ಈದ್ ಮಿಲಾದ್, ಗೌರಿ-ಗಣೇಶ ಹಾಗೂ ದಸರಾ ಹಬ್ಬಗಳ ಹಿನ್ನೆಲೆಯಲ್ಲಿ ಶಾಮಿಯಾನ, ಲೈಟಿಂಗ್, ಧ್ವನಿವರ್ಧಕ, ಬ್ಯಾನರ್ ಹಾಗೂ ಫ್ಲೆಕ್ಸ್ ಮಾಲೀಕರು ಸುಪ್ರೀಂ ಕೋರ್ಟ್ ಆದೇಶಗಳಂತೆ ಹಬ್ಬಗಳ ಸಂದರ್ಭದಲ್ಲಿ ಲೈಟಿಂಗ್, ಶಾಮಿಯಾನ, ಧ್ವನಿವರ್ಧಕ ಮತ್ತು ಫ್ಲೆಕ್ಸ್ ಅಳವಡಿಸುವ ಮುನ್ನ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಸಿಪಿಐ ಪ್ರವೀಣ್ ಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಈದ್ ಮಿಲಾದ್, ಗೌರಿ-ಗಣೇಶ ಹಾಗೂ ದಸರಾ ಹಬ್ಬಗಳ ಹಿನ್ನೆಲೆಯಲ್ಲಿ ಶಾಮಿಯಾನ, ಲೈಟಿಂಗ್, ಧ್ವನಿವರ್ಧಕ, ಬ್ಯಾನರ್ ಹಾಗೂ ಫ್ಲೆಕ್ಸ್ ಮಾಲೀಕರು ಸುಪ್ರೀಂ ಕೋರ್ಟ್ ಆದೇಶಗಳಂತೆ ಹಬ್ಬಗಳ ಸಂದರ್ಭದಲ್ಲಿ ಲೈಟಿಂಗ್, ಶಾಮಿಯಾನ, ಧ್ವನಿವರ್ಧಕ ಮತ್ತು ಫ್ಲೆಕ್ಸ್ ಅಳವಡಿಸುವ ಮುನ್ನ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಸಿಪಿಐ ಪ್ರವೀಣ್ ಕುಮಾರ್ ಹೇಳಿದರು.

ಅವರು ಶಿರಾ ನಗರ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ರಸ್ತೆಗಳಲ್ಲಿ ಶಾಮಿಯಾನ ಹಾಗೂ ಲೈಟಿಂಗ್ ಅಳವಡಿಸುವುದರಿಂದ ಆ್ಯಂಬ್ಯುಲೆನ್ಸ್‌ ಸೇರಿದಂತೆ ತುರ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಶಾಮಿಯಾನ, ಲೈಟಿಂಗ್ ಅಥವಾ ಫ್ಲೆಕ್ಸ್ ಅಳವಡಿಸಬಾರದು. ನಿಯಮ ಉಲ್ಲಂಘಿಸಿದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ನಿಯಮಗಳಡಿ, ಸಾರ್ವಜನಿಕ ದಾರಿಯಲ್ಲಿ ಅಡ್ಡಿಪಡಿಸುವ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

೧೦ ಅಡಿಗಿಂತ ಹೆಚ್ಚಿನ ಎತ್ತರದ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳಿಗೆ ಅನುಮತಿ ಇಲ್ಲ. ೨೦ ರಿಂದ ೩೦ ಅಡಿ ಎತ್ತರದ ಫ್ಲೆಕ್ಸ್ ಅಳವಡಿಸಬೇಕಾದ ಸಂದರ್ಭದಲ್ಲಿ ಸಂಬಂಧಪಟ್ಟ ನಗರಸಭೆ, ಪೊಲೀಸ್ ಇಲಾಖೆ ಹಾಗೂ ತಹಸೀಲ್ದಾರ್ ಅವರ ಅನುಮತಿ ಪಡೆಯಬೇಕು. ಅನುಮತಿ ಇಲ್ಲದೆ ಫ್ಲೆಕ್ಸ್ ಅಳವಡಿಸಿದರೆ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಪ್ರವೀಣ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಮುಖ್ಯಪೇದೆ ಆನಂದ್ ಕುಮಾರ್, ಮಾರುತಿ, ನಾಗರಾಜು, ತಿಪ್ಪೇಶ್ ಸೇರಿದಂತೆ ಠಾಣೆಯ ಸಿಬ್ಬಂದಿ ಹಾಜರಿದ್ದರು.