ಸಾರಾಂಶ
ತಾಪಂ ಸಭಾಂಗಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಸಾರ್ವಜನಿಕರ ಕುಂದುಕೊರತೆ ಸಭೆ
ಕನ್ನಡಪ್ರಭ ವಾರ್ತೆ ಶಿರಾಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತಂದು ಯೋಜನೆಯ ಅನುಕೂಲ ಫಲಾನುಭವಿಗೆ ಸಮರ್ಪಕವಾಗಿ ತಲುಪುವಂತೆ ಮಾಡಬೇಕು. ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ, ಅವರಿಂದ ಅಧಿಕಾರಿಗಳ ಮೇಲೆ ದೂರು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತುಮಕೂರು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ವಲಿಬಾಷಾ ಹೇಳಿದರು.
ನಗರದ ತಾ.ಪಂ. ಸಭಾಂಗಣದಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. ನಾವೆಲ್ಲರೂ ಸರಕಾರಿ ವೇತನ ಪಡೆದು, ಸರ್ಕಾರದ ಸೌಲಭ್ಯಗಳನ್ನು ಪಡೆದು ಜನರ ಸೇವೆಗಾಗಿ ನಾವು ನೇಮಿಸಲ್ಪಟ್ಟಿದ್ದೇವೆ. ಜನರ ಕಷ್ಟ ಸುಖಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಲೋಕಾಯುಕ್ತ ಸಂಸ್ಥೆ, ಸಿಬಿಐ, ಸಿಓಡಿ, ಭ್ರಷ್ಟಾಚಾರ ನಿಗ್ರಹ ದಳ ಇವೆಲ್ಲಾ ಇಲಾಖೆಗಳು ಇರುವುದು ಯಾವಾಗ ಇಲಾಖೆಯ ಅಧಿಕಾರಿಗಳು ಸಮರ್ಪಕ ಕಾರ್ಯ ಮಾಡದೆ ಇರುವ ಸಂದರ್ಭದಲ್ಲಿ ನಾವು ತನಿಖೆ ಮಾಡುತ್ತೇವೆ. ಜನರ ಕಷ್ಟಕ್ಕೆ ಸ್ಪಂದಿಸಿದರೆ ನಾವು ನಿಮ್ಮ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ನಿಮ್ಮ ನಿಮ್ಮ ಕೆಲಸಗಳನ್ನು ಸರಿಯಾಗಿ ಮಾಡಿ. ಜನರಿಗೆ ನೀವು ಸರಿಯಾಗಿ ಸ್ಪಂದಿಸದಿದ್ದರೆ, ಆ ಬಗ್ಗೆ ನಮಗೆ ದೂರು ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದರು.ನಾವು ಇರುವುದು ಜನರ ಸೇವೆಗಾಗಿ, ಸಮಾಜದ ಸೇವೆಗಾಗಿ ಸಮಾಜ ಲೂಟಿ ಹೊಡೆಯಲಿಕ್ಕಲ್ಲ. ಅದನ್ನು ಮಾಡಬಾರದು ಎಂಬ ಉದ್ದೇಶದಿಂದಲೇ ತನಿಖಾ ಸಂಸ್ಥೆಗಳನ್ನು ನೇಮಿಸಿರುವುದು. ಹಣ ಮಾಡಲು ಹೊರಟರೆ ಜೀವನ ಪರ್ಯಾಂತ ನರಕಯಾತನೆ ಅನುಭವಿಸಬೇಕಾಗುತ್ತದೆ. ಜೀವನ ಪೂರ ಕಷ್ಟ ಅನುಭವಿಸಬೇಕಾಗುತ್ತದೆ. ನಿಮ್ಮ ನಿಮ್ಮ ಇಲಾಖೆಗಳಲ್ಲಿ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಅನುಷ್ಠಾನ ಮಾಡಿ ಜನರಿಗೆ ಸರಿಯಾಗಿ ಸೌಲಭ್ಯಗಳನ್ನು ತಲುಪವಂತೆ ಮಾಡಿ. ಸರ್ಕಾರದ ಅನುದಾನವನ್ನು ಸರಿಯಾಗಿ ತಲುಪಿಸಿ ಫಲಾನುಭವಿಗಳಿಗೆ ನ್ಯಾಯ ಕೊಡಿ. ತಾರತಮ್ಯ ಮಾಡಬೇಡಿ. ಸರ್ಕಾರದ ನಿಯಮಾನುಸಾರ ಕೆಲಸ ಮಾಡಿ. ಸರ್ಕಾರದ ಯೋಜನೆಗಳನ್ನು ಯಶಸ್ವಿ ಮಾಡಲು ಶ್ರಮಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಜಿ. ಹರೀಶ್, ಪೊಲೀಸ್ ನಿರೀಕ್ಷಕರಾದ ರಾಮರೆಡ್ಡಿ, ಶಿವರುದ್ರಪ್ಪ ಮೇಟಿ, ತಹಸೀಲ್ದಾರ್ ದತ್ತಾತ್ರೆಯ ಗಾದಾ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅನಂತರಾಜು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಹಾಜರಿದ್ದರು.ಫೋಟೊ
14ಶಿರಾ1: ನಗರದ ತಾ.ಪಂ. ಸಭಾಂಗಣದಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ತುಮಕೂರು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ವಲಿಬಾಷಾ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.