ್ಷಣವನ್ನು ಗ್ರಾಮೀಣ ಪ್ರದೇಶದಲ್ಲಿ ಅಭ್ಯಾಸ ನಡೆಸಿದ ಮಕ್ಕಳು ಇಂದು ಹಲವು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದ ಅವರು, ಪುಸ್ತಕಗಳನ್ನು ಹೆಚ್ಚು ಓದುವುದರಿಂದ ಸಮಾಜದ ಬಗ್ಗೆ ಅರಿವು ಮೂಡುವ ಜೊತೆ ಜ್ಞಾನವೂ ವೃದ್ಧಿಯಾಗುತ್ತದೆ. ಆದ್ದರಿಂದ ಮಕ್ಕಳು ಪುಸ್ತಕ ಪ್ರೀತಿ ಬೆಳೆಸಿಕೊಳ್ಳಬೇಕು ಎಂದರು.

ಸರ್ಕಾರವು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಮಕ್ಕಳ ಸಂತೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮಕ್ಕಳ ಪ್ರತಿಭೆ ಅನಾವರಣಕ್ಕೆ ವಾರ್ಷಿಕೋತ್ಸವ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿವೆ ಎಂದರು.

ಗ್ರಾಪಂ ಸದಸ್ಯೆ ಸರೋಜಾ ಷಣ್ಮುಖಪ್ಪ ಮಾತನಾಡಿ, ಮಕ್ಕಳ ಚಲನವಲನಗಳ ಮೇಲೆ ನಿಗಾ ವಹಿಸಿ ಶಿಕ್ಷಣಕ್ಕೆ ಪೂರಕ ವಾತಾವರಣ ಮತ್ತು ಸಾಧನೆಗೆ ಸೂಕ್ತ ಮಾರ್ಗದರ್ಶನ ಶಿಕ್ಷಕರು ನೀಡಬೇಕು ಎಂದರು. ಸ್ಥಳೀಯ ಮುಖಂಡ ಈಶ್ವರಪ್ಪ ಚನ್ನಪಟ್ಟಣ ಮಾತನಾಡಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೈ.ಬಿ.ತಿಮ್ಮಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಧನಂಜಯ ಡಿ.ನಾಯ್ಕ್, ಸದಸ್ಯೆ ಸೀತಾ ರಾಮಪ್ಪ, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ರೇವಣಪ್ಪ, ಉಪಾಧ್ಯಕ್ಷ ದೇವೇಂದ್ರಪ್ಪ, ಮುಖ್ಯ ಶಿಕ್ಷಕ ತಿಮ್ಮೇಶ್ ಆಚಾರ್, ಮುಖಂಡರಾದ ಪ್ರದೀಪ ಬಾಡದಬೈಲು, ರವಿ ಚನ್ನಪಟ್ಟಣ ಸೇರಿದಂತೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಾಲಾ ಶಿಕ್ಷಕ ವರ್ಗದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.