ಸಾಧಿಸುವ ಛಲ, ಗುರಿ ಇದ್ದರೆ ಯಾವ ಕ್ಷೇತ್ರದಲ್ಲಾಗಲಿ ಸಾಧನೆ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾಜ ಸೇವಕ, ಅಂತಾರಾಷ್ಟ್ರೀಯ ದೇಹಧಾರ್ಡ್ಯ ಪಟು ಜಿಮ್ ರವಿ ಅವರ ಜೀವನ ಕುರಿತ ‘ರವಿ ನೀನು ಆಗಸದಲ್ಲಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಧಿಸುವ ಛಲ, ಗುರಿ ಇದ್ದರೆ ಯಾವ ಕ್ಷೇತ್ರದಲ್ಲಾಗಲಿ ಸಾಧನೆ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾಜ ಸೇವಕ, ಅಂತಾರಾಷ್ಟ್ರೀಯ ದೇಹಧಾರ್ಡ್ಯ ಪಟು ಜಿಮ್ ರವಿ ಅವರ ಜೀವನ ಕುರಿತ ‘ರವಿ ನೀನು ಆಗಸದಲ್ಲಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬಡತನ ಇದ್ದರೂ ಸಾಧಿಸುವವರಿಗೆ ಅದು ಅಡ್ಡಿಯಾಗುವುದಿಲ್ಲ. ಅದಕ್ಕೆ ಸಾಕ್ಷಿ ಜಿಮ್ ರವಿ. ಕೋಲಾರದ ಕಠಾರಿಪಾಳ್ಯದಲ್ಲಿ ಹುಟ್ಟಿ ಪೋಲಿಯಾಗಬೇಕಾಗಿದ್ದ ರವಿ, ಅವರ ತಾಯಿಯ ಮಾತನ್ನು ಕೇಳಿ ತನ್ನ ಜೀವನದ ದಿಕ್ಕನ್ನೇ ಬದಲಾಯಿಸಿಕೊಂಡರು. ಅವರ ತಾಯಿಯು ಹೇಳಿದ ಒಳ್ಳೆಯ ಮಾತುಗಳಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದರು. ಯುವಕರು ರವಿ ಅವರ ಜೀವನದ ಕುರಿತ ಈ ಪುಸ್ತಕವನ್ನು ಕೊಂಡು ಓದಬೇಕು, ರವಿ ಉತ್ತಮ ದೇಹದಾರ್ಢ್ಯಪಟುವಾದ್ದರಿಂದ 110ಕ್ಕೂ ಹೆಚ್ಚು ಚಿನ್ನದ ಪದಕ ಗೆದ್ದಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ಮಾತನಾಡುತ್ತಿದ್ದಂತೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಶಿಫಾರಸು ಮಾಡಿ ಎಂದು ಪ್ರೇಕ್ಷಕರು ಒತ್ತಾಯಿಸಿದಾಗ, ನಾನು ಮುಖ್ಯಮಂತ್ರಿ ಅಲ್ಲ, ಮುಖ್ಯಮಂತ್ರಿ ಆಗಿದ್ದಾಗ ಹೇಳಿದ್ದರೆ ಕೊಡಿಸುತ್ತಿದ್ದೆ. ಈಗ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹೇಳಿ ಶಿಫಾರಸು ಮಾಡುವೆ ಎಂದು ಹೇಳಿದರು.ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಪುಸ್ತಕಗಳನ್ನು ಹೆಚ್ಚು ಪ್ರೀತಿಸುವವರು ಅಮೆರಿಕಾದವರು, ಅದನ್ನು ಹೊರತುಪಡಿಸಿದರೆ, ರಾಜ್ಯದಲ್ಲಿ ಮಾತ್ರ ಪುಸ್ತಕ ಬಿಡುಗಡೆಗೆ ಇಷ್ಟೊಂದು ಜನ ಸೇರುವುದು. ಹಾಗಾಗಿ ಪುಸ್ತಕ ಪ್ರೀತಿ ಇನ್ನೂ ನಿಮ್ಮಲ್ಲಿ ಉಳಿದಿರುವುದಕ್ಕೆ ಸಂತಸ ತಂದಿದೆ ಎಂದರು.
ಕೃಷಿ ಸಚಿವ ನರೇಂದ್ರಸ್ವಾಮಿ ಮಾತನಾಡಿ, ಜಿಮ್ ರವಿ ನನ್ನ ಸ್ನೇಹಿತ, ಎಲ್ಲಾ ವಿಷಯಗಳಲ್ಲೂ ಪ್ರಾಮಾಣಿಕ ವ್ಯಕ್ತಿ, ಕೇವಲ ನೈಸರ್ಗಿಕವಾಗಿ ಆಹಾರ ಸೇವಿಸಿ ದೇಹದಾರ್ಢ್ಯ ಪಟುವಾಗಿರುವುದು ಸುಲಭವಲ್ಲ. ಆ ಕ್ಷೇತ್ರದಲ್ಲಿದ್ದರೂ ಅಹಂ ಇಲ್ಲ ಎಂದರು. ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಜಿಮ್ ರವಿ ಹಾಸ್ಯ ಪ್ರಸಂಗಗಳನ್ನು ಹೇಳಿ ಪ್ರೇಕ್ಷಕರು ನಗೆಗಡಲಲ್ಲಿ ತೇಲುವಂತೆ ಮಾಡಿದರು.ವಿಮರ್ಶಕ ಬಂಜಗೆರೆ ಜಯಪ್ರಕಾಶ್ ಪುಸ್ತಕದ ಬಗ್ಗೆ ಮಾತನಾಡಿ, ಇದು ರಮ್ಯವಾದ ಪುಸ್ತಕ ಪ್ರತಿಯೊಂದು ಪ್ರಸಂಗಗಳನ್ನು ಬಹಳ ರಸವತ್ತಾಗಿ ವಿವರಿಸಿ ಬರೆದಿದ್ದಾರೆ. ಮಸಾಲೆ ದೋಸೆ ಪ್ರಸಂಗವಂತೂ ಯಾವುದೇ ಸುಂದರ ಯುವತಿಯ ಸೌಂದರ್ಯವನ್ನು ವರ್ಣಿಸಿದಂತೆ ವಿವರಿಸಿರುವುದು ಸೊಗಸಾಗಿದೆ ಎಂದರು. ಲೇಖಕ ಡಾ.ಮಂಜನಾಥ ಮಾಗೋದಿ, ಚಲನಚಿತ್ರ ನಿರ್ದೇಶಕ ಎಸ್.ನಾರಾಯಣ್, ಸಾಹಿತಿ ಎಲ್.ಎನ್.ಮುಕುಂದರಾಜ್ ಹಾಗೂ ಜಿಮ್ ರವಿ ಅಭಿಮಾನಿಗಳಿದ್ದರು.