ಏಕ ಬೆಳೆ ಪದ್ಧತಿ ಬಿಟ್ಟು ಬಹುಬೆಳೆ ಬೆಳೆಯಿರಿ: ಗುಡ್ನಾಪುರ

| Published : Feb 08 2024, 01:33 AM IST

ಏಕ ಬೆಳೆ ಪದ್ಧತಿ ಬಿಟ್ಟು ಬಹುಬೆಳೆ ಬೆಳೆಯಿರಿ: ಗುಡ್ನಾಪುರ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಏಕ ಬೆಳೆ ಪದ್ಧತಿ ಬಿಟ್ಟು, ಬಹು ಬೆಳೆ ವಿಧಾನ ಕೈಗೊಳಬೇಕು. ಕೃಷಿ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಉತ್ತಮ ಕೃಷಿ ಮಾಡಬೇಕು.

ಶಿರಸಿ:

ಉತ್ತರ ಕನ್ನಡ ಜಿಲ್ಲಾ ರೈತ ಸಂಘ ಹಾಗೂ ಸಾಂಬಾರು ಮಂಡಳಿ ಆಶ್ರಯದಲ್ಲಿ ತಾಲೂಕಿನ ಕಂಡ್ರಾಜಿ ಮಾರುತಿ ದೇವಸ್ಥಾನದಲ್ಲಿ ನಡೆದ ಏಲಕ್ಕಿ ಮತ್ತು ಕಾಳುಮೆಣಸು ಬೆಳೆಯ ತರಬೇತಿ ಕಾರ್ಯಕ್ರಮವನ್ನು ಭೂ ನ್ಯಾಯ ಮಂಡಳಿ ಸದಸ್ಯ ರವಿ ನಾಯ್ಕ ಗುಡ್ನಾಪುರ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ರೈತರು ಏಕ ಬೆಳೆ ಪದ್ಧತಿ ಬಿಟ್ಟು, ಬಹು ಬೆಳೆ ವಿಧಾನ ಕೈಗೊಳಬೇಕು. ಕೃಷಿ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಉತ್ತಮ ಕೃಷಿ ಮಾಡಬೇಕು. ಭೂ ನ್ಯಾಯ ಮಂಡಳಿ ಸದಸ್ಯನಾಗಿ ರೈತರಿಗೆ, ಕೃಷಿ ಕಾರ್ಮಿಕರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಸಾಂಬಾರು ಮಂಡಳಿಯ ಕ್ಷೇತ್ರಾಧಿಕಾರಿ ಬಾಪುಗೌಡ ಖ್ಯಾತನಗೌಡರ ಮಾತನಾಡಿ, ಶಿರಸಿಯಲ್ಲಿ ೫ ನರ್ಸರಿಗಳಲ್ಲಿ ಗುಣಮಟ್ಟದ ಸಸಿಗಳ ಲಭ್ಯವಿದೆ. ಏಲಕ್ಕಿಯಲ್ಲಿ ಅನೇಕ ತಳಿಗಳಿವೆ. ಮಲಬಾರ ಮತ್ತು ಮೈಸೂರ ತಳಿ ಹೆಚ್ಚಾಗಿ ಬಳಸುತ್ತಾರೆ. ನರ್ಸರಿ ನಿರ್ಮಿಸಿ, ಸಸಿ ಬೆಳೆಸಲು ರೇತಿ, ಗೊಬ್ಬರ, ಮಣ್ಣು ಮಿಶ್ರಣ ಮಾಡಿ ಬೀಜ ಹಾಕಿ ಸಸಿ ಉತ್ಪಾದನೆ ಮಾಡಬಹುದು ಎಂದರು.ಕೃಷಿ ತಜ್ಞ ನಾಗರಾಜ ಹೆಗಡೆ ಮಾತನಾಡಿ, ಏಲಕ್ಕಿ ಬೆಳೆಯನ್ನು ರೈತರು ಉಪಬೆಳೆಯಾಗಿ ಬೆಳಯಬೇಕು. ಇದಕ್ಕೂ ಕೆಲವು ರೋಗಗಳಿವೆ. ಕೊಕ್ಕೆಕಂದು ರೋಗ ಬರದಂತೆ ನೋಡಿಕೊಳ್ಳಬೇಕು. ಕಾಂಡ ರೋಗ, ಸುಳಿ ರೋಗ, ಕೊಳಕು ರೋಗ ಇದ್ದು ಸೂಕ್ತ ಕ್ರಮ ವಹಿಸಿದರೆ ಉತ್ತಮ ಬೆಳೆ ಮಾಡಬಹುದು ಎಂದು ಹೇಳಿದರು.ಕೆನರಾ ಬ್ಯಾಂಕ್ ಮ್ಯಾನೇಜರ್ ಶ್ರೀಧರ ಮಾತನಾಡಿ, ಸರ್ಕಾರ ರೈತರಿಗೆ ಅನೇಕ ಸಾಲ ಸೌಲಭ್ಯ ಒದಗಿಸುತ್ತಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.ಕೋರ್ಲಕಟ್ಟಾದ ವಿಎಸ್‌ಎಸ್ ಬ್ಯಾಂಕ್‌ನ ರಾಜೇಶ ನಾಯ್ಕ ಮಾತನಾಡಿ, ಸರ್ಕಾರದಿಂದ ದೊರೆಯುವ ಸಬ್ಸಿಡಿ ಯೋಜನೆ ಅರ್ಹರಿಗೆ ಸಿಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ರೈತ ಸಂಘದ ತಾಲೂಕಾಧ್ಯಕ್ಷ ರಾಜೇಂದ್ರ ನಾಯ್ಕ ಕಾಯಗುಡ್ಡೆ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಿಂದ ಮೇಲಮಟ್ಟದ ವರೆಗೆ ಉತ್ತಮ ವ್ಯಕ್ತಿಗಳನ್ನು ಆರಿಸಿ ಕಳಿಸಿದರೆ ಉತ್ತಮ ನ್ಯಾಯ ಪಡೆಯಬಹುದು. ರೈತರು ಒಂದಾಗಿ ಸಂಘಟಿತಾರಾಗಬೇಕು, ಆ ಮೂಲಕ ನಮ್ಮ ಸವಲತ್ತು ಪಡೆದುಕೊಳ್ಳಬೇಕು. ವಿವಿಧ ಬೆಳೆ ಮಾಡಿ ನಾವು ಆರ್ಥಿಕ ಕಷ್ಟದಿಂದ ಪಾರಾಗಬೇಕು ಎಂದು ಸಲಹೆ ನೀಡಿದರು.

ನವೀನ ಕಂಡ್ರಾಜಿ ಪ್ರಾಸ್ತಾವಿಕ ಮಾತನಾಡಿದರು. ರೈತ ಸಂಘದ ತಾಲೂಕು ಕಾರ್ಯದರ್ಶಿ ಮಹೇಶ ಕೆ.ಎಂ. ನಿರೂಪಿಸಿದರು. ಸಾಂಬಾರು ಮಂಡಳಿ ಸಿಬ್ಬಂದಿ ರಾಮಕುಮಾರ ಎಸ್. ವಂದಿಸಿದರು.