ಧಾರವಾಡ:
ಜನಸಂಖ್ಯೆ ತರ್ಕಬದ್ಧಗೊಳಿಸುವ ಹೆಸರಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರನ್ನು ವಜಾಗೊಳಿಸುವ ಆರೋಗ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರದ ನೀತಿ ರದ್ದುಪಡಿಸಲು ಆಗ್ರಹಿಸಿ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಗುರುವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ಸಂಘದ ಜಿಲ್ಲಾಧ್ಯಕ್ಷೆ ಭುವನಾ ಬಳ್ಳಾರಿ, 17 ವರ್ಷಗಳಿಂದ ದುಡಿಸಿಕೊಂಡು ಇದೀಗ ಜನಸಂಖ್ಯೆ, ಶಿಕ್ಷಣ, ಮೌಲ್ಯಮಾಪನ ಇತ್ಯಾದಿಗಳ ಹೆಸರುಗಳಲ್ಲಿ ತೆಗೆದು ಹಾಕುವ ನೀತಿ ಘೋರ ಆಘಾತ ತಂದಿದೆ. 2009ರಲ್ಲಿ ನೇಮಕಾತಿ ಮಾಡಿಕೊಳ್ಳುವಾಗ ಮಾನದಂಡ ಹೇಳದೇ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಕೋವಿಡ್ ಸಮಯದಲ್ಲಿ ಜೀವ ಕೈಯಲ್ಲಿಡಿದು ಸೇವೆ ಮಾಡಿದ್ದಕ್ಕೆ ಸರ್ಕಾರ ಕೊಡುವ ಕೊಡುಗೆ ಇದೆನಾ ಎಂದು ಪ್ರಶ್ನಿಸಿದರು.
ಈ ಹಿಂದೆ ನಡೆಸಿದ ಪ್ರತಿಭಟನೆ ವೇಳೆ ಭರವಸೆ ನೀಡಿದ್ದರಿಂದ ಹೋರಾಟ ಹಿಂಪಡೆಯಲಾಗಿತ್ತು. ಈಗ ಯಾವುದೇ ಭರವಸೆ ಇಲ್ಲವಾದ ಕಾರಣ ನಿರಂತರ ಹೋರಾಟ ಮಾಡುವಂತಾಗಿದೆ. ಉಸ್ತುವಾರಿ ಸಚಿವರು ಕೂಡಲೇ ಮಧ್ಯೆ ಪ್ರವೇಶಸಬೇಕು ಮತ್ತು ಆಶಾ ಕಾರ್ಯಕರ್ತೆಯರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.ಈ ವೇಳೆ ಉಪಾಧ್ಯಕ್ಷೆರಾದ ಶಾಂತಾ ಚವ್ಹಾಣ, ಶಾರದಾ ತಾವರಗೇರಿ, ಶೋಭಾ ಹಿರೇಮಠ, ರಾಧಾ ಕಲ್ಲೂರ, ಸಂಗೀತ ಬೆಂಡಿಗೇರಿ, ಗೀತಾ ಮಲ್ಲನಗೌಡರ, ರತ್ನಾ ಕುಂದಗೋಳ, ಮಂಜುಳಾ ಹರವಿ, ರತ್ನಾ ಎಮೋಜಿ, ಗಾಯತ್ರಿ ಗುಡ್ಡದಕೇರಿ ಇದ್ದರು.