ಸಾರಾಂಶ
ಹುಬ್ಬಳ್ಳಿ: ಜಿಲ್ಲೆಯಲ್ಲಿ ಸಾಕಷ್ಟು ಕೆರೆಗಳಿವೆ. ಕೆರೆಗಳು ಕುಡಿಯುವ ನೀರಿನ ಮೂಲಗಳಾಗಿವೆ. ಅವುಗಳಿಗೆ ತಡೆಗೋಡೆ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯರಿನಾರಾಯಣಪುರ ಗ್ರಾಮದ ಕೆರೆಗೆ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಇತ್ತೀಚಿಗೆ ಕೆರೆಯಲ್ಲಿ ಮುಳುಗಿ ಮೃತಪಟ್ಟ ಮಕ್ಕಳ ಮನೆಗೆ ತೆರಳಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಮಳೆಗಾಲದ ಸಂದರ್ಭದಲ್ಲಿ ಕೆರೆಗಳು ಭರ್ತಿಯಾಗುತ್ತವೆ. ಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಕ್ಕಳು ಓಡಾಡದಂತೆ ಮೊದಲೇ ಸಾರ್ವಜನಿಕರು, ಅಧಿಕಾರಿಗಳು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿನ ಕೆರೆಗಳಿಗೆ ತಡೆಗೋಡೆ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಸೂಚನೆ ನೀಡಲಾಗಿದೆ. ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆಯನ್ನೂ ನೀಡಲಾಗಿದೆ ಎಂದರು.
ಗುಡೇನಕಟ್ಟಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಯರಿನಾರಾಯಣಪುರ ಗ್ರಾಮದ ಕೆರೆಗೆ ಈಗಾಗಲೇ ₹50 ಲಕ್ಷ ಅನುದಾನ ನೀಡಲಾಗಿತ್ತು. ಕೆರೆ ಕೂಡ ಬಹಳಷ್ಟು ದೊಡ್ಡದಾಗಿದೆ. ತಡೆಗೋಡೆ ನಿರ್ಮಾಣ ಮಾಡಿದರೂ ಮಕ್ಕಳು ಕೆರೆ ಕಡೆಗೆ ಹೋಗದಂತೆ ಪಾಲಕರು ಎಚ್ಚರ ವಹಿಸಬೇಕು ಎಂದರು.ಅಂಗನವಾಡಿ ಸ್ಥಳಾಂತರ: ಯರಿನಾರಾಯಣಪುರ ಗ್ರಾಮದ ಕೆರೆಯ ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರ ಮಾಡಲಾಗುವುದು. ಇದರಿಂದ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ. ಮಕ್ಕಳನ್ನು ಕಾಪಾಡುವುದು ಪಾಲಕರು ಮತ್ತು ಗ್ರಾಮಸ್ಥರ ಜವಾಬ್ದಾರಿಯಾಗಿದೆ. ಅಂಗನವಾಡಿ ಕೇಂದ್ರಗಳ ಬಗ್ಗೆ ಗಮನ ಹರಿಸುವುದು ಅಗತ್ಯವಿದೆ ಎಂದರು.
ಪರಿಹಾರಕ್ಕೆ ಸಿಎಂಗೆ ಮನವಿ: ಶರೀಫಸಾಬ್ ಚಂದುಖಾನವರ ಮಕ್ಕಳಾದ ಮುಜಮ್ಮಿಲ್ ಹಾಗೂ ಮುಶೀರ್ ಮೃತಪಟ್ಟಿದ್ದಾರೆ. ಕುಟುಂಬಸ್ಥರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡುವಂತೆ ಸಿಎಂ ಅವರನ್ನು ಸ್ವತಃ ಭೇಟಿ ಮಾಡಿ, ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.ಇದೇ ವೇಳೆ, ಸಂತೋಷ ಲಾಡ್ ಫೌಂಡೇಶನ್ನಿಂದ ಮೃತರ ಕುಟುಂಬಸ್ಥರಿಗೆ ₹4 ಲಕ್ಷ ಸಹಾಯಧನ ವಿತರಣೆ ಮಾಡಿದರು. ಕುಟುಂಬಸ್ಥರು ಹೆಚ್ಚಿನ ಧೈರ್ಯ ತಂದುಕೊಳ್ಳಬೇಕು ಎಂದು ಸಾಂತ್ವನ ತಿಳಿಸಿದರು. ಇದೇ ವೇಳೆ ಗ್ರಾಮದ ಸುಂದರವ್ವ ಅಗಸರ ಅವರ ಪಿಂಚಣಿ ಸಮಸ್ಯೆ ಬಗೆಹರಿಸುವಂತೆ ತಹಸೀಲ್ದಾರ್ ರಾಜು ಮಾವರಕರ ಮತ್ತು ಗ್ರಾಮ ಲೆಕ್ಕಾಧಿಕಾರಿ ಶಿಲ್ಪಾ ಎಸ್. ಅವರಿಗೆ ಸೂಚಿಸಿದರು.
ಶಾಸಕ ಎಂ.ಆರ್. ಪಾಟೀಲ, ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ್ ಬ್ಯಾಕೋಡ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಕುಸುಮಾವತಿ ಶಿವಳ್ಳಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತಿಕಾ ವರ್ಮಾ, ತಹಸೀಲ್ದಾರ್ ರಾಜು ಮಾವರಕರ, ತಾಪಂ ಇಒ ಜಗದೀಶ ಕಮ್ಮಾರ, ಎಸಿಪಿ ವಿನೋದ ಮುಕ್ತೇದಾರ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಗ್ರಾಪಂ ಅಧ್ಯಕ್ಷೆ ಮಮತಾ ಬೆಟದೂರ, ಉಪಾಧ್ಯಕ್ಷೆ ತಾಯವ್ವ ಕೆಂಚಣ್ಣವರ, ಪಿಡಿಒ ಧರ್ಮಪ್ರಸಾದ ಕಾಲವಾಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.ಗುಡೇನಕಟ್ಟಿ ಪಿಡಿಒ ಅಮಾನತು
ಹುಬ್ಬಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚನೆ ಹಿನ್ನೆಲೆಯಲ್ಲಿ ಗುಡೇನಕಟ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಡಿ.ಎಂ. ಕಾಲವಾಡ ಅವರನ್ನು ಅಮಾನತು ಮಾಡಲಾಗಿದೆ.ಅವಳಿ ಮಕ್ಕಳ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಸಂತೋಷ ಲಾಡ್ ಶನಿವಾರ ಕುಂದಗೋಳ ತಾಲೂಕಿನ ಯರಿನಾರಾಯನಪುರ ಗ್ರಾಮಕ್ಕೆ ಭೇಟಿ ನೀಡಿದ್ದರು. ಸಾರ್ವಜನಿಕರ ಸುರಕ್ಷತೆಗೆ ಸರಿಯಾದ ಕ್ರಮಕೈಗೊಳ್ಳದ ಮತ್ತು ಗ್ರಾಮದ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸದೆ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಪಿಡಿಒ ತಕ್ಷಣವೇ ಅಮಾನತುಗೊಳಿಸಲು ಆದೇಶಿಸಿದ್ದರು.
ಸಚಿವರ ಸೂಚನೆ, ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಜಿಪಂ ಸಿಇಒ ಭುವನೇಶ ಪಾಟೀಲ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಇವರ ಕಾರ್ಯ ಪ್ರಭಾರವನ್ನು ಬೇರೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ವಹಿಸಲು ಕುಂದಗೋಳ ತಾಪಂ ಇಒಗೆ ಸೂಚಿಸಲಾಗಿದೆ ಸಿಇಒ ಭುವನೇಶ ಪಾಟೀಲ ಅವರು ಸೂಚಿಸಿದ್ದಾರೆ.