ಸಾರಾಂಶ
ಹರಿಹರ : ಹರಿಹರ ಬ್ರಹ್ಮಾನಂದ ಸ್ವಾಮಿ ಮಠಕ್ಕೆ ನೂತನ ಪೀಠಾಧಿಪತಿಯಾಗಿ ಶ್ರಿ ಅಭಿನವ ಕೃಪಾನಂದ ಭಾರತಿ ಸ್ವಾಮೀಜಿ ಅವರನ್ನು ನೇಮಕ ಮಾಡುವ ಮೂಲಕ ಮಂಗಳವಾರ ಅವರಿಗೆ ಪೀಠಾರೋಹಣ ಮಾಡಲಾಯಿತು.
ನಗರದ ಜೆ.ಸಿ. ಬಡಾವಣೆಯ ೫ನೇ ಕ್ರಾಸ್ನ ಸಿದ್ಧಾರೂಢ ಪರಂಪರೆ ಹೊಂದಿರುವ ಶ್ರೀ ಬ್ರಹ್ಮಾನಂದ ಸ್ವಾಮಿ ಮಠದಲ್ಲಿ ಬ್ರಹ್ಮಾನಂದ ಸ್ವಾಮೀಜಿ ಹಾಗೂ ದೊಡ್ಡಮ್ಮನವರ ಶ್ರೀ ಕೃಪಾನಂದ ಭಾರತಿ ಸ್ವಾಮೀಜಿಯವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಹದಡಿ ಶ್ರೀ ಚಂದ್ರಗಿರಿ ಮಠದ ಮುರುಳಿವರ ಸ್ವಾಮೀಜಿ ಅವರಿಂದ ಶ್ರೀ ಅಭಿನವ ಕೃಪಾನಂದ ಭಾರತಿ ಸ್ವಾಮಿಗಳಿಗೆ ಶ್ರೀ ಮಠದ ಲಾಂಛನವಾದ ಜೋಳಿಗೆ, ಬೆತ್ತವನ್ನು ನೀಡುವ ಮುಖಾಂತರ ನೂತನ ಪೀಠಾಧಿಪತಿಯಾಗಿ ನೇಮಕಗೊಂಡು, ಪೀಠಾರೋಹಣ ಮಾಡಿ ಆಶೀರ್ವದಿಸಿದರು.
ಹದಡಿ ಚಂದ್ರಗಿರಿ ಮಠದ ಮುರಳಿ ಸ್ವಾಮೀಜಿ ಮಾತನಾಡಿ, ಶ್ರೀ ಅಭಿನವ ಕೃಪಾನಂದ ಭಾರತಿ ಸ್ವಾಮಿಗಳು ನಿರಂತರ ಶ್ರೀಮಠದ ಭಕ್ತರೊಂದಿಗೆ ಸಂಪರ್ಕದಲ್ಲಿರುವಂತೆ ತಿಳಿಸಿದರು.
ಪ್ರಿಯಾನಂದ ಸ್ವಾಮೀಜಿ ಮಾತನಾಡಿ ಅಭಿನವ ಕೃಪಾನಂದ ಶ್ರೀಗಳು ಶ್ರೀಮಠದ ಕಳಸ ಪ್ರಾಯವಾಗಲಿ ಎಂದು ಆಶಿಸಿದರು.
ಜಗದ್ಗುರು ಶ್ರೀ ಪ್ರಭುಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾತೋಶ್ರೀ ಗೀತಮ್ಮ ತಾಯಿ ಅವರಿಂದ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ಚಾಲನೆ ನೀಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನಡೆಯಿತು. ಶ್ರೀ ಮಠದ ಆಡಳಿತಾಧಿಕಾರಿ ಬಿ. ವಿವೇಕಾನಂದ ಸ್ವಾಮೀಜಿ, ದೇವಾಂಗ ಸಮಾಜದ ಗುರುಗಳಾದ ಮಲ್ಲಿಕಾರ್ಜುನ ಸ್ವಾಮಿ, ಅಕ್ಕನ ಬಳಗದ ರೂಪಕ್ಕ, ಹರಿಹರದ ಕ್ಷೇತ್ರ ಶಿಕ್ಷಣಾಧಿಕಾರಿ ದುರ್ಗಪ್ಪ, ಕೆಪಿಸಿಸಿ ಸದಸ್ಯರಾದ ಬಿ.ರೇವಣಸಿದ್ದಪ್ಪ ಇತರರು ಇದ್ದರು.