ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವೃತ್ತಿಯೋಜನೆ ನಿಮ್ಮ ಭವಿಷ್ಯ ತೋರಿಸುತ್ತದೆ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಗುರಿ ಅನುಸರಿಸುವಾಗ ಸಂಪೂರ್ಣ ವಿಶ್ಲೇಷಣೆ ಮಾಡಿಕೊಳ್ಳಬೇಕು. ಸ್ವಯಂ ಮೌಲ್ಯಮಾಪನ ನಿಮ್ಮ ಸಾಮರ್ಥ್ಯಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಗುರಿ ಸಾಧಿಸಲು ಕ್ರಿಯಾಯೋಜನೆ ಸಿದ್ಧಪಡಿಸಿ. ವ್ಯಕ್ತಿತ್ವ ವಿಕಸನದಲ್ಲಿ ಮಾನಸಿಕ ಬೆಳವಣಿಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮದ್ರಾಸ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ತೆರಿಗೆ ವಿಭಾಗದ ಹೆಚ್ಚುವರಿ ಆಯುಕ್ತ ಶಿವಪ್ರಕಾಶ ವೀರೇಶ ಬಡ್ಡಿ ಹೇಳಿದರು.

ವಿದ್ಯಾಗಿರಿಯ ಬಸವೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಉದ್ಯೋಗ ನಿಯೋಜನಾ ಘಟಕ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ಅಡಿಯಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ದಿನದ ವ್ಯಕ್ತಿತ್ವ ವಿಕಸನ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಮನಸ್ಸು ವ್ಯಕ್ತಿತ್ವದ ಪ್ರತಿನಿಧಿಯಾಗಿದೆ. ಇಚ್ಛಾಶಕ್ತಿ, ಕ್ರಿಯಾಶಕ್ತಿ ಸಕಾರಾತ್ಮಕವಾಗಿದ್ದರೆ ಮನಸ್ಸು ಸದಾ ಉತ್ಸಾಹಭರಿತವಾಗಿರುತ್ತದೆ ಎಂದು ಹೇಳಿದರು.

ಪ್ರಾಚಾರ್ಯರು ಅತಿಥಿಗಳನ್ನು ಸನ್ಮಾನಿಸಿದರು. ಅತಿಥಿಗಳು ರಾಷ್ಟ್ರೀಯ ಯೋಜನೆ ಹಾಗೂ ಪರಿಸರ ಘಟಕದವರು ಹಮ್ಮಿಕೊಂಡಿದ್ದ 2024 ಹೊಸ ವರ್ಷದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಸಿಗಳನ್ನು ನೆಟ್ಟು ನೀರುಣಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಟಿ.ಬಿ. ಕೋರಿಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಲಾ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ.ವಿ.ಎಸ್. ಕಟಗಿಹಳ್ಳಿಮಠ, ಗುಡದಯ್ಯ ಕೆಂಗಾಪುರ, ಬಸು ಸಾಲಿಯಾರ್, ಲಕ್ಷ್ಮಣ ಕಾಂಬಳೆ ಉಪಸ್ಥಿತರಿದ್ದರು. ಪ್ರಿಯಾಂಕಾ ಮತ್ತು ಸಹನಾ ಕುಂದಗೋಳ ಪ್ರಾರ್ಥಿಸಿದರು. ಪ್ರಭುಸ್ವಾಮಿ ಗದ್ದಗಿಮಠ ಸ್ವಾಗತಿಸಿ ಪರಿಚಯಿಸಿದರು. ಹನುಮಂತ ಹೊನ್ಯಾಳ ವಂದಿಸಿದರು. ಸೀಮಾ ಹಿರೇಮಠ ನಿರೂಪಿಸಿದರು.