ಸಾರಾಂಶ
- ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಂಸಾರ ನಿರ್ವಹಣೆ, ಮಕ್ಕಳ ಪಾಲನೆಗೆ ಸೀಮಿತವಾಗಿದ್ದ ಮಹಿಳೆಯರು ಇಂದು ಸಮಾಜದ ಒಂದಿಲ್ಲೊಂದು ರಂಗಗಳಲ್ಲಿ ಮುಕ್ತವಾಗಿ ತೊಡಗಿಸಿಕೊಂಡು ಸಾಧನೆ ಮಾಡುತ್ತಿದ್ದಾರೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಹೇಳಿದರು.ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಸಹೋದರತ್ವ ಸಮಿತಿ 10ನೇ ವರ್ಷದ ಸಂಭ್ರಮಾಚರಣೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರಸ್ತುತ ಹೆಣ್ಣು ಶಿಕ್ಷಣ, ಗಾಯನ, ಸರ್ಕಾರದ ವಿವಿಧ ಹುದ್ದೆ ಅಲ್ಲದೇ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಲು ಪರಿಶ್ರಮವೇ ಮೂಲ ಕಾರಣ. ದೈನಂದಿನ ಕುಟುಂಬದ ನಿರ್ವಹಣೆ ಜೊತೆಗೆ ಸಮಾಜ ಉದ್ದಾರಮಾಡಲು ಆತ್ಮಶಕ್ತಿ ಅಗತ್ಯ, ಹೀಗಾಗಿ ಹೆಣ್ಣು ಹಿಂಜರಿಕೆ ಹೊಂದದೇ ಗುರಿಯತ್ತ ಸಾಗಬೇಕು ಎಂದರು.ಸ್ವಾತಂತ್ರ್ಯ ಪೂರ್ವಕ್ಕೂ ಮುನ್ನ ಜನಿಸಿದ ಸಾವಿತ್ರಿಬಾಯಿ ಪುಲೆ ಪ್ರತಿ ಹೆಣ್ಣಿಗೆ ಆದರ್ಶವಾಗಿದ್ದಾರೆ. ಆ ಕಾಲಘಟ್ಟದಲ್ಲಿ ಹೆಣ್ಣಿಗೆ ವಿದ್ಯೆ ಎಂಬುದು ಮರೀಚಿಕೆಯಾಗಿತ್ತು. ಆ ವೇಳೆ ಬಾಲ್ಯದಲ್ಲೇ ವಿವಾಹವಾಗಿದ್ದ ಸಾವಿತ್ರಿಬಾಯಿ ಗಂಡನ ಸಹಕಾರದಿಂದ ವಿದ್ಯಾಭ್ಯಾಸ ಪೂರೈಸಿ, ಬಡ ಹೆಣ್ಣು ಮಕ್ಕಳ ಓದಿಗೆ ಸಹಕರಿಸಿ ದೇಶದ ಮೊದಲ ಶಿಕ್ಷಕಿಯಾದರು ಎಂದು ಹೇಳಿದರು.ಓದಿನ ವಯಸ್ಸಿನಲ್ಲಿ ವಿದ್ಯಾರ್ಥಿನಿಯರು ಬೇರೆ ಹವ್ಯಾಸದ ಕಡೆ ಗಮನಹರಿಸಬಾರದು. ತದನಂತರ ಆಸಕ್ತಿ ಹೊಂದಿರುವ ಚಟುವಟಿಕೆಗಳಲ್ಲಿ ಭಾಗಿಯಾಗಿ, ಅಂಬೇಡ್ಕರ್ ಚಿಂತನೆಯಂತೆ ನಮ್ಮ ಬಾಳಿಗೆ, ನಾವೇ ಶಿಲ್ಪಿ ಗಳೆಂಬ ತತ್ವ ಮೈಗೂಡಿಸಿ ಕೊಂಡು ಮುನ್ನಡೆದರೆ ಬದುಕು ಹಸನಾಗುವುದರಲ್ಲಿ ಸಂಶಯವಿಲ್ಲ ಎಂದರು.ಬಿಎಸ್ಪಿ ಮುಖಂಡ ಕೆ.ಆರ್. ಗಂಗಾಧರ್ ಮಾತನಾಡಿ, ಯಾವುದೇ ಜಾತಿ, ಧರ್ಮವಿಲ್ಲದೇ, ಉತ್ತಮ ವಿಚಾರೆಧಾರೆಯಿಂದ ಸಹೋದರತ್ವ ಸಮಿತಿ ಸ್ಥಾಪಿತಗೊಂಡಿದೆ. 50ಕ್ಕೂ ಹೆಚ್ಚು ಜನಾಂಗ ಒಗ್ಗಟ್ಟಿನಿಂದ ಕೂಡಿದೆ. ಜೊತೆಗೆ ಪ್ರತಿ ಶನಿವಾರ ಸಭೆ ಕರೆದು ಕುಂದುಕೊರತೆ, ವಿಚಾರ ವಿನಿಮಯ ನಡೆಸುತ್ತಿದೆ ಎಂದು ತಿಳಿಸಿದರು.
ಪತ್ರಕರ್ತ ಅನಿಲ್ ಆನಂದ್ ಮಾತನಾಡಿ, ಹಿಂದೆ ಮಹಿಳೆಯರು ಮನೆಯಿಂದ ಹೊರಗೆ ಬರುವುದು ಕಷ್ಟಸಾಧ್ಯವಾಗಿತ್ತು. ಕಾಲ ಕ್ರಮೇಣ ಮಹಾತ್ಮರ ವಿಚಾರಧಾರೆಗಳಿಂದ ಇಂದು ಪ್ರತಿ ಕ್ಷೇತ್ರಗಳಲ್ಲಿ ಹೆಣ್ಣು ಭಾಗಿಯಾಗಿ ಕರ್ತವ್ಯ ನಿರ್ವಹಿಸಲು ಕಾರಣವಾಗಿದ್ದಾರೆ ಎಂದು ತಿಳಿಸಿದರು.ಇದೇ ವೇಳೆ ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಜಿಲ್ಲಾ ಸಹೋದರತ್ವ ಸಮಿತಿ ಅಧ್ಯಕ್ಷೆ ಕೆ.ಬಿ.ಸುಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಹೋದರತ್ವ ಸಮಿತಿ ಸ್ಥಾಪಕ ಕೆ.ಟಿ.ರಾಧಾಕೃಷ್ಣ, ಟೌನ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷೆ ಎಂ.ಎಂ.ಹಾಲಮ್ಮ, ಮುಖಂಡರಾದ ಆರ್.ವಸಂತ್, ಕೆ.ಎಸ್.ಮಂಜುಳಾ, ಕಲಾವತಿ, ಟಿ.ಎಚ್.ರತ್ನ, ರಾಮಚಂದ್ರ, ಹುಣಸೇಮಕ್ಕಿ ಲಕ್ಷ್ಮಣ್ ಉಪಸ್ಥಿತರಿದ್ದರು. 8 ಕೆಸಿಕೆಎಂ 3ಚಿಕ್ಕಮಗಳೂರಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನಾ ಉದ್ಘಾಟಿಸಿದರು.