ಸಾರಾಂಶ
ಧಾರವಾಡ:
ಕವಿಕುಂಚ ಪ್ರಕಾಶನ ವತಿಯಿಂದ ಕವಿಯಿತ್ರಿ ಪ್ರೇಮಾ ನಡುವಿನಮನಿ ಅವರ ಮೌನವೂ ಪಿಸುಗುಟ್ಟಿದಾಗ ಕಾವ್ಯ ಸಂಕಲನ ಬಿಡುಗಡೆ ಸಮಾರಂಭ ಇಲ್ಲಿಯ ವಿಕಾಸ ನಗರದ ಎಂ.ಆರ್. ಬಾಳಿಕಾಯಿ ಆರ್ಟ್ ಗ್ಯಾಲರಿಯಲ್ಲಿ ನಡೆಯಿತು.ಸಂಕಲನ ಬಿಡುಗಡೆ ಮಾಡಿದ ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಿಗುಡ್ಡ, ಹೆಣ್ಣು ಮನಸ್ಸು ಮಾಡಿದರೆ ತನ್ನ ಸುತ್ತಲಿನ ಎಲ್ಲ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುತ್ತಾಳೆ. ಒಬ್ಬ ಗೃಹಿಣಿಯಾಗಿ ಕಾವ್ಯ, ಸಾಹಿತ್ಯ, ಸಿನಿಮಾ, ರಂಗಭೂಮಿ, ಚಿತ್ರಕಲೆ ಹೀಗೆ ಹಲವು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರೇಮಾ ಅವರು ಬಹಳಷ್ಟು ಮಹಿಳೆಯರಿಗೆ ಮಾದರಿಯೂ ಆಗುತ್ತಾರೆ. ಇಂದು ಏನಾದರೂ ಬೇಂದ್ರೆ ಅವರು ಇದ್ದಿದ್ದರೆ ಪ್ರೇಮಾಳನ್ನು ಕಂಡು ಶಹಬ್ಬಾಷ ಎನ್ನುತ್ತಿದ್ದರು ಎಂದರು.ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಡಾ. ಜಾಜಿ ದೇವೇಂದ್ರಪ್ಪ ಕೃತಿ ಪರಿಚಯಿಸಿ, ಪ್ರೇಮಾ ಅವರ ಈ ಕಾವ್ಯ ಈ ಕಾಲದ ಅಪರೂಪದ ಪ್ರೇಮ ಸಂಪುಟ. ಇದೊಂದು ಬೆಳದಿಂಗಳಲ್ಲಿ ಕೂತು ಬರೆದ ಪ್ರೇಮಾಮೃತ ಪದ್ಯಗಳ ಅಭಿವ್ಯಕ್ತಿಯ ಸಂಕಲನವಾಗಿದೆ ಎಂದರು.
ಹಿರಿಯ ಚಿತ್ರಕಲಾವಿದ ಎಂ.ಆರ್. ಬಾಳಿಕಾಯಿ ಮಾತನಾಡಿ, ಕಲೆ ಮತ್ತು ಕಾವ್ಯ ಎರಡು ಜೀವನದ ದಡಗಳು. ಪ್ರೇಮ ಕೂಡ ಕಾವ್ಯದ ಕೇಂದ್ರ ಶಕ್ತಿ. ಅದನ್ನು ಜೀವನದ ವಿವಿಧ ನೆಲೆಗಳಲ್ಲಿ ಚಿತ್ರಿಸಬಹುದು ಎಂದು ಹೇಳಿದರು.ಕಲಾಚಿತ್ರಗಳ ಕುರಿತು ಮಾತನಾಡಿದ ಶ್ರೀರಮೇಶ ಸಾಸನೂರ, ಪ್ರೇಮಾ ರೇಖಿಸಿದ ಪರ್ಲಿ ಪೇಂಟಿಂಗ್ ಅದ್ಭುತ ಸಂಯೋಜನೆಯಾಗಿದೆ ಎಂದು ಹೇಳಿದರು.
ಇದೇ ವೇಳೆ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರಿಗೆ ಸರ್ವಶ್ರೀ ಪ್ರಶಸ್ತಿ ಕವಿ ಕುಂದ ಪ್ರಕಾಶನ ನೀಡಿ ಗೌರವಿಸಲಾಯಿತು.ಡಾ. ಶಶಿಧರ ನರೇಂದ್ರ ಪ್ರೇಮಾ ಅವರ ಕವನ ವಾಚನ ಮಾಡಿದ ಲೇಖಕಿಯರಿಗೆ ಕಾವ್ಯಶ್ರೀ ಪ್ರಶಸ್ತಿ, ಪ್ರೇಮಾ ನಡುವಿನಮನಿ ಅವರಿಗೆ ಕಾವ್ಯ ಕಲಾಶ್ರೀ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅನೇಕ ಸಾಹಿತಿಗಳು, ಕವಿಗಳು ಪಾಲ್ಗೊಂಡಿದ್ದರು.