ಬಂಗಾರಪೇಟೆ ತಾಲೂಕಿನ ಬೀರಂಡಹಳ್ಳಿ ನಿರಾಶ್ರಿತ ಕೇಂದ್ರದಲ್ಲಿರುವ ಸುಮಾರು ೧೨೦ ಮಂದಿಗೆ ಆಧಾರ್ ಕಾರ್ಡ್ ಇಲ್ಲವೇ ಇಲ್ಲ. ಇದರಿಂದ ಸರ್ಕಾರದ ಮತ್ತು ಕೇಂದ್ರದ ಹಲವು ಯೋಜನೆಗಳು ಸೇರಿದಂತೆ ಬ್ಯಾಂಕ್ ಖಾತೆಯನ್ನೂ ಸಹ ತೆರೆಯಲು ಸಮಸ್ಯೆಯಾಗಿತ್ತು. ಆದ್ದರಿಂದ ಿವರಿಗೆ ಆಧಾರ್‌ ನೀಡಲುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಸೂಚಿಸಿದ್ದಾರೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ೧೨೦ ನಿರಾಶ್ರಿತರಿಗೆ ಆಧಾರ್ ಕಾರ್ಡ್ ಇಲ್ಲದೆ ಇದ್ದು, ಯುಐಡಿ ಕೇಂದ್ರದ ನಿರ್ದೆಶನದಂತೆ ಆಧಾರ್ ನೋಂದಣಿ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲಿ ಎಲ್ಲರಿಗೂ ಆಧಾರ್ ಕಾರ್ಡ್ ದೊರೆಯುವ ಸಾಧ್ಯತೆ ಇದೆ. ಚಿಕ್ಕಬಳ್ಳಾಪುರ ತಾಲೂಕಿನ ಬೀರಂಡಹಳ್ಳಿ ಗ್ರಾಮದ ಬಳಿ ೨೦೦೨ರಲ್ಲಿ ಕೇಂದ್ರ ಪರಿಹಾರ ಸಮಿತಿಯ ಮೂಲಕ ನಿರಾಶ್ರಿತರ ಕೇಂದ್ರವನ್ನು ತೆರೆಯಲಾಗಿದೆ. ಸದ್ಯ ಉತ್ತರ ಪ್ರದೇಶ, ಬಿಹಾರ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿರುವ ೧೨೩ ಪುರುಷರು ಮತ್ತು ೩೨ ಮಂದಿ ಮಹಿಳೆಯರು ಸೇರಿದಂತೆ ಒಟ್ಟು ೧೫೫ ಮಂದಿ ಇಲ್ಲಿ ಆಶ್ರಯ ಪಡೆದಿದ್ದಾರೆ. ಕೇಂದ್ರದಲ್ಲಿ ಮಾನಸಿಕ ರೋಗಿಗಳು ಮತ್ತು ನಿರಾಶ್ರಿತರು ಇದ್ದಾರೆ.

ಆಧಾರ್‌ ನೀಡಲು ಡಿಸಿ ಸೂಚನೆ

ಪ್ರತಿಯೊಂದು ಕೆಲಸಕ್ಕೂ ಈಗ ಆಧಾರ್‌ ಕಾರ್ಡ್ ಕಡ್ಡಾಯವಾಗಿದ್ದು, ನಿರಾಶ್ರಿತ ಕೇಂದ್ರದಲ್ಲಿರುವ ಸುಮಾರು ೧೨೦ ಮಂದಿಗೆ ಆಧಾರ್ ಕಾರ್ಡ್ ಇಲ್ಲವೇ ಇಲ್ಲ. ಇದರಿಂದ ಸರ್ಕಾರದ ಮತ್ತು ಕೇಂದ್ರದ ಹಲವು ಯೋಜನೆಗಳು ಸೇರಿದಂತೆ ಬ್ಯಾಂಕ್ ಖಾತೆಯನ್ನೂ ಸಹ ತೆರೆಯಲು ಸಮಸ್ಯೆಯಾಗಿತ್ತು. ಈ ಹಿಂದೆ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ್ದಾಗ ಅಲ್ಲಿರುವ ವ್ಯಕ್ತಿಗಳಿಗೆ ಆಧಾರ್ ಕಾರ್ಡ್ ಇಲ್ಲದ ಮಾಹಿತಿ ದೊರಕಿತು. ಕೂಡಲೇ ಅಂದಿನ ತಹಸೀಲ್ದಾರ್ ಎಸ್.ವೆಂಕಟೇಶಪ್ಪಗೆ ಆಧಾರ್ ಕಾರ್ಡ್ ನೊಂದಣಿಗೆ ಸೂಚಿಸಿದ್ದರು.

ತಹಸೀಲ್ದಾರ್ ಎಸ್.ವೆಂಕಟೇಶಪ್ಪ ಬೆಂಗಳೂರಿನ ಖನಿಜ ಭವನದಲ್ಲಿನ ಆಧಾರ್ ಸೆಂಟರ್‌ಗೆ ಮನವಿ ಸಲ್ಲಿಸಿ, ನಿರಾಶ್ರಿತರ ಕೇಂದ್ರದಲ್ಲಿಯೇ ಆಧಾರ್ ನೋಂದಣಿಗೆ ಅವಕಾಶ ಕಲ್ಪಿಸಿದ್ದರು. ಅದರಂತೆ ಒಟ್ಟು ೧೨೦ ಮಂದಿಗೆ ಆಧಾರ್ ಕಾರ್ಡ್‌ ನೋಂದಣಿಯನ್ನು ಮಾಡಿಸಲಾಗಿತ್ತು. ಆದರೆ ಕೇವಲ ೪ ಮಂದಿಗೆ ಮಾತ್ರ ಆಧಾರ್ ಕಾರ್ಡ್ ಯಶಸ್ವಿಯಾಗಿ ಜನರೇಟ್ ಆಗಿತ್ತು. ಉಳಿದ ೧೧೬ ಮಂದಿಯ ಅರ್ಜಿ ತಿರಸ್ಕೃತಗೊಂಡಿತ್ತು.

ಶೀಘ್ರದಲ್ಲೇ ಎಲ್ಲರಿಗೂ ಆಧಾರ್‌

ಇಂದಿನ ತಹಸೀಲ್ದಾರ್ ಕೆ.ಎನ್ ಸುಜಾತಾ ಉಳಿದ ೧೧೬ ಮಂದಿ ನಿರಾಶ್ರಿತರಿಗೂ ಆಧಾರ್ ಕಾರ್ಡ್ ಕೊಡಲಿಸಲು ಮತ್ತೊಮ್ಮೆ ಆಧಾರ್ ನೋಂದಣಿಗೆ ಅವಕಾಶ ಕಲ್ಪಿಸಿದ್ದಾರೆ. ಕಳೆದ ಎರಡು ದಿನಗಳಿಂದ ನೋಂದಣಿ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಎಲ್ಲರಿಗೂ ಆಧಾರ್ ಕಾರ್ಡ್ ದೊರಕುವ ಸಾಧ್ಯತೆ ಇದೆ.