ಸಾರಾಂಶ
ಅಭಿವೃದ್ಧಿಯ ಕಾಮಗಾರಿಗಳಿಗೆ ಹೆಚ್ಚು ಒತ್ತು । ಗಂಗಾವತಿ- ದರೋಜಿ ರೈಲ್ವೆ ಲೈನ್ ಡಿಪಿಆರ್ ಸಿದ್ಧ
ಕನ್ನಡಪ್ರಭ ವಾರ್ತೆ ಕುಷ್ಟಗಿಸದ್ಯ ನಡೆಯುತ್ತಿರುವ ರೈಲ್ವೆ ಕಾಮಗಾರಿಯ ಜೊತೆಗೆ ತುಂಗಭದ್ರಾ ಡ್ಯಾಂ ಹೂಳೆತ್ತುವ ಕಾಮಗಾರಿಯತ್ತ ಗಮನ ಹರಿಸಲಾಗುತ್ತದೆ ಎಂದು ಸಂಸದ ಕೆ. ರಾಜಶೇಖರ ಹಿಟ್ನಾಳ ಹೇಳಿದರು.ಪಟ್ಟಣದ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪೂರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಮ್ಮ ಕ್ಷೇತ್ರದ ಎಂಟು ವಿಧಾಸಭಾ ಕ್ಷೇತ್ರದ ಮತದಾರರು ನನಗೆ ಮತ ನೀಡುವ ಮೂಲಕ ಸಂಸದರನ್ನಾಗಿ ಮಾಡಿದ್ದು, ಅವರ ಆಶಯದಂತೆ ನಾನು ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ, ನನ್ನ ಮುಂದೆ ಅನೇಕ ಸವಾಲುಗಳಿದ್ದು, ಅದರಲ್ಲಿ ಮುಖ್ಯವಾಗಿ ರೈತರ ಜೀವನಾಡಿಯಾದ ತುಂಗಭದ್ರಾ ಡ್ಯಾಂ ಹೂಳೆತ್ತುವುದು, ರೈಲ್ವೆ ಕಾಮಗಾರಿ ಸೇರಿದಂತೆ ಅನೇಕ ಅಭಿವೃದ್ಧಿಯ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಅಭಿವೃದ್ಧಿಗೆ ಗಮನ ನೀಡಲಾಗುವುದು ಎಂದರು.
ತುಂಗಭದ್ರಾ ಸಮನಾಂತರ ಯೋಜನೆ, ಹೂಳೆತ್ತುವುದು ನಮ್ಮ ಭಾಗದ ರೈತರ ಪ್ರಮುಖ ಬೇಡಿಕೆಯಾಗಿದೆ. ಜಲಾಶಯದಲ್ಲಿ ಹೂಳು ಜಾಸ್ತಿಯಾಗಿದ್ದು, ಇದರಿಂದ ಸುಮಾರು 30 ಟಿಎಂಸಿ ನೀರು ಹರಿದು ಬೇರೆ ರಾಜ್ಯಕ್ಕೆ ಹೊಗುತ್ತಿದೆ. ಮೊದಲು ಹೂಳೆತ್ತುವ ಚಿಂತನೆ ಮಾಡಲಾಗುವುದು. ಇದರ ಜೊತೆಗೆ ರೈಲ್ವೆ ಕಾಮಗಾರಿಗಳಿಗೆ ಈಗಾಗಲೇ ಡಿಪಿಆರ್ ರೆಡಿ ಮಾಡಲಾಗಿದೆ ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಗಂಗಾವತಿ- ದರೋಜಿ ರೈಲ್ವೆ ಲೈನ್ ಡಿಪಿಆರ್ ಸಿದ್ಧವಾಗಿದೆ ಎಂದರು.ಮಾಜಿ ಸಂಸದ ಸಂಗಣ್ಣ ಕರಡಿ ಹಾಗೂ ಪಕ್ಷದ ಹಿರಿಯರ ಮಾರ್ಗದರ್ಶನ ಪಡೆದು ಅಭಿವೃದ್ಧಿಯತ್ತ ಸಾಗುತ್ತೇನೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡುತ್ತೇನೆ ಎಂದರು.
ಕುಷ್ಟಗಿ ತಾಲೂಕಿನ ವಕ್ಕನದುರ್ಗ ದೇವಸ್ಥಾನಕ್ಕೆ ಹಾಗೂ ಬಾದಿಮನಾಳ ಶಾಖಾಮಠಕ್ಕೆ ಸಂಸದ ಕೆ. ರಾಜಶೇಖರ ಹಿಟ್ನಾಳ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ದೊಡ್ಡಬಸವನಗೌಡ ಬಯ್ಯಾಪುರ, ಮಾಲತಿ ನಾಯಕ, ವಿಜಯ ನಾಯಕ, ಉಮೇಶ ಮಂಗಳೂರ, ಅಬ್ದುಲ್ ಖಾದರ ಯಲಬುರ್ಗಿ ಸೇರಿದಂತೆ ಕಾರ್ಯಕರ್ತರು ಇದ್ದರು.