ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಅಬ್ಯಾಕಸ್ ಶಿಕ್ಷಣವೆಂದರೆ ಕೇವಲ ಗಣಿತ ಕಲಿಕಾ ವಿಧಾನವಲ್ಲ. ಮಕ್ಕಳಲ್ಲಿ ಏಕಾಗ್ರತೆ, ಸ್ಮರಣಶಕ್ತಿ, ವೇಗವಾದ ಚಿಂತನಾ ಸಾಮರ್ಥ್ಯ ಹಾಗೂ ಆತ್ಮ ವಿಶ್ವಾಸ ವೃದ್ಧಿಸುವ ಪರಿಣಾಮಕಾರಿ ಶಿಕ್ಷಣ ವ್ಯವಸ್ಥೆಯಾಗಿದೆ ಎಂದು ಶಿಕ್ಷಕಿ ಸ್ನೇಹಾ ಬಿಲವಡಿ ಹೇಳಿದರು.ರಬಕವಿಯ ಸ್ನೇಹಾ ಅಬ್ಯಾಕಸ್ ಶಿಕ್ಷಣ ಸಂಸ್ಥೆಯ 20 ಮಕ್ಕಳು ಚೆನ್ನೈನಲ್ಲಿ ಆಯೋಜಿಸಿದ್ದ ಐಎಸ್ಒ ಇಂಟರ್ನ್ಯಾಶನಲ್ ಅಬ್ಯಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಕೇವಲ ಐದು ನಿಮಿಷಗಳ ಕಾಲಾವಕಾಶದಲ್ಲಿ 50 ಲೆಕ್ಕಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡು ಸಂಸ್ಥೆಯ ಹಾಗೂ ನಗರದ ಕೀರ್ತಿ ಹೆಚ್ಚಿಸಿದ್ದಾರೆ. ಅಬ್ಯಾಕಸ್ ಶಿಕ್ಷಣದಿಂದ ಮಕ್ಕಳಲ್ಲಿ ಗಣಿತ ಗುಮ್ಮನ ಭಯ ನಿವಾರಣೆಯಾಗುವ ಜತೆಗೆ ವೇದಗಣಿತ ತತ್ವಗಳನ್ನು ಅಳವಡಿಸಿಕೊಂಡು ವೇಗವಾಗಿ ಮತ್ತು ದೋಷರಹಿತವಾಗಿ ಲೆಕ್ಕ ಮಾಡುವ ಸಾಮರ್ಥ್ಯ ಹೆಚ್ಚಿಸುತ್ತದೆ. ಏಕಾಗ್ರತೆ, ಸ್ಮರಣಶಕ್ತಿ, ಅಲಿಕಾ ಸಾಮರ್ಥ್ಯ ಹಾಗೂ ತ್ವರಿತವಾಗಿ ದೊಷವಲ್ಲದ ನಿರ್ಧಾರಗಳನ್ನು ಕೈಗೊಳ್ಳುವ ಕೌಶಲ್ಯಗಳು ವೃದ್ಧಿಯಾಗುತ್ತವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಥ ತರಬೇತಿಗಳು ಮಕ್ಕಳ ಸರ್ವಾಂಗೀಣ ಪ್ರಗತಿಗೆ ನೆರವಾಗುತ್ತವೆ ಎಂದರು. ಸಂಸ್ಥೆಯ ನಿರಂತರ ಶೈಕ್ಷಣಿಕ ಸೇವೆ ಗುರುತಿಸಿ ಬೆಸ್ಟ್ ಸೆಂಟರ್ ಪ್ರಶಸ್ತಿ ಲಭಿಸಿದೆ ಎಂದು ಹರ್ಷಿಸಿದರು.
ವಿನಯ ಬಿಲವಡಿ, ವಿವಾನ ವಜ್ರಮಟ್ಟಿ, ವೈಷ್ಣವಿ ಲಿಂಬಿಕಾಯಿ, ಚಾರ್ವಿ ಹರ್ಲಾಪೂರ, ಚೈತ್ರಾ ನಾಯಕ, ಭೀಮಪ್ಪ ನಾಯಕ, ಆರಾಧ್ಯ ಮಹೇಂದ್ರಕರ, ಚಿನ್ಮಯ ಗಡೆನ್ನವರ, ಸಮರ್ಥ ಬಕನೆತ್ತಿ, ಆರತಿ ಗೌಳಿ, ಅದ್ವಿಕ ಮಿರ್ಜಿ, ವರ್ಷ ಗೌಳಿ, ಪಲ್ಲವಿ ನಾಯಕ ಇತರರು ಇದ್ದರು.