ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಆದಿಹಳ್ಳಿಯ ಆದಿಚುಂಚನಗಿರಿ ಶಾಖಾಮಠದ ಆವರಣದಲ್ಲಿ ನೆಲೆಸಿರುವ ಆದಿಲಕ್ಷ್ಮೀ ಅಮ್ಮನವರ ಜಾತ್ರಾ ಮಹೋತ್ಸವವು ದೇವಾಲಯದ ಸಂಪ್ರದಾಯದಂತೆ ಭಕ್ತಿಭಾವ ಮತ್ತು ಧಾರ್ಮಿಕ ವೈಭವದ ಮಧ್ಯೆ ಆರಂಭಗೊಂಡಿದೆ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಆರಾಧ್ಯ ದೇವತೆಯಾಗಿರುವ ಅಮ್ಮನವರ ಜಾತ್ರೆಗೆ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.ಗೋಧೂಳಿ ವೇಳೆಯಲ್ಲಿ ಹಾಸನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಿದರು. ದೇವಾಲಯ ಆವರಣದಲ್ಲಿ ಭಕ್ತಿಭಾವದ ವಾತಾವರಣ ಮನೆಮಾಡಿದ್ದು, ಮೊದಲ ದಿನವೇ ಕ್ಷೇತ್ರವು ಭಕ್ತರಿಂದ ಕಿಕ್ಕಿರಿದಿತ್ತು. ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ಮುಖಂಡರು, ಭಕ್ತರು, ಮಹಿಳೆಯರು, ಯುವಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ರೆಯ ಯಶಸ್ಸಿಗೆ ಕೈಜೋಡಿಸಿದರು. ದೇವಾಲಯ ಆವರಣದಲ್ಲಿ ಭಕ್ತಿ, ಸಂಪ್ರದಾಯ ಮತ್ತು ಗ್ರಾಮೀಣ ಧಾರ್ಮಿಕ ಸಂಸ್ಕೃತಿಯ ಸುಂದರ ಸಂಗಮ ಕಂಡುಬಂತು.