ಕನ್ನಡಪ್ರಭ ವಾರ್ತೆ ನಾಗಮಂಗಲ
ಆದಿಚುಂಚನಗಿರಿ ಮಠವು ಧರ್ಮ ಪರಾಯಣತೆ ಮತ್ತು ಸಕಾರಾತ್ಮಕ ಶಕ್ತಿಯ ಭೂಮಿಯಾಗಿ ಸಾಮಾಜಿಕ ಮತ್ತು ಧಾರ್ಮಿಕ ಪ್ರಗತಿಯಲ್ಲಿ ಮತ್ತು ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವಪೂರ್ಣವಾಗಿ ಕೆಲಸ ಮಾಡುತ್ತಿದೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮೆಚ್ಚುಗೆ ವ್ಯಕ್ತಪಡಿಸಿದರು.ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಸಭಾಂಗಣದಲ್ಲಿ ಆದಿಚುಂಚನಗಿರಿ ಅಣ್ವಿಕ ವೈದ್ಯಕೀಯ ಸಂಸ್ಥೆ, ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಅನುವಾದಾತ್ಮಕ ಸಂಶೋಧನೆಗಾಗಿ ಆರೋಗ್ಯ ವಿಜ್ಞಾನಗಳಲ್ಲಿ ಅಂತರಶಿಸ್ತೀಯ ವಿಧಾನಗಳು ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಶ್ರೀಮಠವು ಇದು ದೇಶದ ಪ್ರಸಿದ್ಧ ಮಠಗಳಲ್ಲಿ ಒಂದಾಗಿ 1800ಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿದೆ. ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳ ಮೂಲಕ ಸಮಾಜವನ್ನು ಸ್ವಾವಲಂಬಿಗಳನ್ನಾಗಿ ಮಾಡಲು, ಸಾಮಾಜಿಕ ಸಮಾನತೆ ಮತ್ತು ಸರಿಸಮಾನತೆ, ಸಮೃದ್ಧಿ, ಉತ್ಕೃಷ್ಟತೆ, ಸಶಕ್ತೀಕರಣ, ಉದ್ಯಮಶೀಲತೆ ಮತ್ತು ಜ್ಞಾನೋದಯಕ್ಕಾಗಿ ಎಲ್ಲರಿಗೂ ಅಮೂಲ್ಯವಾದ ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ ಎಂದು ಶ್ರೀಮಠದ ಕಾರ್ಯವನ್ನು ಬಣ್ಣಿಸಿದರು.ಶಿಕ್ಷಣ ತಜ್ಞರು, ಸಮಾಜ ಸೇವಕರು ಮತ್ತು ಮಹಾನ್ ಸಂತರಾಗಿದ್ದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳು ಸುಮಾರು ಐದು ದಶಕಗಳ ಕಾಲ ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಉಲ್ಲೇಖನೀಯ ಕೊಡುಗೆ ನೀಡಿದ್ದಾರೆ. ಅವರ ದರ್ಶನ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ ಜೋಡಿಸುವ ಅವರ ದರ್ಶನವು ಇಂದಿಗೂ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತಿದೆ ಎಂದರು.
ಅನ್ನ, ಅಕ್ಷರ, ಆರೋಗ್ಯ, ಆಧ್ಯಾತ್ಮಿಕತೆ, ಆಶ್ರಯ, ಅರಣ್ಯ, ಆಕಳು, ಅನುಕಂಪ ಮತ್ತು ಅನುಬಂಧದ ಮೂಲಕ ಸಮಾವೇಶಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಸುದೃಢವಾದ ಅಡಿಪಾಯ ಹಾಕಿದ್ದಾರೆ. ನಾನು ನಿರ್ಮಲಾನಂದನಾಥಶ್ರೀಗಳ ಕ್ರಿಯಾಶೀಲ ಮತ್ತು ದೂರದರ್ಶಿ ನಾಯಕತ್ವವನ್ನು ಶ್ಲಾಘನೆ ಮಾಡುತ್ತೇನೆ. ಅವರ ಮಾರ್ಗದರ್ಶನದಲ್ಲಿ ಶ್ರೀಮಠ ಇನ್ನಷ್ಟು ಎತ್ತರಕ್ಕೆ ತಲುಪುತ್ತಿದೆ. ಈ ಸಮ್ಮೇಳನದ ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ಇಂಟರ್-ಡಿಸಿಪ್ಲಿನರಿ ಅಪ್ರೋಚಸ್ ಇನ್ ಹೆಲ್ತ್ ಸೈನ್ಸಸ್ ಫಾರ್ ಟ್ರಾನ್ಸ್ಲಷನಲ್ ರಿಸರ್ಚ್ ಎಂಬ ವಿಷಯದ ಕುರಿತು ಆಯೋಜಿಸಿರುವ ಈ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಚರ್ಚೆಗಳು ಹೊಸ ವಿಚಾರಗಳನ್ನು ಪ್ರೇರೇಪಿಸುತ್ತದೆ. ಅಂತರಾಷ್ಟ್ರೀಯ ಸಹಯೋಗವನ್ನು ಉತ್ತೇಜಿಸಿ ಸಂಶೋಧನೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಆರೋಗ್ಯ ವಿಜ್ಞಾನದ ಉನ್ನತಿಗೆ ಮಹತ್ವದ ಕೊಡುಗೆ ನೀಡುತ್ತದೆ. ಈ ಸಮ್ಮೇಳನದ ಉಪಯುಕ್ತತೆ ದೇಶಕ್ಕೆ ಕೊಡುಗೆಯಾಗಲಿ ಎಂದರು.
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಮಾತನಾಡಿ, ಆದಿಚುಂಚನಗಿರಿ ವಿಶ್ವವಿದ್ಯಾಲಯ ಗುಣಮಟ್ಟದ ವಿದ್ಯಾಸಂಸ್ಥೆ. ಕೈಗೆಟುಕುವ ದರದಲ್ಲಿ ಗ್ರಾಮೀಣ ಬಡ ಜನರಿಗೆ ವೈದ್ಯಕೀಯ ಸೇವೆ ಸೇರಿದಂತೆ ಶಿಕ್ಷಣ ಕಲ್ಪಿಸುತ್ತಿದೆ. ಸರ್ಕಾರ ಮಾಡದ ಕೆಲಸವನ್ನು ಶ್ರೀಮಠ ಮಾಡುತ್ತಿದೆ ಎಂದು ಶ್ಲಾಘಿಸಿದರು.ಇಂದಿನ ಸಮ್ಮೇಳನವನ್ನು ನೋಡಿದಾಗ ಡಾ.ನಿರ್ಮಲಾನಂದನಾಥಶ್ರೀಗಳ ದೂರದೃಷ್ಟಿ ಕಾಣಿಸುತ್ತಿದೆ. ಪ್ರಸ್ತುತ ಜನರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಿಗೆ ವಿಭಿನ್ನ ಪರಿಹಾರಗಳ ಅವಶ್ಯಕತೆ ಇದೆ. ನಮ್ಮ ಭಾರತೀಯ ಪದ್ಧತಿಯು ಬಹಳ ಹಿಂದೆಯೇ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಮಟ್ಟಿಗೆ ವಿಕಸನಗೊಂಡಿತ್ತು. ನಿಮ್ಮ ಆಧುನಿಕ ವ್ಯವಸ್ಥೆಯು ನಮ್ಮ ಸನಾತನ ಮತ್ತು ಪ್ರಾಚೀನ ಜ್ಞಾನ ಪದ್ಧತಿಯನ್ನು ಸಂಯೋಜಿಸಿದರೆ ಮಾತ್ರ, ನಾವು ಒಂದು ಸಮಗ್ರ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಆಯುರ್ವೇದ ಅತ್ಯುತ್ತಮವಾದದ್ದು. ಅದನ್ನು ಅಲೋಪತಿಯೊಂದಿಗೆ ಸಂಯೋಜಿಸಿದರೆ, ಅದು ಒಂದು ಉತ್ತಮ ಪರಿಹಾರವನ್ನು ನೀಡುತ್ತದೆ. ಹಾಗೆಯೇ, ಕೃತಕ ಬುದ್ಧಿಮತ್ತೆ ಬಗ್ಗೆ ನಾವು ಏನು ಯೋಚಿಸುತ್ತಿದ್ದೇವೆಯೋ, ಅದು ಇಂದಿನ ಯುವ ಪೀಳಿಗೆಯ ಜ್ಞಾನ ಪದ್ಧತಿಯಾಗಿ ಕಂಡುಬರುತ್ತಿದೆ. ಕೃತಕ ಬುದ್ಧಿಮತ್ತೆ ಹಾನಿಕಾರಕವಾಗದಂತೆ ಸಮಾಜದ ಉಪಯುಕ್ತತೆಗೆ ಬಳಸಬೇಕಿದೆ ಎಂದರು.ಇಂದು ಹೆಲ್ತ್ ಕೇರ್ ಅನಿವಾರ್ಯ:
ಎಂಜಿನಿಯರ್ ಬಯಾಲಜಿಸ್ಟ್ ಎಲ್ಲರು ಕಲೆತು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಅನಿವಾರ್ಯತೆ ಇದೆ. ಮಾಡರ್ನ್ ಸೈನ್ಸ್ ಮನುಷ್ಯತ್ವದ ಸಂಕೇತವಾಗಬೇಕು. ನಿಮ್ಮ ಆರೋಗ್ಯ ನಿಮ್ಮ ಅಂಗೈಯ್ಯಲ್ಲಿರಲಿ ಎನ್ನುತ್ತಾ ಆಧ್ಯಾತ್ಮಿಕತೆ ಮತ್ತು ವೈದಿಕ ಪದ್ಧತಿಯು ಪ್ರಸ್ತುತ ಸಮಸ್ಯೆಗಳಿಗೆ ನಿಜವಾದ ಪರಿಹಾರವಾಗಬಲ್ಲದು. ಆದರೆ ಅದು ಆಧುನಿಕ ವ್ಯವಸ್ಥೆಯೊಂದಿಗೆ ಸಮ್ಮಿಳಿತಗೊಂಡಾಗ ಮಾತ್ರ ಸಾಧ್ಯ. ಈ ಸಮ್ಮೇಳನದಲ್ಲೂ ಇದನ್ನೇ ಚರ್ಚಿಸಿ ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸಿದರು.