ಮಾದಕ ದ್ರವ್ಯದತ್ತ ಆಕರ್ಷಣೆ ಅಪಾಯಕಾರಿ

| Published : Jun 23 2025, 11:48 PM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಗರದ ಸಿಕ್ಯಾಬ್ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ಮಾದಕ ದ್ರವ್ಯ ವಿರೋಧಿ ಮತ್ತು ಸಂಚಾರಿ ನಿಯಮಗಳ ಅರಿವು ಹಾಗೂ ಸೈಬರ್ ಸೆಕ್ಯೂರಿಟಿಗಳ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಸಿಕ್ಯಾಬ್ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ಮಾದಕ ದ್ರವ್ಯ ವಿರೋಧಿ ಮತ್ತು ಸಂಚಾರಿ ನಿಯಮಗಳ ಅರಿವು ಹಾಗೂ ಸೈಬರ್ ಸೆಕ್ಯೂರಿಟಿಗಳ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಸಿಪಿಐ ಮಲ್ಲಯ್ಯ ಮಠಪತಿ ಮಾತನಾಡಿ, ಸಾಕಷ್ಟು ಯುವ ಪೀಳಿಗೆ ದಿನೇ ದಿನೇ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಮಕ್ಕಳು, ಯುವಕರು ಮಾದಕ ದ್ರವ್ಯಗಳತ್ತ ಆಕರ್ಷಿತರಾಗುತ್ತಿರುವುದು ಅಪಾಯಕಾರಿ. ಹೀಗಾಗಿ ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ದೂರವಾಗಿರಬೇಕು. ಸಂಚಾರಿ ನಿಯಮದ ಉಲ್ಲಂಘನೆಯಿಂದ ಪ್ರಾಣಾಪಾಯ ಸಾಧ್ಯತೆಯಿದೆ. ಅತ್ಯಮೂಲ್ಯ ಜೀವ ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಸಂಚಾರಿ ನಿಯಮಗಳನ್ನು ತಪ್ಪದೆ ಪಾಲಿಸಬೇಕು. ಹೆಲ್ಮೆಟ್ ರಹಿತ ಬೈಕ್ ಚಾಲನೆ ಮಾಡಬಾರದು. ನಾಲ್ಕು ಚಕ್ರದ ವಾಹನ ಚಾಲನೆ ವೇಳೆ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಿಕ್ಯಾಬ್‌ನ ಎಐಎಂಎಲ್ ವಿಭಾಗದ ಮುಖ್ಯಸ್ಥ ಅಸ್ಲಂ ಕರ್ಜಗಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಕಂಪ್ಯೂಟರ್‌, ಇಂಟರ್ನೆಟ್‌ ಮತ್ತು ಸ್ಮಾರ್ಟ್‌ ಫೋನ್‌ಗಳು ಆಧುನಿಕ ಬದುಕಿನ ಆಧಾರಸ್ತಂಭಗಳಾಗಿವೆ. ಜೊತೆಗೆ ಅವು ದಿನನಿತ್ಯದ ಜೀವನದ ಸವಾಲುಗಳಾಗಿಯೂ ಪರಿಣಮಿಸಿವೆ. ಯುವಕ-ಯುವತಿಯರು ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ. ಅವುಗಳನ್ನು ಸೈಬರ್ ಕಳ್ಳರು ದುರುಪಯೋಗ ಪಡಿಸಿಕೊಳ್ಳುವ ಸಾದ್ಯತೆ ಹೆಚ್ಚು. ಈ ಕುರಿತು ಜಾಗೃತರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಸಿಕ್ಯಾಬ್ ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲ ಡಾ.ಸೈಯದ್ ಅಬ್ಬಾಸ್ ಅಲಿ, ಬೇಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥೆ ನೇತ್ರಾವತಿ ಪುರೋಹಿತ, ಮೆಕ್ಯಾನಿಕಲ್ ವಿಭಾಗದ ಆಶಿಪ್ ಇಕ್ಬಾಲ್ ದೊಡಮನಿ, ಡಾ.ಪ್ರೊ.ಸಚಿನ್ ಪಾಂಡೆ ಸೇರಿ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.