ಸಾರಾಂಶ
ರೋಬೋಟಿಕ್ಸ್ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದ್ದು, ವಿದ್ಯಾರ್ಥಿಗಳು ಅದಕ್ಕೆ ಅಗತ್ಯವಾದ ಪರಿಣತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಎಸಿಇ ಡಿಸೈನರ್ಸ್ ಲಿಮಿಟೆಡ್ ಮುಖ್ಯಸ್ಥ ಕಾಶೀನಾಥ ಎಂ.ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.
ಕಿವಿಮಾತು । ಬೀಳ್ಕೊಡುಗೆ ಸಮಾರಂಭ
ದಾವಣಗೆರೆ: ರೋಬೋಟಿಕ್ಸ್ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದ್ದು, ವಿದ್ಯಾರ್ಥಿಗಳು ಅದಕ್ಕೆ ಅಗತ್ಯವಾದ ಪರಿಣತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಎಸಿಇ ಡಿಸೈನರ್ಸ್ ಲಿಮಿಟೆಡ್ ಮುಖ್ಯಸ್ಥ ಕಾಶೀನಾಥ ಎಂ.ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.ನಗರದ ಜಿಎಂಐಟಿ ತಾಂತ್ರಿಕ ಮಹಾ ವಿದ್ಯಾಲಯದ ಹಾಲಮ್ಮ ಸಭಾಂಗಣದಲ್ಲಿ ಗುರುವಾರ ರೋಬೋಟಿಕ್ ಅಂಡ್ ಆಟೋಮೇಷನ್ ಎಂಜಿನಿಯರಿಂಗ್ ವಿಭಾಗದ ರೋಬೋವರ್ಸ್ ಫೋರಂ ಸಮಾರೋಪ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಗೊಡುಗೆ ಸಮಾರಂಭದಲ್ಲಿ ಮಾತನಾಡಿ, ರೋಬೋಟಿಕ್ಸ್ ಅಂಡ್ ಆಟೋಮೇಷನ್ ಎಂಜಿನಿಯರಿಂಗ್ ಪದವೀಧರರು ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳುವತ್ತ ಗಮನ ಕೇಂದ್ರೀಕರಿಸಿ ಎಂದರು.
ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಂಡು, ಕೌಶಲ್ಯ ಅಭಿವೃದ್ಧಿ ಹೊಂದಬೇಕು. ಸೆಮಿಸ್ಟರ್ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆಯುವುದರ ಜತೆಗೆ ಹೆಚ್ಚು ಹೆಚ್ಚು ಕ್ರಿಯಾಶೀಲತೆಯನ್ನು, ಹೊಸ ಹೊಸ ಆಲೋಚನೆಗಳನ್ನು ಮಾಡುವ ಮೂಲಕ ಅವುಗಳನ್ನು ಕಾರ್ಯ ರೂಪಕ್ಕೆ ತರುವತ್ತ ಗಮನ ಕೇಂದ್ರೀಕರಿಸಬೇಕು ಎಂದು ಹೇಳಿದರು.ಕಾಲೇಜು ಪ್ರಾಚಾರ್ಯ ಡಾ.ಎಂ.ಬಿ.ಸಂಜಯ್ ಪಾಂಡೆ ಮಾತನಾಡಿ, ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು. ಇದೇ ವೇಳೆ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ವಿವಿಧ ಕಂಪನಿ ಸಂದರ್ಶನದಲ್ಲಿ ಆಫರ್ ಲೆಟರ್ಸ್ ಪಡೆದ ವಿದ್ಯಾರ್ಥಿಗಳಿಗೆ ಮೆಚ್ಚುಗೆ ಪ್ರಮಾಣಪತ್ರ ನೀಡಿ ಶುಭಾರೈಸಲಾಯಿತು. ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಸಂತೋಷದಿಂದ ಪಾಲ್ಗೊಂಡಿದ್ದರು.
ವಿಭಾಗ ಮುಖ್ಯಸ್ಥ ಡಾ.ಡಿ.ಜಿ.ರಾಜಕುಮಾರ, ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ಟಿ.ಆರ್.ತೇಜಸ್ವಿ ಕಟ್ಟಿಮನಿ, ವಿಭಾಗದ ಅಧ್ಯಾಪಕರು ಮತ್ತು ಫೋರಂ ಸಂಯೋಜಕ ಡಾ.ಬಿ.ಎ.ಮುದಸರ್ ಪಾಶ, ವಿಭಾಗದ ಎಲ್ಲಾ ಅಧ್ಯಾಪಕ ವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.