ಮಹಾಪುರುಷರ ಆದರ್ಶ ಅಳವಡಿಸಿಕೊಳ್ಳಿ

| Published : Dec 24 2023, 01:45 AM IST

ಸಾರಾಂಶ

ಕಳ್ಳತನ ಮಾಡುವುದು, ಸುಳ್ಳು ಹೇಳುವುದು, ಮೊಬೈಲ್‌ನಲ್ಲಿ ಬರುವ ಅಶ್ಲೀಲ ವೀಡಿಯೊ ನೋಡುವುದು, ಶೇರ್ ಮಾಡುವುದು ಹಾಗೂ ಹೆಣ್ಣು ಮಕ್ಕಳನ್ನು ಚುಡಾಯಿಸುವುದು ಗಂಭೀರ ಅಪರಾಧ

ಮುಂಡಗೋಡ: ಸ್ವಾಮಿ ವಿವೇಕಾನಂದರಂತಹ ಮಹಾಪುರುಷರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಿಪಿಐ ಬರಮಪ್ಪ ಲೋಕಾಪುರ ಹೇಳಿದರು.

ಪಟ್ಟಣದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಹಾಗೂ ಅಪರಾಧ ತಡೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳ್ಳತನ ಮಾಡುವುದು, ಸುಳ್ಳು ಹೇಳುವುದು, ಮೊಬೈಲ್‌ನಲ್ಲಿ ಬರುವ ಅಶ್ಲೀಲ ವೀಡಿಯೊ ನೋಡುವುದು, ಶೇರ್ ಮಾಡುವುದು ಹಾಗೂ ಹೆಣ್ಣು ಮಕ್ಕಳನ್ನು ಚುಡಾಯಿಸುವುದು ಗಂಭೀರ ಅಪರಾಧಗಳಾಗಿದ್ದು ಅವುಗಳಿಗೆ ಕಾನೂನಿನಲ್ಲಿ ಗಂಭೀರ ಸ್ವರೂಪದ ಶಿಕ್ಷೆಗಳಿವೆ. ಇಂತಹ ಅಪರಾಧಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಮಂಜುನಾಥ ಮರಿತಮ್ಮಣ್ಣವರ, ಮಕ್ಕಳು ಬದುಕಿನಲ್ಲಿ ಉತ್ತಮ ಗುರಿ ಇಟ್ಟುಕೊಂಡು ಆ ಗುರಿ ತಲುಪಲು ಶ್ರಮಿಸಿ ಯಶಸ್ಸು ಸಾಧಿಸಬೇಕು. ಆತ್ಮವಿಶ್ವಾಸದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದರು.

ಯಾವುದೇ ದುಶ್ಚಟಗಳ ದಾಸರಾಗಿ ತಮ್ಮ ಜೀವನ ವ್ಯರ್ಥಮಾಡಿಕೊಳ್ಳಬಾರದು. ಬಾಲಾಪರಾಧಗಳು ಮಾದಕ ದ್ರವ್ಯಗಳ ಸೇವನೆಯಿಂದ ದೂರವಿದ್ದು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಭಯ ಮುಕ್ತ ಹಾಗೂ ಧೈರ್ಯದ ಬದುಕು ನಿಮ್ಮದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಈ ವೇಳೆ ಉಪನ್ಯಾಸಕರಾದ ತನುಜಾ ನಾಯ್ಕ, ಸತೀಶ್ ಚಕ್ರಸಾಲಿ, ಶಿಕ್ಷಕರಾದ ಗಂಗಾಧರ, ಗೌಸ್ ಮುಜಮ್ಮಲ್ ಶೇಖ್ ಇದ್ದರು.