ಸಾರಾಂಶ
ಕನ್ನಡ ಪ್ರಭ ವಾರ್ತೆ ಮುಧೋಳ
ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕಾದರೆ ಒಳ್ಳೆಯ ಗುರಿ, ಉದ್ದೇಶ, ಪ್ರಾಮಾಣಿಕ ಪ್ರಯತ್ನ ಬೇಕು. ಅಂದಾಗ ಮಾತ್ರ ನಾವು ಅಂದಕೊಂಡಿರುವುದನ್ನು ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಡಾ.ಟಿ.ವಿ. ಅರಳಕಟ್ಟಿ ಅವರು ಸಾಧನೆ ಇತರರಿಗೆ ಮಾದರಿಯಾಗಿದೆ ಎಂದು ಚಿತ್ರನಟ, ಬೆಂಗಳೂರಿನ ಪ್ರಾರ್ಥನಾ ಸ್ಕೂಲ್ ನಿರ್ದೇಶಕ ಶ್ರೀನಗರ ಕಿಟ್ಟಿ ಹೇಳಿದರು.ಸ್ಥಳೀಯ ಅರಳಿಕಟ್ಟಿ ಫೌಂಡೇಶನ್ ಮುಧೋಳ ರಾಯಲ್ ಸ್ಕೂಲ್ ಆವರಣದಲ್ಲಿ ಶನಿವಾರ ಸಂಜೆ ಮುಧೋಳ ರಾಯಲ್ ಸ್ಕೂಲ್ ಅವಿಷ್ಕಾರ -3ರ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕಡಿಮೆ ಪ್ರವೇಶ ಫೀ ಪಡೆದು ಗುಣಮಟ್ಟದ ಶಿಕ್ಷಣವನ್ನು ಕೊಡುತ್ತಿರುವ ಡಾ.ಟಿ.ವ್ಹಿ.ಅರಳಿಕಟ್ಟಿ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ. ಅದರಂತೆ ಸಹಕಾರಿ, ಸಾಮಾಜಿಕ, ಕೃಷಿ, ಕ್ರೀಡೆ ಸೇರಿದಂತೆ ಇತರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳು ತಮಗೆಲ್ಲ ದೊರೆತಿರುವುದು ಭಾಗ್ಯವಂತರು ಎಂದರು.
ಪ್ರತಿಯೊಬ್ಬ ವ್ಯಕ್ತಿ ತಾನು ಗಳಿಸಿದ್ದರಲ್ಲಿ ಸ್ವಲ್ಪಾದರೂ ಸಮಾಜಕ್ಕೆ ಖರ್ಚು ಮಾಡಬೇಕು, ಆಗ ಸಮಾಜ ತಮ್ಮನ್ನು ಗುರುತಿಸಿ ಗೌರವಿಸುತ್ತದೆ, ಸಮಾಜ ಕೊಡುವ ಗೌರವ ಎಲ್ಲರಿಗಿಂತಲೂ ದೊಡ್ಡದು ಎಂದರು.ಡಿವೈಎಸ್ಪಿ ಶಾಂತವೀರ ಇ, ಕೊಣ್ಣೂರು ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೊಣ್ಣೂರ ಸಾಂದರ್ಭಿಕವಾಗಿ ಮಾತನಾಡಿದರು. ಅರಳಿಕಟ್ಟಿ ಫೌಂಡೇಶನ್ ದ ಸಂಸ್ಥಾಪಕ ಅಧ್ಯಕ್ಷ ಡಾ.ಟಿ.ವಿ. ಅರಳಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಯಾವುದೇ ಲಾಭದ ಉದ್ದೇಶವಿಟ್ಟುಕೊಂಡು ಶಿಕ್ಷಣ ಸಂಸ್ಥೆ ತೆರದಿಲ್ಲ, ಗ್ರಾಮೀಣ ಭಾಗದ ಬಡ, ಪ್ರತಿಭಾವಂತ, ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕೆಂಬ ಸದುದ್ದೇಶದಿಂದ ಈ ಶೈಕ್ಷಣಿಕ ಸಂಸ್ಥೆ ತೆರದಿದ್ದೇನೆ. ಪಾಲಕರು ಬೆಂಬಲ ಮತ್ತು ಸಹಕಾರ ನೀಡಿದ್ದಾರೆ. ಅದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆಂದು ಹೇಳಿದರು.
ಮುಧೋಳ ರಾಯಲ್ ಸ್ಕೂಲ್ ಅಧ್ಯಕ್ಷೆ ಸವಿತಾ ಟಿ. ಅರಳಿಕಟ್ಟಿ, ಉಪಾಧ್ಯಕ್ಷೆ ರಾಜೇಶ್ವರಿ ಕೋಮಾರ, ಕಾರ್ಯದರ್ಶಿ ವಿನಾಯಕ ಟಿ.ಅರಳಿಕಟ್ಟಿ ಹಾಗೂ ಸದಸ್ಯರು, ಆಡಳಿತಾಧಿಕಾರಿ ಇಂದ್ರಿರಾ ಸಾತನೂರು, ಪ್ರಾಚಾರ್ಯ ಚಂದ್ರಶೇಖರ ನಾಗವಾಂದ, ಉಪ ಪ್ರಾಚಾರ್ಯ ಮಾರುತಿ ಪವಾರ ವೇದಿಕೆ ಮೇಲೆ ಇದ್ದರು.ಸಾಂಸ್ಕೃತಿಕ, ಕ್ರೀಡಾ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಬಹುಮಾನ ನೀಡಲಾಯಿತು. ನಂತರ ಸ್ಕೂಲ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮತ್ತು ಮನರಂಜನೆ ಕಾರ್ಯಕ್ರಮ ನಡೆದವು.