ಸಾರಾಂಶ
ಶಿಗ್ಗಾಂವಿ: ಲೋಕಾಯುಕ್ತರ ಹೆಸರಿನಲ್ಲಿ ಯಾರಾದರೂ ಅಧಿಕಾರಿಗಳನ್ನು ಹೆದರಿಸಿದರೆ ನಮ್ಮ ಗಮನಕ್ಕೆ ತರಬೇಕು, ಕೆಲವು ಸರ್ಕಾರಿ ಕಚೇರಿಗಳಲ್ಲಿ ಏಜೆಂಟರನ್ನು (ದಲ್ಲಾಳಿಗಳು) ನೇಮಕ ಮಾಡಿಕೊಂಡಿರುವ ಘಟನೆಗಳು ಕೇಳಿಬರುತ್ತಿದೆ ಅಂಥವುಗಳ ಕುರಿತು ಕ್ರಮ ಜರುಗಿಸುತ್ತೇವೆ ಎಂದು ಹಾವೇರಿಯ ಲೋಕಾಯುಕ್ತ ಡಿವೈಎಸ್ಪಿ ಡಾ. ಬಿ.ಪಿ. ಚಂದ್ರಶೇಖರ ಹೇಳಿದರು.
ಪಟ್ಟಣದ ತಾ.ಪಂ. ಸಭಾಭವನದಲ್ಲಿ ಹಾವೇರಿಯ ಕರ್ನಾಟಕ ಲೋಕಾಯುಕ್ತ ಘಟಕದಿಂದ ಏರ್ಪಡಿಸಿದ್ದ ಸಾರ್ವಜನಿಕರ ಕುಂದುಕೊರತೆ ಅಹವಾಲು ಸ್ವೀಕಾರ ಮತ್ತು ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು.ಬೆಂಗಳೂರು ಹೊರತುಪಡಿಸಿದರೆ ಹಾವೇರಿ ಜಿಲ್ಲೆಯಲ್ಲಿ ಅತಿಹೆಚ್ಚು ಲೋಕಾಯುಕ್ತ ದಾಳಿಗಳನ್ನು ಮಾಡಲಾಗಿದ್ದು, ರಾಜ್ಯದ ಇತಿಹಾಸದಲ್ಲೆ ಮೊದಲ ರಿವರ್ಸ್ ಟ್ರ್ಯಾಂಪ್ನ್ನು ತಾಲೂಕಿನ ಅಂದಲಗಿಯಲ್ಲಿ ಮಾಡಲಾಗಿದೆ. ಏಜೆಂಟರನ್ನು ಕಚೇರಿಗಳಿಂದ ಹೊರಹಾಕಿ, ತಮ್ಮ ಕೆಲಸಗಳಿಗಾಗಿ ಬರುವ ರೈತರು, ಜನ ಸಾಮಾನ್ಯರೊಂದಿಗೆ ಗೌರವಯುತವಾಗಿ ವರ್ತಿಸಿ, ಪ್ರತಿಯೊಬ್ಬ ನೌಕರರು ತಮ್ಮ ಸೇವಾ ಅವಧಿಯಲ್ಲಿ ಇಲಾಖೆ ನೀಡಿರುವ ಗುರತಿನ ಐಡಿಯನ್ನು ಕಡ್ಡಾಯವಾಗಿ ಧರಿಸಿರಬೇಕು, ಅಧಿಕಾರಿಗಳು ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಕಡ್ಡಾಯವಾಗಿ ನಾಮ ಫಲಕವನ್ನು ಹಾಕಿರಬೇಕು, ಇಲಾಖೆಗಳ ಹಿರಿಯ ಅಧಿಕಾರಿಗಳು ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಸಿಬ್ಬಂದಿಗಳ ಚಲನ ವಲನಗಳನ್ನು ಗಮನಿಸಬೇಕು ಎಂದರು.
ಹಾವೇರಿಯ ಲೋಕಾಯುಕ್ತ ಘಟಕದ ಇನೆಸ್ಪೆಕ್ಟರ್ ಮುಸ್ತಾಕ ಅಹ್ಮದ ಮಾತನಾಡಿ, ಸರ್ಕಾರಿ ನೌಕರರು ಕಾನೂನು ಬದ್ದವಾಗಿ ಪ್ರಾಮಾಣಿಕತೆಯಿಂದ ಸಾರ್ವಜನಿಕರ ಸೇವೆಯನ್ನು ಮಾಡಿದಾಗ ಅವರನ್ನೂ ನಾವು ಒತ್ತಡಗಳಿಂದ ರಕ್ಷಿಸುವ ಕೆಲಸ ಮಾಡುತ್ತೇವೆ, ಚುನಾವಣೆಯ ಕೆಲಸದ ಒತ್ತಡದಲ್ಲಿ ಸಾರ್ವಜನಿಕರಿಗೆ ನೀಡಬೇಕಾದ ಸೇವೆಗಳು ನಿಲ್ಲದಂತೆ ಹೆಚ್ಚಿನ ಶ್ರಮವಹಿಸಿ ಕಾರ್ಯ ನಿರ್ವಹಿಸಿ ಎಂದು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಹೇಳಿದರು.ಕಾರ್ಯಕ್ರಮದಲ್ಲಿ ಹಾವೇರಿಯ ಲೋಕಾಯುಕ್ತ ಘಟಕದ ಇನೆಸ್ಪೆಕ್ಟರ್ ಎನ್.ಹೆಚ್. ಆಚಿಜನೇಯ ತಾಲೂಕು ದಂಡಾಧಿಕಾರಿ ಸಂತೋಷ ಹಿರೇಮಠ, ತಾಪಂ ಇ.ಓ ಪಿ.ವಿಶ್ವನಾಥ ಸೇರಿದಂತೆ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳು ಇದ್ದರು.