ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಟಿ ಕಲ್ಪನಾ ಕನ್ನಡ ಚಲನಚಿತ್ರರಂಗದ ಅಪ್ರತಿಮ, ಅದ್ಭುತ ಪ್ರತಿಭೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕಸಾಪ ವತಿಯಿಂದ ಹಮ್ಮಿಕೊಂಡಿದ್ದ ಮಿನುಗು ತಾರೆ ಕಲ್ಪನಾ ಸವಿನೆನಪು ಮತ್ತು ಗೀತ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಲ್ಪನಾ ಅಭಿನಯದ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲಿ ಲಕ್ಷಾಂತರ ಅಭಿಮಾನಿಗಳಲ್ಲಿ ನಿರಂತರವಾಗಿ ತಮ್ಮದೇ ಆದ ಪ್ರಭಾವ ಬೀರಿದ್ದಾರೆ. ಸುಮಾರು 78 ಚಿತ್ರಗಳಿಗೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಕಲ್ಪನಾ ಅವರು ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿ ತಮ್ಮ ಗೆಜ್ಜೆಪೂಜೆ, ಶರಪಂಜರ, ಬೆಳ್ಳಿಮೋಡ, ಎರಡು ಕನಸು ಹೀಗೆ ಹತ್ತು ಹಲವು ಸಿನಿಮಾಗಳಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರನ್ನು ಮೂಕ ವಿಸ್ಮಿತರನ್ನಾಗಿ ಮಾಡಿದವರು. ತಮ್ಮ ಪಾತ್ರಗಳಿಗೆ ಜೀವಂತಿಕೆ ತುಂಬಿ ನಟಿಸುತ್ತಿದ್ದ ಕನ್ನಡದ ಮರೆಯಲಾಗದ ಮಿನುಗುತಾರೆ ಎಂದು ತಿಳಿಸಿದರು.
ಬರಹಗಾರ ಎಸ್.ಲಕ್ಷ್ಮೀನರಸಿಂಹ ಮಾತನಾಡಿ, ಕಲ್ಪನಾ ಅವರ ಅಭಿನಯ ಯುವ ನಟಿಯರಿಗೆ ಮಾರ್ಗದರ್ಶನದಂತಿದ್ದು, ಗೆಜ್ಜೆಪೂಜೆ, ಶರಪಂಜರ ಅಭಿನಯ ಕನ್ನಡ ಚಿತ್ರರಂಗ ಮರೆಯಲಾಗದು. ರಾಜ್ ಕುಮಾರ್, ಗಂಗಾಧರ, ಕಲ್ಯಾಣಕುಮಾರ್ ಜೊತೆ ಅಭಿನಯ, ಅವರ ಉಡುಪು, ಶೈಲಿ, ಹೊಸತನದಿಂದ ಇತ್ತು. ಜೀವನದಲ್ಲಿ ಹಲವು ಏರಿಳಿತ ಕಂಡ ಕಲ್ಪನಾ ದುರಂತ ನಾಯಕಿಯಾಗಿ ಕಣ್ಮರೆಯಾದರು ಎಂದರು.ಕಾರ್ಯಕ್ರಮದಲ್ಲಿ ಕನ್ನಡ ಚಳವಳಿಗಾರ ಶ್ರೀನಿವಾಸಗೌಡ ಮಾತನಾಡಿ, ಅವರ ಚಿತ್ರಗಳ ಹಾಡುಗಳು ಇಂದಿಗೂ ಜನರ ಹೃದಯದಲ್ಲಿದೆ. ಏನು ಸಭ್ಯತೆ, ಇದೇನು ಸಂಸ್ಕೃತಿ ಹಾಡು ಕೇಳಿದಷ್ಟು ಕೇಳಬೇಕೆನಿಸುವ ಹಾಡು ಎಂದರು.ಕಸಾಪ ರವಿಚಂದ್ರ ಪ್ರಸಾದ್ ಅವರು ಕಲ್ಪನಾ ನಟನೆಯ ಪೂಜಿಸಲೆಂದೆ ಹೂಗಳ ತಂದೆ, ಇದೇನು ಸಭ್ಯತೆ, ಇದೇನು ಸಂಸ್ಕೃತಿ ಸೇರಿದಂತೆ ಅನೇಕ ಹಾಡುಗಳನ್ನು ಹಾಡಿದರು. ಬಿಕೆ ಆರಾಧ್ಯ, ಸರಸ್ವತಿ, ಶಿವಲಿಂಗ ಮೂರ್ತಿ, ಪಣ್ಯದ ಹುಂಡಿ ರಾಜು, ಸುರೇಶ್ ಗೌಡ, ಬೊಮ್ಮಾಯಿ, ಗೋವಿಂದರಾಜು, ಮಾದೇವಸ್ವಾಮಿ ,ಪರಮೇಶ್ವರಪ್ಪ, ಸತೀಶ್, ಮಹದೇವು ಇದ್ದರು.