ಕೊಳತ್ತಮಜಲು ಮಸೀದಿ ಆವರಣದಲ್ಲಿ ಅಬ್ದುಲ್ ರಹಿಮಾನ್ ಅಂತ್ಯಕ್ರಿಯೆ

| Published : May 29 2025, 12:32 AM IST

ಕೊಳತ್ತಮಜಲು ಮಸೀದಿ ಆವರಣದಲ್ಲಿ ಅಬ್ದುಲ್ ರಹಿಮಾನ್ ಅಂತ್ಯಕ್ರಿಯೆ
Share this Article
  • FB
  • TW
  • Linkdin
  • Email

ಸಾರಾಂಶ

ಬಂಟ್ವಾಳದ ಕಾಂಬೋಡಿ ಇರಾಕೋಡಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕೊಳತ್ತಮಜಲು ನಿವಾಸಿ ಅಬ್ದುಲ್ ರಹಿಮಾನ್ ಅವರ ಮೃತದೇಹ ಬುಧವಾರ ಉಳ್ಳಾಲದಿಂದ ಬಂಟ್ವಾಳ ತಾಲೂಕಿನ ಕೊಳತ್ತಮಜಲಿನವರೆಗೆ ಮೆರವಣಿಗೆಯಲ್ಲಿ ಸಾಗಿಸಿ ಬಳಿಕ ಕೊಳತ್ತಮಜಲು ಮಸೀದಿ ಆವರಣದಲ್ಲಿ ದಫನ ಕಾರ್ಯ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಬಂಟ್ವಾಳದ ಕಾಂಬೋಡಿ ಇರಾಕೋಡಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕೊಳತ್ತಮಜಲು ನಿವಾಸಿ ಅಬ್ದುಲ್ ರಹಿಮಾನ್ ಅವರ ಮೃತದೇಹ ಬುಧವಾರ ಉಳ್ಳಾಲದಿಂದ ಬಂಟ್ವಾಳ ತಾಲೂಕಿನ ಕೊಳತ್ತಮಜಲಿನವರೆಗೆ ಮೆರವಣಿಗೆಯಲ್ಲಿ ಸಾಗಿಸಿ ಬಳಿಕ ಕೊಳತ್ತಮಜಲು ಮಸೀದಿ ಆವರಣದಲ್ಲಿ ದಫನ ಕಾರ್ಯ ನಡೆಸಲಾಯಿತು.ಮೃತದೇಹ ಬಿ.ಸಿ.ರೋಡಿಗೆ ಆಗಮಿಸುತ್ತಿದ್ದಂತೆ ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ಜಮಾಯಿಸಿದ್ದರು. ಮನೆಯ ಬಳಿಯೂ ಹೆಚ್ಚಿನ ಸಂಖ್ಯೆಯ ಜನರು ಸೇರಿದ್ದರು.ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಬಿ.ಸಿ.ರೋಡ್‌ ಕೈಕಂಬದ ಎಲ್ಲಾ ಅಂಗಡಿ ಮುಂಗಟ್ಟುಗಳೂ ಸ್ವಯಂಪ್ರೇರಿತವಾಗಿ ಮುಚ್ಚಿದ್ದವು. ಬಿ.ಸಿ.ರೋಡಿನಲ್ಲಿಯೂ ಹೆಚ್ಚಿನ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಪೇಟೆಯಲ್ಲಿ ದಿನವಿಡೀ ಜನಸಂಚಾರವೂ ವಿರಳವಾಗಿತ್ತು.ಫೊಟೋ ವಿಡಿಯೋಗೆ ನಿರ್ಬಂಧ:

ಪಾರ್ಥಿವ ಶರೀರ ಆಗಮನದ ವೇಳೆ ಬಿ.ಸಿ. ರೋಡ್ ಸಮೀಪದ ಕೈಕಂಬದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭ ಫೊಟೋ ಹಾಗೂ ವಿಡಿಯೋಗೆ ನಿರ್ಬಂಧ ವಿಧಿಸಲಾಗಿದ್ದು, ಘಟನೆಯ ಸುದ್ದಿ ಮಾಡಲು ಬಂದ ಮಾಧ್ಯಮ ಪ್ರತಿನಿಧಿಗಳಿಗೂ ಇದರ ಬಿಸಿ ತಟ್ಟಿತು. ದೃಶ್ಯಾವಳಿ ಸೆರೆ ಹಿಡಿಯಲು ಮುಂದಾದ ರಾಷ್ಟ್ರೀಯ ಮಾಧ್ಯಮದ ಕ್ಯಾಮರಾಮೆನ್ ಒಬ್ಬರನ್ನು ಕಾರಿನಿಂದ ಇಳಿಯಲು ಬಿಡದೆ ಮತ್ತೆ ಕಾರಿಗೆ ತಳ್ಳಿದ ಆಕ್ರೋಶಿತ ಗುಂಪು ಬೆದರಿಕೆ ಒಡ್ಡಿತು. ದೃಶ್ಯ ಸೆರೆ ಹಿಡಿಯುತ್ತಿದ್ದ ಪತ್ರಿಕಾ ಛಾಯಾಗ್ರಾಹಕರಿಗೆ ಧಮ್ಮಿ ಹಾಕಲಾಯಿತು. ಪತ್ರಕರ್ತರೊಬ್ಬರ ಮೊಬೈಲ್‌ ಕಸಿದುಕೊಂಡು ಫೋಟೊಗಳನ್ನು ಡಿಲೀಟ್ ಮಾಡಲಾಯಿತು. ಈ ಸಂದರ್ಭ ಮತ್ತೆ ಕೆಲವರು ತಕ್ಷಣ ಪತ್ರಕರ್ತರ ನೆರವಿಗೆ ಧಾವಿಸಿ ಆಕ್ರೋಶಿತರನ್ನು ಸಮಾಧಾನಪಡಿಸಿ ಪತ್ರಕರ್ತರಿಗೆ ರಕ್ಷಣೆ ನೀಡಿದರು. ತಮ್ಮದೇ ವಾಹನದಲ್ಲಿ ಕೆಲ ದೂರದವರೆಗೆ ಹೆದ್ದಾರಿಯಲ್ಲಿ ಕರೆದೊಯ್ದು ಸುರಕ್ಷಿತ ಜಾಗದಲ್ಲಿ ಇಳಿಸಿ ನಿಮ್ಮ ಸ್ವರಕ್ಷಣೆಯತ್ತ ಗಮನ ಹರಿಸಿ, ಅಪಾಯಕಾರಿ ಸ್ಥಳದಲ್ಲಿ ಇರಬೇಡಿ ಎಂದು ಬುದ್ದಿವಾದ ಹೇಳಿದ ವಿದ್ಯಮಾನವೂ ನಡೆಯಿತು.

--------------

15 ಮಂದಿ ವಿರುದ್ಧ ಪ್ರಕರಣಬಂಟ್ವಾಳದ ಕೊಳತ್ತಮಜಲಿನಲ್ಲಿ ನಡೆದ ಅಬ್ದುಲ್ ರಹಿಮಾನ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಯ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಹತ್ಯೆಯ ಸಂದರ್ಭ ಗಾಯಗೊಂಡ ಖಲಂದರ್ ಶಫಿ ಮಾಹಿತಿ ಅನ್ವಯ ನಿಸಾರ್ ಎಂಬವರು ದೂರು ನೀಡಿದ್ದು, ಎಫ್ಐಆರ್ ದಾಖಲಿಸಲಾಗಿದೆ. ರಹಿಮಾನ್ ಪರಿಚಯಸ್ಥರೇ ಆದ ದೀಪಕ್, ಸುಮಿತ್ ಸೇರಿ ಒಟ್ಟು 15 ಜನರ ವಿರುದ್ದ ಎಫ್ಐಆರ್ ದಾಖಲಾಗಿದೆಬಿಎನ್ ಎಸ್ 103, 109, 118(1), 118(2), 190, 191(1), 191(2), 191(3) ನಡಿ ಪ್ರಕರಣ ದಾಖಲಾಗಿದ್ದು, ಅಬ್ದುಲ್ ರಹಿಮಾನ್ ಮತ್ತು ಕಲಂದರ್ ಶಾಫಿ ಅವರು ಪಿಕ್ ಅಪ್ ವಾಹನದಲ್ಲಿ ಮರಳು ಲೋಡ್ ಮಾಡಿ ಕುರಿಯಾಳ ಗ್ರಾಮದ ಇರಾಕೋಡಿಯ ರಾಜೀವಿ ಎಂಬವರ ಮನೆ ಬಳಿ ಇಳಿಸುತ್ತಿದ್ದರು.ಈ ವೇಳೆ ಏಕಾಏಕಿ ದಾಳಿ ನಡೆದಿದ್ದು, ಚಾಲಕನ ಸೀಟಿನಲ್ಲಿದ್ದ ಅಬ್ದುಲ್ ರಹಿಮಾನ್ ಅವರನ್ನು ಹೊರಗೆ ಎಳೆದು ತಲವಾರು,ಚೂರಿ, ರಾಡ್ ಗಳೊಂದಿಗೆ ಯದ್ವಾ- ತದ್ವಾ ದಾಳಿ ಮಾಡಿದ್ದಾರೆ.

ಅಲ್ಲಿದ್ದವರು ಕೂಗಾಡಿದ್ದರಿಂದ ಹಲ್ಲೆ ಮಾಡಿದ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪರಾರಿಯಾಗಿದ್ದಾರೆ. ಹಲ್ಲೆಗೈದವರ ಪೈಕಿ ಇಬ್ಬರು ಪರಿಚಯಸ್ಥರು ಎಂದು ಹಲ್ಲೆಗೊಳಗಾಗಿ ಆಂಬ್ಯುಲೆನ್ಸ್‌ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಕಲಂದ‌ರ್ ಶಾಫಿ ಆಸ್ಪತ್ರೆಗೆ ದಾಖಲಿಸಿದ್ದ ಮುಹಮ್ಮದ್ ನಿಸಾ‌ರ್ ಎಂಬವರಿಗೆ ಮಾಹಿತಿ ನೀಡಿದ್ದು, ಇದನ್ನೇ ದೂರಿನಲ್ಲಿ‌ ಉಲ್ಲೇಖಿಸಲಾಗಿದೆ.

------------------ಕೊಲೆ ಆರೋಪಿಗಳ ಶೀಘ್ರ ಬಂಧನ: ಎಡಿಜಿಪಿ

ಪ್ರಕರಣದ ಎಫ್‌ಐಆರ್ ನಲ್ಲಿ ಎರಡು ಹೆಸರಿದೆ, ಬಂಧನ ಆದ ನಂತರ ಎಲ್ಲಾ ಮಾಹಿತಿ ನೀಡುತ್ತೇವೆ, ಸದ್ಯ ತನಿಖೆ ಪ್ರಗತಿಯಲ್ಲಿದೆ, ಆ ಬಳಿಕ ಮಾಹಿತಿ ನೀಡುತ್ತೇವೆ ಎಂದು ಎಡಿಜಿಪಿ ಆರ್.ಹಿತೇಂದ್ರ ಹೇಳಿದ್ದಾರೆ.ಅಬ್ದುಲ್ ರಹಿಮಾನ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳದಲ್ಲಿ ಮಾತನಾಡಿದ ಅವರು, ಮಂಗಳವಾರ ಅಪರಾಹ್ನ ಮೂರು ಗಂಟೆಗೆ ಘಟನೆ ನಡೆದಿದ್ದು, ರೆಹಮಾನ್ ಮೃತಪಟ್ಟಿದ್ದಾರೆ. ಮಂಗಳೂರು ನಗರ ಹಾಗೂ ದ.ಕ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದೆ. ಅಂತ್ಯ ಸಂಸ್ಕಾರ ಶಾಂತಿಯುತವಾಗಿ ಮುಗಿದಿದ್ದು,ಎಲ್ಲರಿಗೂ ಧನ್ಯವಾದಗಳು ಎಂದರು.

ಉಡುಪಿ, ಚಿಕ್ಕಮಗಳೂರು, ಮೈಸೂರು ಹಾಗೂ ಕಾರವಾರದಿಂದ ಪೊಲೀಸರನ್ನು ಕರೆಸಿದ್ದೇವೆ. ಗಾಳಿ ಸುದ್ದಿಗೆ ಕಿವಿ ಕೊಡದೆ ಸಾರ್ವಜನಿಕರು ಶಾಂತಿ ಕಾಪಾಡಬೇಕು ಎಂದರು.

ಸಾಮಾಜಿಕ ಜಾಲತಾಣಗಳಲ್ಲಿನ ಪ್ರತೀಕಾರದ ಪೋಸ್ಟ್ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದರೆ ಕೆಲವು ನಕಲಿ ಅಕೌಂಟ್ ಇದೆ, ವಿದೇಶದಲ್ಲೂ ಕೂತು ಮಾಡುತ್ತಾರೆ. ಅದೆಲ್ಲ ನಿಜ ಎಂದು ನಂಬಬೇಡಿ, ಪೊಲೀಸ್ ಇಲಾಖೆಯನ್ನು ನಂಬಿ ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳು ಹೆಚ್ಚಾಗುತ್ತಿವೆ. ಅಂಥವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಹತ್ಯೆಯಾದ ವ್ಯಕ್ತಿ ಮರಳು ಕೆಲಸ ಮಾಡುತ್ತಿದ್ದ ಅಷ್ಟೇ. ಸದ್ಯ ಐದು ತಂಡಗಳ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.ಇದು ಪ್ರತಿಕಾರದ ಕೊಲೆನಾ? ಎಂಬ ಪತ್ರಕರ್ತರ ಪ್ರಶ್ನೆಗೆ ವಿಡಂಬನಾತ್ಮಕವಾಗಿ ಉತ್ತರಿಸಿದ ಎಡಿಜಿಪಿ ಅವರು, ದ.ಕ. ಜಿಲ್ಲೆಗೆ ನಾವು ಹೊಸಬರು. ನೀವ್ಯಾರು ಹೊಸಬರು ಅಲ್ಲ. ಜಿಲ್ಲೆಯ ಇತಿಹಾಸ ನಿಮಗೆ ಚೆನ್ನಾಗಿ ಗೊತ್ತಿದೆ. ಪ್ರಶ್ನೆಯ ಜೊತೆಗೆ ಉತ್ತರವೂ ನಿಮಗೆ ಗೊತ್ತಿದೆ, ಈ ಪ್ರಶ್ನೆಗೆ ಉತ್ತರ ಎಲ್ಲರಿಗೆ ಗೊತ್ತಿದೆ ಎಂದು ಹೇಳಿದರು.

............

ಮೂವರು ವಶಕ್ಕೆ!ಬಂಟ್ವಾಳದ ಅಬ್ದುಲ್ ರಹಿಮಾನ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ,ಮೂವರು ಆರೋಪಿಗಳನ್ನು ಬಂಟ್ವಾಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಎಫ್‌ಐ ಆರ್ ನಲ್ಲಿ ಉಲ್ಲೇಖಿಸಿರುವ ದೀಪಕ್ ಸಹಿತ ಮತ್ತಿಬ್ಬರು ಬಂಧಿತರು ಎನ್ನಲಾಗಿದ್ದು, ಪೊಲೀಸರು ಈ ಕುರಿತು ಅಧಿಕೃತ ಮಾಹಿತಿ ನೀಡಿಲ್ಲ.

.........ಬಂಟ್ವಾಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ರಹೀಂ ಹತ್ಯೆ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಾದ್ಯಂತ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು.‌ಸೂಕ್ಷ ಪ್ರದೇಶಗಳಲ್ಲಿ ಹೆಚ್ಚಿನ‌ನಿಗಾ‌ಇರಿಸಲಾಗಿದೆ. ಆಯ ಕಟ್ಟಿನ‌ ಸ್ಥಳಗಳಲ್ಲಿ ವಾಹನ ತಪಾಸಣೆಗಳನ್ನು ನಡೆಸಲಾಗುತ್ತಿದೆ.