ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ವಿಟ್ಲದ ಗೌಡರ ಯಾನೆ ಒಕ್ಕಲಿಗರ ಸಂಘ, ಗೌಡ ಮಹಿಳಾ ಘಟಕ ಮತ್ತು ಗೌಡ ಯುವ ವೇದಿಕೆಗಳ ಜಂಟಿ ಆಶ್ರಯದಲ್ಲಿ ‘ಆಟಿಲೊಂದು ದಿನ’ ಕಾರ್ಯಕ್ರಮವು ವಿಟ್ಲದ ಅಕ್ಷಯ ಭವನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, ಸಂಸ್ಕೃತಿ ಮತ್ತು ಸಾಹಿತ್ಯಗಳ ಪೋಷಣೆಯೊಂದಿಗೆ ಅರೆಭಾಷೆಯನ್ನು ಪುಷ್ಟೀಕರಿಸುವ ಕಾರ್ಯಗಳನ್ನು ಅಕಾಡೆಮಿಯು ನಿರಂತರವಾಗಿ ಮಾಡುತ್ತಿದೆ. ವಿಟ್ಲ ಜನರಿಗೆ ಅರೆಭಾಷೆ ಮೇಲೆ ಇರುವ ಅಭಿಮಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಸಂಘಟಕರನ್ನು ಅಭಿನಂದಿಸಿದರು.ಮಂಗಳೂರಿನ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ನಿಕಟ ಪೂರ್ವ ಅಧ್ಯಕ್ಷ ಸೌಮ್ಯ ಸುಕುಮಾರ್ ಮಾತನಾಡಿ, ಸಾಂಸ್ಕೃತಿಕ ಜಾಗೃತಿ ಮತ್ತು ರಕ್ಷಣೆಗಳ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಇಂದಿನ ಅವಶ್ಯಕತೆಯಾಗಿದೆ ಎಂದರು.ಪ್ರಧಾನ ಉಪನ್ಯಾಸ ನೀಡಿದ ವಿಶ್ರಾಂತ ಪ್ರಾಂಶುಪಾಲ ಮತ್ತು ಜೇಸೀ ರಾಷ್ಟ್ರೀಯ ತರಬೇತುದಾರ ಸೀತಾರಾಮ ಕೇವಳ ಮಾತನಾಡಿ, ಇಂದು ಆಟಿ ಆಚರಣೆ ಎಂಬುದು ಇತಿಹಾಸದ ಪ್ರಜ್ಞೆಯ ನೆಲೆಯಲ್ಲಿ ಪ್ರಾಮುಖ್ಯವಾಗಿದೆ ಎಂದರು.
ವಿಟ್ಲ ಮಹಿಳಾ ಘಟಕದ ಅಧ್ಯಕ್ಷೆ ಅಮಿತಾ ಕೃಷ್ಣ ಕೊಡಿಪಾಡಿಗುತ್ತು ಅವರನ್ನು ಗೌರವಿಸಲಾಯಿತು.ಅರೆಭಾಷೆಯ ಪದ್ಯ, ಸೋಬಾನೆಗಳ ಗಾಯನ, ಮದುವೆಯಲ್ಲಿ ಹೆಣ್ಣಿಳಿಸಿಕೊಡುವ ಸಾಹಿತ್ಯ ಗಾಯನ ಸ್ಪರ್ಧೆಗಳು, ನೃತ್ಯ ಮತ್ತು ನೃತ್ಯ ರೂಪಕಗಳ ಪ್ರದರ್ಶನಗಳು ಆಕರ್ಷಕವಾಗಿ ಮೂಡಿಬಂದವು.
ಸುಮಾರು 45 ಬಗೆಗಳ ಆಟಿ ಖಾದ್ಯಗಳನ್ನು ಆಗಮಿಸಿದ ಸರ್ವರಿಗೂ ಬಡಿಸಲಾಯಿತು. ದಂಪತಿಗಳ ನಡಿಗೆ ಮತ್ತು ನೃತ್ಯ ಸ್ಪರ್ಧೆಯಲ್ಲಿ 20ಕ್ಕೂ ಅಧಿಕ ದಂಪತಿ ಭಾಗವಹಿಸಿದ್ದರು.
ಒಕ್ಕಲಿಗರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಕಣ್ಕಲ್, ಗೌರವಾಧ್ಯಕ್ಷ ಗಿರಿಯಪ್ಪ ಗೌಡ ಶಾಂತಿಲ, ಗೌಡರ ಯುವ ವೇದಿಕೆ ಅಧ್ಯಕ್ಷ ದಿನೇಶ್ ಮಾಡ್ತೇಲ್, ಅಕಾಡೆಮಿ ಸದಸ್ಯೆ ಚಂದ್ರಾವತಿ ಬಡ್ಡಡ್ಕ ಇದ್ದರು.ಅಕಾಡೆಮಿ ಸದಸ್ಯೆ ಸಂಚಾಲಕರಾದ ಲತಾಪ್ರಸಾದ್ ಕುದ್ಪಾಜೆ ಸ್ವಾಗತಿದರು. ವಿಟ್ಲ ಗೌಡ ಮಹಿಳಾ ಘಟಕಾಧ್ಯಕ್ಷೆ ಅಮಿತಾಕೃಷ್ಣ ಕುಡಿಪ್ಪಾಡಿಗುತ್ತು ವಂದಿಸಿದರು. ಪ್ರೇಮಲತಾ ಹಡಿಲು, ಪ್ರೇಮಲತಾ ಗಡದಕೋಡಿ, ಪ್ರಮೀಳಾ ಕಾಣಿಚಾರ್ ಪ್ರಾರ್ಥನೆ, ವಿಶ್ವನಾಥ ಕುಳಾಲ್, ತನುಷ ಗಿರಿನಿವಾಸ ನಿರೂಪಣೆಗಳಲ್ಲಿ ಸಹಕರಿಸಿದರು.
