ಶಾಸಕರನ್ನಾಗಿ ಆಯ್ಕೆ ಮಾಡಿರುವ ಜನರ ಕಷ್ಟ- ಸುಖಗಳನ್ನು ಕೇಳಿದ್ದರೆ ಇಂತಹ ಸಮಸ್ಯೆಗಳು ಮತ್ತು ಚಳವಳಿ ಅವಶ್ಯಕತೆ ಇರುತ್ತಿರಲಿಲ್ಲ. ಶಾಸಕರು ಕೇವಲ ದುರಹಂಕಾರದ ಮಾತುಗಳನ್ನಾಡುತ್ತಿದ್ದು ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕೆ ಹೊರತು ನಾಲಿಗೆಯನ್ನು ಹರಿಬಿಡಬಾರದೆಂದು ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಗೆಜ್ಜಲಗೆರೆ ಹಾಗೂ ಗೊರವನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ನಗರಸಭೆಗೆ ಸೇರ್ಪಡೆಗೊಳಿಸಿರುವ ಕ್ರಮ ಖಂಡಿಸಿ ಸ್ಥಳೀಯ ನಿವಾಸಿಗಳು ಹಾಗೂ ಹೋರಾಟಗಾರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಜೆಡಿಎಸ್ ಪಕ್ಷ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮುಖಂಡರು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.

ರೈತ ಹುತಾತ್ಮರಾದ ನಾಥಪ್ಪ ಹಾಗೂ ಸಿದ್ಧಪ್ಪ ಅವರ ಸಮಾಧಿಗೆ ನಿಖಿಲ್ ಕುಮಾರಸ್ವಾಮಿ ಪೂಜೆ ನೆರವೇರಿಸಿ ಪುಷ್ಪನಮನ ಸಲ್ಲಿಸಿದರು.

ಬಳಿಕ ಮಾತನಾಡಿ, ಗೆಜ್ಜಲಗೆರೆ, ಗೊರವನಹಳ್ಳಿ, ಸೋಮನಹಳ್ಳಿ ಹಾಗೂ ಚಾಮನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ನಗರಸಭೆಗೆ ಸೇರಿಸಿರುವ ಸಂಬಂಧ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲು ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಮತ್ತು ಮಾಜಿ ಸಚಿವ ಅಶ್ವತ್ಥ್ ನಾರಾಯಣ ಅವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದರು.

ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ರೈತರ ಬೆನ್ನೆಲುಬಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಗ್ರಾಮಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶ ಪ್ರಗತಿ ಕಾಣುವುದೆಂಬ ಸಿದ್ಧಾಂತದ ಮೇಲೆ ತಾವು ರಾಜಕಾರಣ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಚುನಾವಣೆ ಸಂದರ್ಭಗಳಲ್ಲಿ ಕೈಕಾಲು ಮುಟ್ಟಿ ಮತ ಪಡೆದ ಚುನಾಯಿತ ಜನಪ್ರತಿನಿಧಿಗಳು ಜನಾಭಿಪ್ರಾಯ ಸಂಗ್ರಹಿಸಿ ತೀರ್ಮಾನ ಕೈಗೊಳ್ಳಬೇಕೇ ಹೊರತು ಏಕಾಏಕಿ ನಿರ್ಧಾರ ಕೈಗೊಳ್ಳುವುದು ತಪ್ಪು ಎಂದು ಶಾಸಕ ಕೆ.ಎಂ.ಉದಯ್ ಅವರ ಕ್ರಮವನ್ನು ಖಂಡಿಸಿದರು.

ಬುದ್ಧಿ ಜೀವಿಗಳು, ಪ್ರಜ್ಞಾವಂತರು ಇರುವ ಜಿಲ್ಲೆಯಲ್ಲಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಆದ್ಯತೆ ನೀಡಬೇಕೆ ಹೊರತು ಜನರ ವಿರೋಧದ ನಡುವೆಯೂ ತಪ್ಪು ನಿರ್ಧಾರಗಳನ್ನು ಕೈಗೊಳ್ಳಬಾರದೆಂದು ಪರೋಕ್ಷವಾಗಿ ಶಾಸಕರ ವಿರುದ್ಧ ಕಿಡಿಕಾರಿದರು.

ಗ್ರಾಮಗಳನ್ನು ಅಭಿವೃದ್ಧಿ ಮಾಡಲೇಬೇಕೆಂಬುದಾದರೆ ಪ್ರತಿ ಪಂಚಾಯಿತಿಗೆ ₹50 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಆಸ್ಪತ್ರೆ, ಶಾಲಾ ಕಾಲೇಜು ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲು ಮುಂದಾದರೆ ತಾವು ಸಹ ಕೈಜೋಡಿಸುವುದಾಗಿ ಹೇಳಿದರು.

ಗ್ರಾಮಗಳು ಪಂಚಾಯಿತಿಗಳಾಗಿ ಉಳಿಯುವ ಜತೆಗೆ ಗ್ರಾಮೀಣ ಸೊಗಡನ್ನು ಉಳಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಈ ಸಂಬಂಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಟ್ಟಿಗೆ ಗಂಭೀರವಾಗಿ ಚರ್ಚಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಲು ಸಮಯ ನಿಗಧಿ ಮಾಡುವುದಾಗಿ ಹೇಳಿದರು.

ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಪೊಲೀಸರು ಶಾಸಕರ ಗುಲಾಮರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾನೂನು ರಕ್ಷಿಸಬೇಕಾದವರೆ ಭಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆರೋಪಿಸಿದರು.

ಸುಖಾಸುಮ್ಮನೆ ಚಳವಳಿಗಾರರ ಮೇಲೆ ಪ್ರಕರಣ ದಾಖಲು ಮಾಡುತ್ತಿದ್ದಾರೆ. ತಾಲೂಕಿನಾದ್ಯಂತ ಪೊಲೀಸರ ದಬ್ಬಾಳಿಕೆ ಮಿತಿಮೀರಿದೆ. ಅಮಾಯಕರ ಮೇಲೂ ಇಲ್ಲಸಲ್ಲದ ಪ್ರಕರಣ ದಾಖಲಾಗುತ್ತಿದೆ. ಜತೆಗೆ ಚಳವಳಿಗಾರರನ್ನು ಹೆದರಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಇದಕ್ಕೆ ಪ್ರತಿಭಟನೆಕಾರರು ಭಯಪಡುವ ಅಗತ್ಯವಿಲ್ಲವೆಂದರು.

ಶಾಸಕರನ್ನಾಗಿ ಆಯ್ಕೆ ಮಾಡಿರುವ ಜನರ ಕಷ್ಟ- ಸುಖಗಳನ್ನು ಕೇಳಿದ್ದರೆ ಇಂತಹ ಸಮಸ್ಯೆಗಳು ಮತ್ತು ಚಳವಳಿ ಅವಶ್ಯಕತೆ ಇರುತ್ತಿರಲಿಲ್ಲ. ಶಾಸಕರು ಕೇವಲ ದುರಹಂಕಾರದ ಮಾತುಗಳನ್ನಾಡುತ್ತಿದ್ದು ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕೆ ಹೊರತು ನಾಲಿಗೆಯನ್ನು ಹರಿಬಿಡಬಾರದೆಂದು ಹರಿಹಾಯ್ದರು.

ಪ್ರತಿಭಟನೆಯಲ್ಲಿ ರೈತನಾಯಕಿ ಸುನಂದ ಜಯರಾಂ, ಜೆಡಿಎಸ್ ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಮನ್ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರು, ಪುರಸಭೆ ಮಾಜಿ ಅಧ್ಯಕ್ಷ ಎಂ.ಐ.ಪ್ರವೀಣ್, ಮುಖಂಡರಾದ ಜಿ.ಟಿ.ಪುಟ್ಟಸ್ವಾಮಿ, ಶೇಖರ್, ವೀರಪ್ಪ, ಕಂಡಯ್ಯ, ಜಿ.ಪಿ.ಯೋಗೇಶ್, ವೀರೇಶ್ , ಮಾಜಿ ಸಚಿವ ಡಿ.ಸಿ. ತಮ್ಮಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಮನ್ಮೂಲ್ ಮಾಜಿ ನಿರ್ದೇಶಕ ರಾಮಚಂದ್ರ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ದಿವ್ಯ ರಾಮಚಂದ್ರ ಶೆಟ್ಟಿ, ಗ್ರಾಪಂ ಅಧ್ಯಕ್ಷೆ ರಾಧಾ, ಮುಖಂಡರಾದ ಜಿ .ಟಿ .ಪುಟ್ಟಸ್ವಾಮಿ, ಜಿ .ಸಿ .ಮಹೇಂದ್ರ, ಜಿ.ಪಿ. ಯೋಗೇಶ್, ಜಿಎಸ್ ವೀರಯ್ಯ, ಚಂದ್ರಶೇಖರ್, ಜ.ಟಿ ಚಂದ್ರಶೇಖರ್, ಎಂಐ ಪ್ರವೀಣ್, ಸಿ.ಎಚ್. ರವಿ ಚನ್ನಸಂದ್ರ, ಅರವಿಂದ್ ಮತ್ತಿತರರಿದ್ದರು.