ಕನ್ನಡಪ್ರಭ ವಾರ್ತೆ ನಾಗಮಂಗಲ

ಮಹಿಳೆಯರಿಗೆ ಮೊದಲಿನಿಂದಲೂ ಸಮಾನತೆ ಸಿಕ್ಕಿದ್ದರೆ ಇಂದು ಪುರುಷರೇ ಸಮಾನತೆಗಾಗಿ ಅವಕಾಶ ಕೋರುವ ಸನ್ನಿವೇಶ ನಿರ್ಮಾಣವಾಗುತ್ತಿತ್ತು ಎಂದು ಹಿರಿಯ ಪತ್ರಕರ್ತೆ ಕೃಷ್ಣಿ ಶಿರೂರು ಅಭಿಪ್ರಾಯಪಟ್ಟರು.

ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದಿಂದ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಇಂದು ಪ್ರತಿ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮೆರೆದು ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಆ ಸಾಧನೆಗಳೆಲ್ಲವು ಸ್ವ-ಸಾಮರ್ಥ್ಯದಿಂದ ಆಗಿರುವ ಸಾಧನೆಗಳು. ಆ ಸಾಧನೆಗೆ ಬೆಲೆ ಕಟ್ಟಲಾಗುವುದಿಲ್ಲ ಎಂದರು.

ಮಹಿಳೆಯರಿಗೆ ಅಸಾಧ್ಯವೆಂಬುದು ಯಾವುದೂ ಇಲ್ಲ. ಮಹಿಳೆ ಯಶಸ್ವಿಯಾಗಬೇಕಾದರೆ ಆರೋಗ್ಯ ಸಹನೆ ತಾಳ್ಮೆ ಮತ್ತು ತನ್ನನ್ನು ತಾನೇ ಕಾಳಜಿವಹಿಸಬೇಕು. ಅತ್ಮಸ್ಥೈರ್ಯ ಮನೋಬಲ ಹೆಚ್ಚಿಸಿಕೊಂಡರೆ ಮಹಿಳೆಯರು ಮತ್ತಷ್ಟು ದಕ್ಷತೆಯಿಂದ ಕೆಲಸ ನಿರ್ವಹಿಸಬಹುದು. ಇದೆಲ್ಲ ಇದ್ದರೂ ಕೂಡ ಇಂದು ಮಹಿಳೆಯರ ಪಾಲಿಗೆ ಸಾಮಾಜಿಕ ಜಾಲತಾಣ ಕಂಟಕಪ್ರಾಯವಾಗಲಿದೆ ಎಂದರು.

12ನೇ ಶತಮಾನದಲ್ಲಿ ಬಸವಣ್ಣ ಅವರು ಮಹಿಳೆಯರಿಗೆ ಸಮಾನತೆ ಕಲ್ಪಿಸಿಕೊಟ್ಟಿದ್ದರು. ಆದರೆ, 21ನೇ ಶತಮಾನದಲ್ಲಿಯೂ ಕೂಡ ಮಹಿಳೆಯರಿಗೆ ರಾಜಕೀಯವಾಗಿ ಸಮಾನತೆ ಕಾಣ ಸಿಗುತ್ತಿಲ್ಲ. ಮಹಿಳೆ ಸಾಧನೆಯ ಶಿಖರವೇರಿ ಎಲ್ಲಾ ಕ್ಷೇತ್ರಗಳಲ್ಲಿ ವೈಯಕ್ತಿಕ ಛಾಪು ಮೂಡಿಸಿದ್ದರೂ ಸಹ ಇಂದಿಗೂ ಮಹಿಳೆ ಶೋಷಣೆಗೆ ಒಳಗಾಗುತ್ತಿದ್ದಾಳೆ. ನಮ್ಮ ಹಕ್ಕನ್ನು ನಾವು ಪಡೆದು ಪುರುಷರಿಗೆ ಸಮಾನವಾಗಿ ಬಾಳಲು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಬೇಕು ಎಂದರು.


ಮಹಿಳೆ ಅಬಲೆಯಲ್ಲ ಸಬಲೆ ಎಂದು ಸಾಬೀತು ಮಾಡಿದ್ದರೂ ಕೂಡ ಅವಳ ರಕ್ಷಣೆ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾಳೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಮಹಿಳೆಯರು ಯೋಗಾಭ್ಯಾಸದೊಂದಿಗೆ ತಮ್ಮ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದರು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್ ಮಾತನಾಡಿ, ಶಿಕ್ಷಣ ಕಲೆ ಆರೋಗ್ಯ ಸಂಸ್ಕೃತಿ ಸಾಹಿತ್ಯ ವಿಜ್ಞಾನ ತಂತ್ರಜ್ಞಾನ ಬಾಹ್ಯಾಕಾಶ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಪುರುಷರಿಗೆ ಸಮಾನರಾಗಿ ಸಾಧನೆ ಮಾಡಿ ಛಾಪು ಮೂಡಿಸಿದ್ದಾರೆ. ಇಂದು ಮಹಿಳೆಯರಿಗೆ ನೈತಿಕವಾಗಿ ಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದರು.

ಮಹಿಳೆಯರು ಕುಟುಂಬದ ಜೊತೆಗೆ ನಾಡು ದೇಶ ವಿಶ್ವ ಕಟ್ಟುವ ಕೆಲಸದಲ್ಲಿ ತಮ್ಮದೆ ಆದ ಕೊಡುಗೆ ನೀಡುತ್ತಿದ್ದಾರೆ. ಇಂತಹ ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ನಿರ್ಭೀತಿಯಿಂದ ಸ್ವತಂತ್ರವಾಗಿ ಕೆಲಸ ಮಾಡುವಂತಹ ವಾತಾವರಣ ನಿರ್ಮಾಣ ಮಾಡುವುದು ಪುರುಷರ ಆದ್ಯ ಕರ್ತವ್ಯ ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ನಾಗೇಶ್ ಮಾತನಾಡಿದರು. ವೇದಿಕೆಯಲ್ಲಿ ಶಿಕ್ಷಕಿಯರೂ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಮಹಿಳಾ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಲೋಕೇಶ್, ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಂಜುನಾಥ್, ದೈಹಿಕ ಶಿಕ್ಷಕಿ ರತ್ನ, ನ್ಯಾಯಾಂಗ ಇಲಾಖೆಯ ರೂಪ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲೆ ಆಶಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.