ಕಳಪೆ ಗುಣಮಟ್ಟದ ಮೋಟಾರ್, ಪಂಪ್‌ಸೆಟ್ ವಿತರಿಸಿದರೆ ಕ್ರಮ

| Published : Oct 09 2024, 01:37 AM IST

ಸಾರಾಂಶ

ರೈತರಿಗೆ ಗುಣಮಟ್ಟದ ಮೋಟಾರ್ ಪಂಪ್‌ಸೆಟ್ ವಿತರಣೆ ಮಾಡಬೇಕು. ಒಂದುವೇಳೆ ಕಳಪೆ ಗುಣಮಟ್ಟದ ಮೋಟಾರ್, ಪಂಪ್‌ಸೆಟ್ ಕೊಟ್ಟಿರುವುದು ಗಮನಕ್ಕೆ ಬಂದರೆ ಸಂಬಂಧಪಟ್ಟ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಎಚ್ಚರಿಕೆ ನೀಡಿದ್ದಾರೆ.

- ಪಂಪ್‌ಸೆಟ್, ಪರಿಕರ ವಿತರಿಸಿ ಶಾಸಕ ಬಸವಂತಪ್ಪ ಎಚ್ಚರಿಕೆ- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರೈತರಿಗೆ ಗುಣಮಟ್ಟದ ಮೋಟಾರ್ ಪಂಪ್‌ಸೆಟ್ ವಿತರಣೆ ಮಾಡಬೇಕು. ಒಂದುವೇಳೆ ಕಳಪೆ ಗುಣಮಟ್ಟದ ಮೋಟಾರ್, ಪಂಪ್‌ಸೆಟ್ ಕೊಟ್ಟಿರುವುದು ಗಮನಕ್ಕೆ ಬಂದರೆ ಸಂಬಂಧಪಟ್ಟ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಎಚ್ಚರಿಕೆ ನೀಡಿದರು.

ನಗರದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 2021- 2022ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ (ಡಿಬಿಟಿ) ಕೊಳವೆಬಾವಿ ಕೊರೆಸಿದ 14 ಅರ್ಹ ಫಲಾನುಭವಿ ರೈತರಿಗೆ ಮೋಟಾರ್ ಪಂಪ್‌ಸೆಟ್, ಪರಿಕರ ವಿತರಿಸಿ ಅವರು ಮಾತನಾಡಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಹಿಂದೆ ಡಾ. ಬಿ.ಆರ್. ಅಂಬೇಡ್ಕರ್, ಆದಿಜಾಂಬವ, ವಾಲ್ಮೀಕಿ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಡಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಿದ ಅರ್ಹರಿಗೆ ಕಳಪೆ ಗುಣಮಟ್ಟದ ಮೋಟಾರ್, ಪಂಪ್‌ಸೆಟ್, ಪರಿಕರ ವಿತರಣೆ ಮಾಡಲಾಗಿದೆ ಎಂದು ರೈತರಿಂದ ದೂರುಗಳು ಬಂದಿವೆ. ಹೀಗಾಗಿ, ಯೋಜನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಮೋಟಾರ್, ಪಂಪ್‌ಸೆಟ್, ಪರಿಕರ ವಿತರಿಸುವಾಗ ಫಲಾನುಭವಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರು ಬಂದಿವೆ. ಫಲಾನುಭವಿಗಳು ಈ ಬಗ್ಗೆ ಗಮನಕ್ಕೆ ತಂದರೆ ಕ್ರಮ ತೆಗೆದುಕೊಳ್ಳಲಾಗುವುದು. ಫಲಾನುಭವಿಗಳು ಕೂಡ ಹಣ ಕೊಡಬಾರದು. ಸರ್ಕಾರ ಕೊಟ್ಟ ಸೌಲಭ್ಯಗಳನ್ನು ಸರಿಯಾಗಿ ತಲುಪಿಸುವುದು ಅಧಿಕಾರಿಗಳ ಕರ್ತವ್ಯ. ಕಂದಗಲ್ಲು ಗ್ರಾಮದ ಗಂಗಾಧರಪ್ಪ ಅವರಿಗೆ ಹಳೇ ಟ್ರಾನ್ಸ್‌ಫಾರ್ಮರ್‌ ಕೊಟ್ಟಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಈ ಬಗ್ಗೆ ಪರಿಶೀಲನೆ ನಡೆಸಿ, ವರದಿ ಕೊಡಬೇಕೆಂದು ಸೂಚನೆ ನೀಡಿದರು.

ಕಬ್ಬಿಣದ ಮೀಟರ್ ಬೋರ್ಡ್‌ಗಳಿಂದ ಮಳೆ ಬಂದ ಸಂದರ್ಭದಲ್ಲಿ ವಿದ್ಯುತ್ ಅವಘಡಗಳು ಸಂಭವಿಸಿ, ರೈತರು ಮೃತಪಟ್ಟಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಇನ್ನು ಮುಂದೆ ರೈತರಿಗೆ ಫೈಬರ್ ಮೀಟರ್ ಬೋರ್ಡ್‌ಗಳನ್ನು ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಕ್ಷೇತ್ರದ ವ್ಯಾಪ್ತಿಯ ಕುರ್ಕಿ, ಗುಮ್ಮನೂರು, ನರಸೀಪುರ, ನಲ್ಕುಂದ, ದಾಗಿನಕಟ್ಟೆ, ಬಾವಿಹಾಳು, ಮಾಯಕೊಂಡ, ಹೊಸಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಅರ್ಹ ರೈತರಿಗೆ ಮೋಟಾರ್, ಪಂಪ್‌ಸೆಟ್, ಪರಿಕರಗಳನ್ನು ವಿತರಿಸಲಾಯಿತು.

ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ಬಸವರಾಜ, ಫೀಲ್ಡ್ ಆಫೀಸರ್ ಮರಿಸ್ವಾಮಿ, ಗುತ್ತಿಗೆದಾರರು ಸೇರಿದಂತೆ ಇತರರು ಇದ್ದರು.

- - - -8ಕೆಡಿವಿಜಿ32, 33ಃ:

ದಾವಣಗೆರೆ ಎಪಿಎಂಸಿ ಆವರಣದಲ್ಲಿ 2021-22ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮೋಟಾರ್, ಪಂಪ್‌ಸೆಟ್, ಪರಿಕರಗಳನ್ನು ಶಾಸಕ ಕೆ.ಎಸ್.ಬಸವಂತಪ್ಪ ವಿತರಿಸಿದರು.