ಉಡುಪಿ: ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ಮಲ್ಪೆ ವತಿಯಿಂದ ಉಡುಪಿಯ ಶ್ರೀ ಕೃಷ್ಣಾಪುರ ಮಠ, ಶ್ರೀ ಅದಮಾರು ಮಠ, ಶ್ರೀ ಪಲಿಮಾರು ಮಠ, ಶ್ರೀ ಪೇಜಾವರ ಮಠ ಹಾಗೂ ಶ್ರೀ ಸೋದೆ ವಾದಿರಾಜ ಮಠದ ಶ್ರೀಪಾದಂಗಳವರ ಸಂಕಲ್ಪದಂತೆ, ಶ್ರೀ ಈಶಪ್ರಿಯ ತೀರ್ಥರ ನೇತೃತ್ವದಲ್ಲಿ ಶ್ರೀಕೃಷ್ಣನು ಮಧ್ವರ ಭಕ್ತಿಗೆ ಒಲಿದು ಅವರ ಕೈ ಸೇರಿದ ಮಲ್ಪೆಯ ಕಡಲ ತೀರದ “ಶ್ರೀ ಆನಂದ ಶರಧಿ” ಎಂಬ ಪ್ರತಿಷ್ಠಾನದ ನೂತನ ನಿವೇಶನದಲ್ಲಿ ಮೇ 15ರಿಂದ 31ರವರೆಗೆ “ಅಧಿಕ ಜೇಷ್ಠ ಭಕ್ತಿಸುಧಾ ಭಜನಾ ಸ್ಪರ್ಧೆ” ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿ ವಿಜಯ ಕೊಡವೂರು ಸುದ್ದಿಗೋಷ್ಠಿಯಲ್ಲಿ ವಿವರರಿಸಿದರು.15 ದಿನಗಳ ಕಾಲ ಭಜನಾ ಸ್ಪರ್ಧೆ ಜೊತೆಗೆ ವೈವಿಧ್ಯಮಯ ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳಲಾಗಿದೆ. 15 ದಿನ ಕಾಲ ಈ ಸ್ಥಳದಲ್ಲಿ ಗುಡಿ ಕೈಗಾರಿಕೆ-ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ಜ. 15ರಂದು ಸಂಜೆ 4 ಗಂಟೆಗೆ ಹಲಸು-ಮಾವು ಮೇಳ ಉದ್ಘಾಟನೆ, ಮೇ 18ರಂದು ಮಧ್ಯಾಹ್ನ 3.30ಕ್ಕೆ ಮಲ್ಪೆ ಶ್ರೀ ವಡಭಾಂಡೇಶ್ವರದ ಬಲರಾಮ ದೇವಸ್ಥಾನದಿಂದ ಶ್ರೀ ಆನಂದ ಶರಧಿಯವರೆಗೆ ಗಣ್ಯರೊಂದಿಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ. ಮೇ 24ರಂದು ಬೆಳಿಗ್ಗೆ 7 ಗಂಟೆಗೆ ಗ್ರಾಮೀಣ ಕ್ರೀಡಾ ಸ್ಪರ್ಧೆಯ ಉದ್ಘಾಟನೆ ನಡೆಯಲಿದೆ ಎಂದರು.
ಭಜನಾ ಕಾರ್ಯಕ್ರಮದ ಸಂಚಾಲಕಿ ಕಮಲಾವತಿ ಅವರು ಮಾತನಾಡಿ, ಮೇ 18ರಂದು ಸಂಜೆ ಭಜನಾ ಸ್ಪರ್ಧೆ ಉದ್ಘಾಟನೆಗೊಳ್ಳಲಿದ್ದು 31ರವರೆಗೆ ನಡೆಯಲಿದೆ. ಪ್ರತಿ ದಿನ ಐದು ತಂಡಗಳಿಂದ ಭಜನೆ ನಡೆಯಲಿದೆ. ಕಿಶೋರ ತಂಡ, ಯುವಕರ ತಂಡ, ಪುರುಷರ ತಂಡ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಚಾಲಕರಾದ ಗೋವಿಂದರಾಜ್, ಮಂಜು ಕೊಳ ಮಲ್ಪೆ, ಸುಮಿತ್ರಾ ಕೆರೆಮಠ, ಸಂಘಟನಾ ಕಾರ್ಯದರ್ಶಿಗಳಾದ ರಾಧಾಕೃಷ್ಣ ಮೆಂಡನ್, ಪ್ರೀತಮ್ ಭಟ್, ಚಂದ್ರಕಾಂತ್ ಕೆ.ಎನ್., ಸಂತೋಷ್ ಕುಮಾರ್ ಉದ್ಯಾವರ ಉಪಸ್ಥಿತರಿದ್ದರು.31ರಂದು ಮಾತೃವಂದನಾ...ಕೊನೆಯ ದಿನ ಮೇ 31ರಂದು ಮಾತೃ ವಂದನಾ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಗ್ಗೆ 9ರಿಂದ ಸೌಭಾಗ್ಯ ಶರಧಿ ಕಾರ್ಯಕ್ರಮದಲ್ಲಿ ಮುತ್ತೈದೆಯರಿಗೆ ಅರಿಶಿನ ಕುಂಕುಮ ವಿತರಣೆ, ಬಳೆಗಾರನನ್ನು ಕರೆಸಿ ಅಲ್ಲಿಯೇ ಬಳೆ ಇಡುವ ಸಂಪ್ರದಾಯ ನಡೆಯಲಿದೆ. ಬಳಿಕ ಭಕ್ತಿ ಶರಧಿ-ಮಹಿಳೆಯರಿಂದ ವಿಷ್ಣು ಸಹಸ್ರನಾಮ ಪಠಣ, ಸಮೃದ್ಧಿ ಶರಧಿ-ಗೋಪೂಜೆ ಶುಭದೀಪ ಶರಧಿ-ಉದ್ಘಾಟನೆ, ಸಂದೇಶ ಶರಧಿ-ದಿಕ್ಸೂಚಿ ಭಾಷಣ, ವಂಧ್ಯಾ ಶರಧಿ-ಸಾಧಕ ಮಹಿಳೆಯರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದು ಕಾರ್ಯಕ್ರಮ ಸಂಚಾಲಕಿ ತಾರಾ ಉಮೇಶ್ ಆಚಾರ್ಯ ಮಾಹಿತಿ ನೀಡಿದರು.
