ಸಾರಾಂಶ
ಹೊಸದುರ್ಗದ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪ್ರಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತರಾದ ಆರ್.ಲಕ್ಷ್ಮಯ್ಯ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ಆತ್ಮವಿಶ್ವಾಸ ಹಾಗೂ ನಂಬಿಕೆ ಇದ್ದಲ್ಲಿ ಮಾತ್ರ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.ಹೊಸದುರ್ಗದ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪ್ರಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತರಾದ ಆರ್.ಲಕ್ಷ್ಮಯ್ಯ ಅವರಿಗೆ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಆರ್.ಲಕ್ಷ್ಮಯ್ಯ ಅವರು ಸರ್ಕಾರಿ ನೌಕರಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿದ್ದಾರೆ. ಅವರು ಮುಂದಿನ ದಿನದಲ್ಲಿ ಮತ್ತಷ್ಟು ಸಮಾಜಮುಖಿ ಸೇವೆ ಮಾಡುವ ಮೂಲಕ ಸಮಾಜಕ್ಕೆ ಹೆಚ್ಚಿನ ಕೊಡುಗೆ ಕೊಡಬೇಕು. ಯಾವುದೇ ವ್ಯಕ್ತಿ ಏನಾದರೂ ಸಾಧನೆ ಮಾಡಬೇಕೆಂದು ಬಯಸುತ್ತಾರೆ. ಆ ಬಯಕೆ ಈಡೇರಿಕೆಗೆ ತಮ್ಮದೇ ಆದ ಜ್ಞಾನ ವಿವೇಕ ಇಟ್ಟುಕೊಂಡು ಬೆಳೆಯಬೇಕಾಗುತ್ತದೆ ಎಂದರು.ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ಶ್ರೀನಿವಾಸ್ ಮಾತನಾಡಿ, ಲಕ್ಷ್ಮಯ್ಯ ವಯೋನಿವೃತ್ತರಾದರೂ ಇನ್ನೂ ಯುವಕರಂತೆ ಇದ್ದಾರೆ. ಸರ್ಕಾರಿ ಸೇವೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿದ್ದಾರೆ ಎಂದರು.
ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎಚ್ ಬಿಲ್ಲಪ್ಪ ಮಾತನಾಡಿ, ಲಕ್ಷ್ಮಯ್ಯ ಅವರು ಸದಾಕಾಲ ಲವಲವಿಕೆಯಿಂದ ಜೀವನ ನಡೆಸುತ್ತಿರುವುದರಿಂದ ಅವರ ಆರೋಗ್ಯ ಹೆಚ್ಚಾಗಿದೆ. ಹಾಗೆಯೇ ಅವರ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸುವ ಗುಣ ಇರುವುದರಿಂದ ಅವರು ಪ್ರತಿ ಜೀವನವನ್ನು ಉತ್ತಮವಾಗಿ ನಿಭಾಯಿಸಿ ಇಂದು ನಿವೃತ್ತರಾಗುತ್ತಿದ್ದು, ಅವರ ಸೇವೆ ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು ಹೇಳಿದರು.ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ಪಿ.ಕೆ.ಪರಪ್ಪ, ಆಡಿಟರ್ ಮಲ್ಲೇಶಪ್ಪ, ಕೆಇಬಿ ಎಂಜಿನಿಯರ್ ಜಯಣ್ಣ, ಉಪನ್ಯಾಸಕರಾದ ಕಾಂತರಾಜು, ಜಗದೀಶ್, ಬಿ.ಪಿ.ಓಂಕಾರಪ್ಪ, ತಾಲೂಕಿನ ನೌಕರರು ಇದ್ದರು.