ಭವಿಷ್ಯದಲ್ಲಿ ನೀರಿಗೆ ಬಿಕ್ಕಟ್ಟು ಎದುರಾಗಲಿದ್ದು, ರೈತರು ಸೂಕ್ಷ್ಮ ನೀರಾವರಿ ಪದ್ಧತಿ ಸೇರಿದಂತೆ ಹೊಸ ತಂತ್ರಜ್ಞಾನದ ಮೂಲಕ ನೀರು ನಿರ್ವಹಣೆ ಮಾಡಿಕೊಳ್ಳಬೇಕು ಎಂದು ಶಾಸಕ ಎನ್‌.ಎಚ್‌. ಕೋನರಡ್ಡಿ ಹೇಳಿದರು.

ಧಾರವಾಡ: ಭವಿಷ್ಯದಲ್ಲಿ ನೀರಿಗೆ ಬಿಕ್ಕಟ್ಟು ಎದುರಾಗಲಿದ್ದು, ರೈತರು ಸೂಕ್ಷ್ಮ ನೀರಾವರಿ ಪದ್ಧತಿ ಸೇರಿದಂತೆ ಹೊಸ ತಂತ್ರಜ್ಞಾನದ ಮೂಲಕ ನೀರು ನಿರ್ವಹಣೆ ಮಾಡಿಕೊಳ್ಳಬೇಕು ಎಂದು ಶಾಸಕ ಎನ್‌.ಎಚ್‌. ಕೋನರಡ್ಡಿ ಹೇಳಿದರು.

ಇಲ್ಲಿಯ ವಾಲ್ಮಿ ಸಂಸ್ಥೆಯಲ್ಲಿ ನಡೆದ ವಿಶ್ವಜಲ ದಿನ ಉದ್ಘಾಟನೆ ಮಾಡಿ ಮಾತನಾಡಿದರು.

ನೀರಿದ್ದರೆ ಮಾತ್ರ ಕೃಷಿ. ಹೀಗಾಗಿ, ರೈತರು ತಮ್ಮ ಭೂಮಿಯ ಪಾಲಿಗೆ ಬಂದ ನೀರನ್ನು ಸರಿಯಾಗಿ ಬಳಸಿಕೊಳ್ಳಬೇಕು. ಇತ್ತೀಚೆಗೆ ರೈತರು ಹೊಲಗಳನ್ನು ಮಾರಾಟ ಮಾಡುವ ಮೂಲಕ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಹೀಗಾಗದೇ ಹೆಸರು, ಗೋವಿನಜೋಳ, ಕಡಲೆಯಂತಹ ಸಾಂಪ್ರದಾಯಿಕ ಬೆಳೆ ಜೊತೆಗೆ ಲಾಭದಾಯಕ ಬೆಳೆಗಳನ್ನು ಬೆಳೆಯಬೇಕು ಎಂದರು.

2026ರಲ್ಲಿ ವಿಶ್ವ ಜಲ ದಿನದ ಘೋಷವಾಕ್ಯ ನೀರು ಮತ್ತು ಲಿಂಗ ಸಮಾನತೆ ಎಂಬುದಾಗಿದೆ. ಈ ವರ್ಷದ ಆಚರಣೆಯು ನೀರಿನ ಲಭ್ಯತೆ ಮತ್ತು ಮಹಿಳೆಯರ ಸಬಲೀಕರಣದ ನಡುವಿನ ಅವಿನಾಭಾವ ಸಂಬಂಧ ಎತ್ತಿ ತೋರಿಸುತ್ತದೆ. ನೀರು ಅಮೃತಕ್ಕೆ ಸಮಾನ. ನೀರಿನ ಮಹತ್ವ ಪ್ರತಿಯೊಬ್ಬರು ತಿಳಿಯಬೇಕು. ಬರೀ 4 ಟಿಎಂಸಿ ನೀರಿಗಾಗಿ ಮಹದಾಯಿ- ಕಳಸಾ ಬಂಡೂರಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಿಸಿದ್ದೇವೆ. ಕೇಂದ್ರ ಸರ್ಕಾರದ ಅನುಮತಿ ಪಡೆದ ನಂತರ ನಾಲ್ಕು ಜಿಲ್ಲೆಗಳಿಗೆ ಅನುಕೂಲವಾಗುತ್ತದೆ ಎಂದರು.

ಡ್ಯಾಂಗಳಲ್ಲಿ ಸಂಗ್ರಹಿಸಿದ ನೀರು, ಕಾಲುವೆ ಮೂಲಕ ಹರಿಸಿ ಒಕ್ಕಲುತನಕ್ಕೆ ಪೂರೈಸಲಾಗುತ್ತದೆ. ಕೃಷಿಗಾಗಿ ನೀರನ್ನು ಹರಿಸುವಾಗ ಹೊಲಗಳಿಗೆ ನೀರಿನ ಪೂರೈಕೆ ನಂತರ ಗೇಟ್ ಬಂದ್ ಮಾಡುವ ಸಂಕಲ್ಪವನ್ನು ರೈತರು ಮಾಡಬೇಕು ಎಂದರು.

ಪ್ರತಿ ಲೀಟರ್ ಶುದ್ಧೀಕರಣಕ್ಕೆ ಸರ್ಕಾರ ಸಾಕಷ್ಟು ವೆಚ್ಚ ಮಾಡುತ್ತಿದೆ. ಆದರೆ, ಅದೇ ನೀರನ್ನು ಕೆಲವು ಜನರು ಪೋಲು ಮಾಡುತ್ತಾರೆ. ಗೃಹಬಳಕೆಗೆ ನೀರನ್ನು ಮಿತವಾಗಿ ಬಳಕೆ ಮಾಡಬೇಕು. ವಾಲ್ಮಿ ಸಂಸ್ಥೆ ನೀರಿನ ಸಂರಕ್ಷಣೆಯ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.

ವಾಲ್ಮಿ ನಿರ್ದೇಶಕ ಡಾ. ಗಿರೀಶ ಮರಡ್ಡಿ ಅಧ್ಯಕ್ಷತೆ ವಹಿಸಿ, ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ ಈ ದಿನ ಆಚರಿಸಲಾಗುತ್ತದೆ. ವಾಲ್ಮಿ ಸಂಸ್ಥೆ ಕಳೆದ ಸಾಲಿನಲ್ಲಿ ನೂರಾರು ತರಬೇತಿ ನೀಡಿದೆ. ಪಶು ಆಧಾರಿತ, ಸಸ್ಯ ಆಧಾರಿತ, ಮೌಲ್ಯ ವರ್ಧಿತ ಒಕ್ಕಲುತನ ಮಾಡುವ ಮೂಲಕ ಕೃಷಿಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ಆಧುನಿಕ ಕೃಷಿ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು, ರಾಸಾಯನಿಕ ಬಳಕೆ ಕಡಿಮೆಗೊಳಿಸಿ ಸಾವಯವ ಗೊಬ್ಬರ ಬಳಕೆ ಹೆಚ್ಚಿಸಬೇಕು ಎಂದರು.

ಪ್ರಗತಿಪರ ರೈತ ವಿಜಯ ಕುಲಕರ್ಣಿ, ಡಾ. ಗಿರೀಶ ಸೋನವಾಲ್ಕರ, ಸದಾಶಿವಗೌಡ ಪಾಟೀಲ, ಬಿ.ವೈ. ಬಂಡಿವಡ್ಡರ, ವಿನೀತ ಮಲ್ಲಗೌಡರ, ಸುಧೀಂದ್ರ ಕೆ.ಎಸ್., ಸುರೇಶ ದಿಕ್ಷೀತ ಇದ್ದರು. ಪ್ರಗತಿಪರ ರೈತರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.