ಕೆಲಸ ನಿಲ್ಲಿಸದಂತೆ ಪೌರಕಾರ್ಮಿಕರಿಗೆ ಎಸಿ ಮನವಿ

| Published : May 28 2025, 11:49 PM IST

ಸಾರಾಂಶ

ಪೌರಕಾರ್ಮಿಕರು ಸಾರ್ವಜನಿಕ ಸೇವೆ ನಿಲ್ಲಿಸಬೇಡಿ, ಮಳೆಗಾಲ ಪ್ರಾರಂಭವಾಗಿದೆ, ಜೊತೆಗೆ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಈ ವೇಳೆ ತಮ್ಮ ಸೇವೆ ಅತ್ಯವಶ್ಯಕವಾಗಿದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಪೌರಕಾರ್ಮಿಕರು ಸಾರ್ವಜನಿಕ ಸೇವೆ ನಿಲ್ಲಿಸಬೇಡಿ, ಮಳೆಗಾಲ ಪ್ರಾರಂಭವಾಗಿದೆ, ಜೊತೆಗೆ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಈ ವೇಳೆ ತಮ್ಮ ಸೇವೆ ಅತ್ಯವಶ್ಯಕವಾಗಿದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು. ನಗರಸಭೆ ಆವರಣದಲ್ಲಿ ಬುಧವಾರ ಮುಷ್ಕರ ನಿರತ ಪೌರಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದ ಸ್ವಚ್ಛತೆ, ಬೀದಿ ದೀಪಗಳ ಅಳವಡಿಕೆ, ಕಸ ಸಂಗ್ರಹ ಮುಂತಾದ ಸೇವೆ ನೀಡುತ್ತಿರುವ ನಿಮ್ಮೊಂದಿಗೆ ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತಗಳು ಇವೆ. ನಿಮ್ಮ ನ್ಯಾಯಯುತ ಬೇಡಿಕೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ. ಸರ್ಕಾರ ಕೂಡಲೇ ಸೂಕ್ತವಾದ ನಿರ್ಧಾರ ಕೈಗೊಂಡು ತಮ್ಮ ಬೇಡಿಕೆಗಳನ್ನು ಈಡೇರಿಸಲಿದೆ ಆದ್ದರಿಂದ ಪುನಃ ಎಲ್ಲ ಸಾರ್ವಜನಿಕ ಸೇವೆಗಳನ್ನು ಮೊದಲಿನಂತೆ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.

ಪೌರಕಾರ್ಮಿಕರು ಸಲ್ಲಿಸುತ್ತಿರುವ ಸೇವೆಗಳು ಅವಶ್ಯವಾಗಿದೆ. ನಿತ್ಯದ ಜನಜೀವನ ಸಲೀಸಾಗಿ ನಡೆಯಲು ಪೌರಕಾರ್ಮಿಕರ ಸೇವೆಗಳು ಅವಶ್ಯವಾಗಿದೆ. ಅದರಂತೆ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಕೂಡಲೇ ಪೂರ್ಣಗೊಳಿಸಲಿದೆ ಎಂಬ ನಂಬಿಕೆ ಇದೆ. ಆದ್ದರಿಂದ ಸಾರ್ವಜನಿಕ ಸೇವೆ ಸ್ಥಗಿತಗೊಳಿಸಬಾರದು ಎಂದು ಹೇಳಿದರು. ತಹಸೀಲ್ದಾರ್ ಸದಾಶಿವ ಮಕ್ಕೊಜಿ, ಪೌರಾಯುಕ್ತ ಜ್ಯೋತಿ ಗಿರೀಶ, ಪೌರನೌಕರ ಸಂಘದ ಅಧ್ಯಕ್ಷ ರಾಘವೇಂದ್ರ ಕಡಕೋಳ, ಉಪಾಧ್ಯಕ್ಷ ಶ್ರೀಶೈಲ ಹವಾರಿ, ಕಾರ್ಯದರ್ಶಿ ಅನೀಲ ಜೀರಗಾಳ, ಖಜಾಂಚಿ ವಿಜಯ ಬೀಳಗಿ, ಸಂ.ಕಾರ್ಯದರ್ಶಿ ಯಲ್ಲಪ್ಪ ಬಿದರಿ ಸೇರಿದಂತೆ ಸಂಘಟನೆಯ ಸದಸ್ಯರು ಪದಾಧಿಕಾರಿಗಳು ಇದ್ದರು.