ಸಾರಾಂಶ
ಶಿರಸಿ: ಯುಕ್ತವಾದ ನಿದ್ರೆ ಮತ್ತು ಆಹಾರ ಇಹ-ಪರಗಳಿಗೆ ಸಾಧನ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀಮದ್ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.
ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಚಾತುರ್ಮಾಸ್ಯ ವ್ರತ ನಿರತರಾದ ಶ್ರೀಗಳು ಹಾಗೂ ಅವರ ಕರಕಮಲ ಸಂಜಾತರದ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯವರು ಮಂಜಗುಣಿ ಸೀಮೆಯ ಭಕ್ತರು ದರ್ಶನ ಪಡೆದು ಸೇವೆಯನ್ನು ಸಲ್ಲಿಸಿದರು.ಸುಲಭವಾದ ಉಪಾಯಗಳು ಎಲ್ಲರಿಗೂ ಬೇಕು. ದೊಡ್ಡದಾದ ಸಾಧನೆಗೂ ಕೂಡ ಸುಲಭವಾದ ಉಪಯಗಳನ್ನೇ ಎಲ್ಲರೂ ಅಪೇಕ್ಷೆ ಪಡುತ್ತಾರೆ. ಹಾಗೆಯೇ ಇಹದಲ್ಲಿ ಚೆನ್ನಾಗಿ ಬದುಕಿ ಪರದಲ್ಲಿ ಸದ್ಗತಿ ಪಡೆಯುವುದಕ್ಕೆ ಸುಲಭವಾದ ಉಪಾಯ ಇದ್ದರೆ ಅದು ನಮಗೆಲ್ಲರಿಗೂ ಬೇಕು. ಇಹಕ್ಕೂ ಪರಕ್ಕೂ ಎರಡಕ್ಕೂ ಒಂದೇ ಉಪಾಯ, ಅತ್ಯಂತ ಸುಲಭವಾಗಿಯೂ ಇದ್ದರೆ ಒಳ್ಳೆಯದು ಎಂಬ ಅಪೇಕ್ಷೆ ಹಲವರದ್ದು. ನಾವೆಲ್ಲರೂ ಸಹಜವಾಗಿ ಮಾಡುವ ನಿದ್ರೆ ಮತ್ತು ಆಹಾರ ಇವಗಳನ್ನೇ ಒಂದು ಪರಿಷ್ಕಾರವಾಗಿ ಮಾಡಿದಾಗ ಇಹ ಪರ ಎರಡಕ್ಕೂ ಸಾಧನೆಯಾಗುತ್ತದೆ. ಮತ್ತು ಸುಲಭವೂ ಆಗುತ್ತದೆ. ಅಂದರೆ ಇಹದಲ್ಲಿ ಆರೋಗ್ಯ, ಯೋಗಗಳು ಸಿದ್ಧಿಯಾಗುತ್ತದೆ. ಪರದಲ್ಲಿ ಸ್ವರ್ಗ ಹಾಗೂ ಮೊಕ್ಷದವರೆಗೂ ಹೋಗಲು ಸಾಧ್ಯ. ನಿದ್ರೆಯಲ್ಲಿ ಪರಿಷ್ಕಾರ ಅಂದರೆ ಸಾತ್ವಿಕವಾಗಿ ಇರಬೇಕು. ನಿದ್ರೆ ಅರೋಗ್ಯಪ್ರದವೂ ಆಗಿರಬೇಕು, ಯೋಗ ಸಿದ್ಧಿಗೂ ಸಾಧನವಾಗಬೇಕು, ಇಹ-ಪರದ ಸಾಧನೆಯೂ ಆಗಬೇಕು. ಇವೆಲ್ಲ ಆಗಬೇಕಾದರೆ ಸತ್ವಿಕವಾದ ನಿದ್ರೆ ಅತ್ಯವಶ್ಯಕ ಎಂದರು.
ನಿದ್ರೆಯಲ್ಲಿ ಹಲವು ಪ್ರಕಾರಗಳಿವೆ. ಅದರಲ್ಲಿ ಸಾತ್ವಿಕವಾದ ನಿದ್ರೆ. ಅದು ಹೇಗಿರುತ್ತದೆ ಎಂದರೆ ಸ್ವಪ್ನಗಳು ಇಲ್ಲದಿರುವ ನಿದ್ರೆ. ಬೆಳಗ್ಗೆ ಎದ್ದಾಗ ಮನಸ್ಸಿಗೆ ಒಂದು ಪ್ರಸನ್ನತೆ, ಉತ್ಸಾಹದ ಮನಸ್ಥಿತಿ ಇವುಗಳು ಬರುವಂತೆ ಬಂದರೆ ಅದು ಸಾತ್ವಿಕವಾದ ನಿದ್ರೆ. ಅಂತಹ ನಿದ್ರೆಯನ್ನು ಪಡೆಯಬೇಕಾದರೆ ಕೆಲವು ಕ್ರಮಗಳಿವೆ. ನಿದ್ರೆಗೆ ಹೋಗುವ ಮುಂಚೆ ದೇವರ ಧ್ಯಾನವನ್ನು ಮಾಡಿಕೊಂಡು ಹೋಗಬೇಕು. ನಿದ್ರೆಗಿಂತ ಮುಂಚೆ ಟಿವಿಯನ್ನು ನೋಡಬಾರದು. ಸ್ವಲ್ಪ ಹೊತ್ತು ಜಪ, ಸ್ತೋತ್ರಗಳನ್ನು ಮಾಡಿ ಅದೇ ಅನುಸಂಧಾನದಲ್ಲಿ ನಿದ್ರೆಗೆ ಹೋಗಬೇಕು. ಆಗ ಈ ಸಾತ್ವಿಕ ನಿದ್ರೆಯನ್ನು ಪಡೆಯಲು ಸಾಧ್ಯ. ರಾತ್ರಿಯ ಮಧ್ಯಭಾಗದಲ್ಲಿ ನಿದ್ರೆ ಇರಬೇಕು. ನಿದ್ರೆಯಿಂದ ಎದ್ದ ನಂತರವೂ ಭೂಮಿದೇವಿಗೆ ನಮಸ್ಕರಿಸಿ, ಪ್ರಾತಃಸ್ಮರಣೆಯೊಂದಿಗೆ ಎದ್ದರೆ ಅದು ಸಾತ್ವಿಕ ನಿದ್ರೆಯಾಗುತ್ತದೆ. ಬೆಳಗ್ಗಿನ ಜಾವದಲ್ಲಿ ಹಾಗೂ ಸಂಜೆಯ ವೇಳೆ ನಿದ್ರೆ ಮಾಡುವುದು ಒಳ್ಳೆಯದಲ್ಲ. ಬೆಳಗ್ಗೆ ಸೂರ್ಯೋದಯದ ಹತ್ತಿರ ಹಾಗೂ ಸಂಜೆಯ ಹೊತ್ತಿಗೆ ನಿದ್ರೆ ಮಾಡುವುದು ತಾಮಸಿಕ ನಿದ್ರೆಯಾಗುತ್ತದೆ. ಆರೋಗ್ಯಕ್ಕೂ ಒಳ್ಳೆಯದಲ್ಲ. ಇದರಿಂದ ತಮೋ ಗುಣ ಬೆಳೆಯುತ್ತದೆ. ಬುದ್ಧಿ ಮಂಕಾಗುತ್ತದೆ. ಆಲಸ್ಯ ಹೆಚ್ಚಾಗುತ್ತದೆ ಎಂದು ವಿವರಿಸಿದರು.ಯೋಗ ಸಾಧನೆಗೆ ನಿದ್ರೆ ಬಹಳ ಮುಖ್ಯವಾದ ಸಾಧನವಾಗಿದೆ. ಯಾವ ವೇಳೆಯಲ್ಲಿ ನಿದ್ರೆ ಮಾಡಬೇಕೊ ಅದೇ ವೇಳೆಯಲ್ಲಿ ನಿದ್ರೆ, ಯಾವ ವೇಳೆಯಲ್ಲಿ ನಿದ್ರೆ ಮಾಡಬಾರದೋ ಆ ವೇಳೆಯಲ್ಲಿ ಎಚ್ಚರಿರಬೇಕು. ಇವೆರಡೂ ಆರೋಗ್ಯಕ್ಕೆ ಕಾರಣವಾಗುತ್ತದೆ. ನಿದ್ರೆಯಲ್ಲಿ ಈ ರೀತಿಯಾದ ನಿಯಮಿತತನವು ಸಾತ್ವಿಕತೆಯನ್ನು ಉಂಟು ಮಾಡುತ್ತದೆ. ಆಹಾರದಲ್ಲಿ ಸಾತ್ವಿಕತೆ. ಆಹಾರದ ನಿಯಮ ಏನಿದೆ ಅದನ್ನು ಅನುಸರಿಸಿದರೆ ಆರೋಗ್ಯದಿಂದ ಇರಲು ಸಾಧ್ಯ ಎಂದರು.
ಹಿತವಾದ ಆಹಾರ, ಮಿತವಾದ ಆಹಾರ, ಋತವಾದ ಆಹಾರವನ್ನು ಸೇವಿಸುವವನು ಆರೋಗ್ಯವಂತನಗುತ್ತಾನೆ. ಆಹಾರದಲ್ಲಿ ಮಾಡುವ ಅನೇಕ ತಪ್ಪುಗಳು ದೀರ್ಘಕಾಲದ ನಂತರ ಮಹಾರೋಗಗಳಿಗೆ ಕಾರಣವಾಗುತ್ತದೆ. ಆಹಾರದಲ್ಲಿ ಮಿತಿ ಅತ್ಯಂತ ಅವಶ್ಯಕ. ಆಹಾರದ ಪರಿಮಾಣ ಅತಿಯಾಗಿ ಆದರೆ ಜೀರ್ಣಕ್ಕೆ ಕಷ್ಟವಾಗುತ್ತದೆ. ಶಾಸ್ತ್ರೋಕ್ತ ರೀತಿಯಲ್ಲಿ ಶಾಸ್ತ್ರೋಕ್ತ ಆಹಾರವನ್ನು ತೆಗೆದುಕೊಳ್ಳಬೇಕು. ದೇಹಕ್ಕೆ ಹಿತವಾದ ಆಹಾರವನ್ನೇ ಸೇವಿಸಬೇಕು. ಪ್ರತಿಯೊಂದು ಹಂತದಲ್ಲೂ ಆಹಾರದ ವ್ಯವಸ್ಥೆಯಲ್ಲಿ ತುಂಬಾ ತಪ್ಪುಗಳು ಆಗುತ್ತಿವೆ. ಸುಲಭವಾದ ಆರೋಗ್ಯದ ಸೂತ್ರವೆಂದರೆ ಮಿತವಾದ ಊಟ ಮಾಡಿ, ಊಟ ಆದ ನಂತರ ನೂರು ದೇವರ ನಾಮ ಜಪ ಮಾಡಿ, ನೂರು ಹೆಜ್ಜೆ ನಡೆದು, ಎಡಭಾಗ ಕೆಳಗೆ ಮಾಡಿ ಮಲಗಬೇಕು. ಇವುಗಳನ್ನು ಅನುಸರಿಸಿದರೆ ಸದಾ ಆರೋಗ್ಯ ನಮ್ಮದಾಗುತ್ತದೆ. ಯಾವ ರೋಗಗಳು ಬರುವುದಿಲ್ಲ. ಯಾವಾಗಲೂ ಹಿತ ಮಿತವಾದ ಆಹಾರವನ್ನೇ ಸೇವನೆ ಮಾಡುವುದು. ಅದು ಒಂದು ತಪಸ್ಸಾಗುತ್ತದೆ. ಅದೇ ಸ್ವರ್ಗ ಮೋಕ್ಷಗಳಿಗೆ ದಾರಿಯಾಗುತ್ತದೆ. ಆಹಾರವನ್ನು ಶಿವನ ಪ್ರೀತಿಗಾಗಿ ಸೇವಿಸಬೇಕು. ವೈಶ್ವಾನರ ಎಂಬ ಅಗ್ನಿಗೆ ನಾವು ಕೊಡುತ್ತಿರುವ ಹವಿಸ್ಸು ಇದು ಎಂಬ ಭಾವನೆಯಿಂದ ಆಹಾರವನ್ನು ಸೇವಿಸಿದರೆ ಅದೇ ತಪಸ್ಸಾಗುತ್ತದೆ. ಗಾಢವಾದ ದೇವರ ಸ್ಮರಣೆಯಿಂದಿಗೆ ಭೋಜನ ಮಾಡಿದರೆ. ಪಾಪ ಕ್ಷಯಕ್ಕೂ ಕಾರಣವಾಗುತ್ತದೆ ಪುಣ್ಯವೂ ಸಂಪಾದನೆಯಾಗುತ್ತದೆ. ಆದ್ದರಿಂದ ಆಹಾರ ಕೇವಲ ಹೊಟ್ಟೆ ತುಂಬಿಕೊಳ್ಳುವುದಕ್ಕೆ ಮಾತ್ರವಲ್ಲ ಆರೋಗ್ಯಕ್ಕೆ, ಯೋಗಕ್ಕೆ, ಇಹ - ಪರಗಳಿಗೆ ಸಾಧನ. ತಿಳಿದು ಮಾಡಿದರೆ ಇವೆಲ್ಲವೂ ಆಗುತ್ತದೆ. ನಿದ್ರೆ ಮತ್ತು ಆಹಾರ ಇವುಗಳನ್ನು ಯುಕ್ತವಾದ ರೀತಿಯಲ್ಲಿ ಮಾಡಿದರೆ ಇಹ-ಪರಕ್ಕೆ ಸಾಧನವಾಗುತ್ತದೆ. ಇದೇ ನಮ್ಮ ಧರ್ಮದ ಅತ್ಯಂತ ಸಾರವತ್ತಾದ ಭಾಗ ಎಂದರು.ಮಾತೆಯರು ಮತ್ತು ಮಹನೀಯರು ಶ್ರೀಮಠಕ್ಕೆ ಆಗಮಿಸಿ ಭಕ್ತಿಯಿಂದ ತಮ್ಮ ಸೇವೆಯನ್ನು ಸಲ್ಲಿಸಿದರು. ಬೆಳಗ್ಗೆಯಿಂದ ಮಾತೆಯರು ಶಂಕರ ಸ್ತೋತ್ರ ಪಠಣ, ಭಗವದ್ಗೀತಾ ಪಠಣ ಹಾಗೂ ಲಲಿತಾ ಸಹಸ್ರನಾಮದಿಂದ ಅರ್ಚನೆಯನ್ನು ಮಾಡಿದರು. ಮಹನೀಯರು ಗಾಯತ್ರಿ ಅನುಷ್ಠಾನವನ್ನು ಕೈಗೊಂಡರು. ಸೀಮೆಯ ಪ್ರಮುಖರಾದ ರತ್ನಾಕರ ಭಟ್, ರಾಮಚಂದ್ರ ಹೆಗಡೆ, ಕೃಷ್ಣಮೂರ್ತಿ ಭಟ್ ಮತ್ತಿತರರು ಇದ್ದರು.