ಸಾತ್ವಿಕ ಗುಣ, ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಿ: ರಘುರಾಮ

| Published : Aug 01 2025, 12:30 AM IST

ಸಾರಾಂಶ

ನಮ್ಮ ಮುಂದಿನ ಆಯ್ಕೆ ನಮ್ಮ ಆರೋಗ್ಯವೇ ಆಗಿರಬೇಕು. ಮನಸ್ಸು ಬುದ್ಧಿ ಯಾವಾಗಲೂ ಒಳಿತನ್ನು ಆಲೋಚಿಸಬೇಕು.

ಹಾನಗಲ್ಲ: ಸಾತ್ವಿಕ ಗುಣ,ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ರಘುರಾಮ ತಿಳಿಸಿದರು.ಇಲ್ಲಿನ ಎನ್‌ಸಿಜೆಸಿ ಪದವಿಪೂರ್ವ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಯೋಜಿಸಿದ ಸ್ವಾಸ್ಥ್ಯ ಸಂಕಲ್ಪ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಮುಂದಿನ ಆಯ್ಕೆ ನಮ್ಮ ಆರೋಗ್ಯವೇ ಆಗಿರಬೇಕು. ಮನಸ್ಸು ಬುದ್ಧಿ ಯಾವಾಗಲೂ ಒಳಿತನ್ನು ಆಲೋಚಿಸಬೇಕು. ನಮ್ಮೊಳಗಿನ ಚಿಂತನೆಗಳು ಬದುಕನ್ನು ಉತ್ತಮವಾಗಿ ಕಟ್ಟುವ ಸಂಕಲ್ಪ ಹೊಂದಿರಬೇಕು. ಅದಕ್ಕಾಗಿ ಉತ್ತಮ ವಾತಾವರಣದಲ್ಲಿ ಬದುಕುವ ಯೋಚನೆ ಯೋಜನೆ ನಿಮ್ಮದಾಗಲಿ ಎಂದರು.ಸ್ವಾಸ್ಥ್ಯ ಸಂಕಲ್ಪ ಕುರಿತು ಉಪನ್ಯಾಸ ನೀಡಿದ ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಮನಸ್ಸು, ಶರೀರ ಆಲೋಚನೆಗಳ ಆರೋಗ್ಯದಿಂದ ಮಾತ್ರ ಸಂತಸ ಸೌಖ್ಯದ ಬದುಕು ಸಾಧ್ಯ. ಭಾವನಾತ್ಮಕ, ಆಧ್ಯಾತ್ಮಿಕ ಚಿಂತನೆಗಳು ಬದುಕಿಗೆ ಉತ್ತಮ ಮಾರ್ಗದರ್ಶನ ನೀಡಬಲ್ಲವು ಎಂದರು.ಪುರಸಭೆ ಮಾಜಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಮಾತನಾಡಿ, ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಒಳ್ಳೆಯ ಸಂಸ್ಕಾರ ನೀಡುವಂತಾಗಬೇಕು. ಎಲ್ಲೆಡೆ ಕಲುಷಿತ ವಿಚಾರ, ವಹಿವಾಟುಗಳು ಇಡೀ ಸಾಮಾಜಿಕ ವ್ಯವಸ್ಥೆಯನ್ನು ಅಂದಗೆಡಿಸುತ್ತಿವೆ. ಅದಕ್ಕಾಗಿ ಎಚ್ಚರಿಕೆಯ ನಡೆ ನುಡಿ ನಿಮ್ಮದಾಗಿರಲಿ ಎಂದರು.ಪ್ರಾಚಾರ್ಯ ಅನಿತಾ ಹೊಸಮನಿ, ಉಪನ್ಯಾಸಕರಾದ ರವಿ ಜಡೆಗೊಂಡರ, ಎಫ್.ಎಸ್. ಕಾಳಿ, ಕೆ.ಬಿ. ಶೇಷಗಿರಿ, ಎ.ಎಚ್. ಹಳ್ಳಳ್ಳಿ, ಮಂಜುನಾಥ ಎಸ್.ಎಲ್., ಅಕ್ಷತಾ ಕೂಡಲಮಠ, ಎನ್.ಎಸ್. ಗೌಳಿ ಪಾಲ್ಗೊಂಡಿದ್ದರು. ಸಿಂಚನಾ ಮಡಿವಾಳರ ಭಾವಗೀತೆಯನ್ನು ಹಾಡಿದರು. ನೇತ್ರಾವತಿ ಮಂಡಿಗನಾಳ ನಿರೂಪಿಸಿ, ವಂದಿಸಿದರು.ಸುಕೋ ಬ್ಯಾಂಕಿಗೆ ವ್ಯವಸ್ಥಾಪಕನಿಂದಲೇ ವಂಚನೆ

ಹಾವೇರಿ: ಸುಕೋ ಬ್ಯಾಂಕಿನ ಇಲ್ಲಿಯ ಶಾಖೆಯಲ್ಲಿ ವ್ಯವಸ್ಥಾಪಕನಾಗಿ ಸೇವೆ ಸಲ್ಲಿಸಿದ್ದ ವ್ಯಕ್ತಿಯೊಬ್ಬರು ಬ್ಯಾಂಕಿನ ₹68 ಲಕ್ಷ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

ಸವಣೂರಿನ ರಾಜಶೇಖರ ಶಿವಾನಂದ ಹೊಂಡದಕಟ್ಟಿ ಎಂಬವರ ವಿರುದ್ಧ ಬಳ್ಳಾರಿ ಮೂಲದ ಸುಕೋ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಗರ‍್ರಂ ಶೇಷಾದ್ರಿ ಅವರು ದೂರು ದಾಖಲಿಸಿದ್ದಾರೆ.ಆರೋಪಿ ಹಾವೇರಿ ಸುಕೋ ಬ್ಯಾಂಕಿನಲ್ಲಿ ಈ ಮೊದಲು ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಚಳ್ಳಕೇರಿ ಸುಕೋ ಬ್ಯಾಂಕಿಗೆ ವರ್ಗಾವಣೆಗಿದ್ದರು. ಹಾವೇರಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ 2025ರ ಜೂ. 5ರಿಂದ ಜು. 2ರ ಅವಧಿಯಲ್ಲಿ ಬ್ಯಾಂಕಿನ ವ್ಯವಸ್ಥಾಪಕರಿಗೆ, ಸಿಬ್ಬಂದಿಯವರಿಗೆ ನಂಬಿಕೆ ಬರುವಂತೆ ಮಾಡಿ ಒಟ್ಟು ₹68 ಲಕ್ಷ ಹಣವನ್ನು ನಗದು ರೂಪದಲ್ಲಿ ತೆಗೆದು ಸವಣೂರಿನ ದೈವಜ್ಞ ಗ್ರಾಮೀಣ ಸಹಕಾರಿ ಸಂಘಕ್ಕೆ ಕೊಡದೇ ಸ್ವಂತಕ್ಕೆ ಬಳಸಿಕೊಂಡು ಬ್ಯಾಂಕಿಗೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.