ಬಳ್ಳಾರಿ: ತಾಲೂಕಿನ ಪರಮದೇವನಹಳ್ಳಿ ಬಳಿ ಯೋಧರಿಗೆ ಪ್ಯಾರಾಚೂಟ್ ತರಬೇತಿ ವೇಳೆ ಅವಘಡ ಸಂಭವಿಸಿದ್ದು, ಸೇನಾ ಕರ್ನಲ್ ಚಿನ್ನರಾಜ್‌ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ಯಾರಾಚೂಟ್ ತರಬೇತಿ ವೇಳೆ ನಿಯಂತ್ರಣ ತಪ್ಪಿ ಸುಮಾರು 50 ಅಡಿ ಎತ್ತರದಿಂದ ಚಿನ್ನರಾಜ್ ಕೆಳಗೆ ಬಿದ್ದಿದ್ದು, ಕೂಡಲೇ ಅವರನ್ನು ಬಳ್ಳಾರಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಬಳಿಕ ಅವರನ್ನು ಸೇನಾ ಹೆಲಿಕಾಪ್ಟರ್ ಮೂಲಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸೇನಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪರಮದೇವನಹಳ್ಳಿ ಬಳಿ ಅನೇಕ ವರ್ಷಗಳಿಂದ ಸೇನಾ ಸಿಬ್ಬಂದಿಗೆ ಪ್ಯಾರಾಚೂಟ್ ತರಬೇತಿ ನೀಡಲಾಗುತ್ತಿದೆ. ಸುಮಾರು 400ಕ್ಕೂ ಅಧಿಕ ಸೈನಿಕರು ಪ್ಯಾರಾಚೂಟ್ ಧರಿಸಿ ಆಗಸದಿಂದ ಜಿಗಿಯುವ ತರಬೇತಿ ಪಡೆಯುತ್ತಿದ್ದರು. ಇದೇ ವೇಳೆ ಸೇನಾ ಕರ್ನಲ್ ಸಹ ಆಗಸದಿಂದ ಜಿಗಿಯುವ ವೇಳೆ ತಾಂತ್ರಿಕ ಸಮಸ್ಯೆಯಿಂದ ಕೆಳಗೆ ಬಿದ್ದಿದ್ದಾರೆ.

ಕೂಡಲೇ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬೆಂಗಳೂರಿಗೆ ಏರ್‌ಲಿಫ್ಟ್‌ ಮಾಡಲಾಗಿದೆ. ಮೇಲಿಂದ ಕೆಳಗೆ ಬಿದ್ದಿದ್ದರಿಂದ ಸೇನಾ ಕರ್ನಲ್ ಗೆ ಮೂಳೆ ಮುರಿತವಾಗಿದೆ ಎಂದು ಪೊಲೀಸರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಪ್ಯಾರಾಚೂಟ್ ತರಬೇತಿ ವೇಳೆ ಕೆಳಗೆ ಬಿದ್ದ ಸೇನಾ ಕರ್ನಲ್ ಚಿನ್ನರಾಜ್ ಅವರನ್ನು ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು.