ಕನ್ನಡಪ್ರಭ ವಾರ್ತೆ ರಾಮದುರ್ಗ

ಕೃಷಿ ಮತ್ತು ರೈತರ ಬಗ್ಗೆ ಅತೀ ಹೆಚ್ಚು ಕಾಳಜಿ ಹೊಂದಿರುವ ಶಾಸಕ ಅಶೋಕ ಪಟ್ಟಣ ಅವರು ಈಗೀಗ ನಿರುತ್ಸಾಹ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ.25 ಸಾಲಹಳ್ಳಿಯಲ್ಲಿ ಗುರ್ಲಾಪೂರ ಮಾದರಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ತಾಲೂಕಾಧ್ಯಕ್ಷ ಜಗದೀಶ ದೇವರಡ್ಡಿ ಹೇಳಿದರು.

ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಸಕರು ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ವೀರಭದ್ರೇಶ್ವರ ಏತ ನೀರಾವರಿ ಆಸಕ್ತಿ ವಹಿಸಿ ಮಂಜೂರು ಮಾಡಿಸಿದ್ದಲ್ಲದೆ ಹೊಸದಾಗಿ ಸಾಲಾಪೂರ ಏತ ನೀರಾವರಿಗೆ ಕೂಡ ಅನುದಾನ ಬಿಡುಗಡೆ ಮಾಡಿಸಿ ಮುಖ್ಯಮಂತ್ರಿಗಳು, ಮಂತ್ರಿಗಳನ್ನು ಕರೆತಂದು ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಆದರೆ, ಕಾಮಗಾರಿ ಗುತ್ತಿಗೆ ಪಡೆದ ಎಜೆನ್ಸಿಗಳು ಯಾವ ರೀತಿ ಕೆಲಸ ನಡೆಸಿವೆ ಎಂಬುದನ್ನು ಮರೆತಿರುವ ಶಾಸಕರನ್ನು ಎಬ್ಬಿಸಲು ಈ ಹೋರಾಟ ಅನಿವಾರ್ಯವಾಗಿದೆ ಎಂದರು.ರಾಮದುರ್ಗ ತಾಲೂಕಿನಲ್ಲಿ ವೀರಭದ್ರೇಶ್ವರ ಏತ ನೀರಾವರಿ ಯೋಜನೆಗೆ ಭೂಸ್ವಾದೀನ ಪ್ರಕ್ರಿಯೆ ಕೇವಲ ಶೇ.5ರಷ್ಟು ಮಾತ್ರ ನಡೆದಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶೇ.80ರಷ್ಟು ಭೂಸ್ವಾದೀನ ಪಡೆದ ರೈತರಿಗೆ ಪರಿಹಾರ ನೀಡಲಾಗಿದೆ ಎಂದು ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಸಾಲಾಪೂರ ಏತ ನೀರಾವರಿ ಯೋಜನೆಗೆ ಭೂಸ್ವಾದೀನ ಮಾಡಿಕೊಂಡ ಭೂಮಿ ಮಾಲೀಕರಿಗೆ ಕವಡೆ ಕಾಸಿನ ಪರಿಹಾರ ಸಿಕ್ಕಿಲ್ಲ. ಇದೆಲ್ಲವನ್ನು ಸರಿ ಮಾಡುವ ಲಿಖಿತ ಉತ್ತರ ನೀಡಿದರೆ ಮಾತ್ರ ಸೋಮವಾರ ಹೋರಾಟ ಕೈ ಬಿಡಲಾಗುವುದು. ಇಲ್ಲದಿದ್ದರೆ ಜಿಲ್ಲೆಯ ಎಲ್ಲ ರೈತಪರ ಸಂಘಟನೆಗಳ ಪದಾಧಿಕಾರಿಗಳು ಸಾಲಹಳ್ಳಿಯಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸುರೇಶ ಪಾಟೀಲ, ವಿ.ಎಸ್.ಪಾಟೀಲ, ಈರನಗೌಡ ಪಾಟೀಲ, ಮಾರುತಿ ಕುಂಬಾರ, ಶಂಕರಗೌಡ ಪಾಟೀಲ ಸೇರಿದಂತೆ ಅನೇಕ ರೈತ ಮುಖಂಡರು ಪಾಲ್ಗೊಂಡಿದ್ದರು.--------

ಬಾಕ್ಸ್ಶಾಸಕ ಅಶೋಕ ಪಟ್ಟಣ ಸ್ಪಷ್ಟನೆ

ರಾಮದುರ್ಗ: ತಾಲೂಕಿನ ರೈತರ ಕನಸಿನ ಯೋಜನೆಗಳಾದ ವೀರಭದ್ರೇಶ್ವರ ಮತ್ತು ಬಸವೇಶ್ವರ ಏತ ನೀರಾವರಿ ಯೋಜನೆಗಳು ಪೂರ್ಣವಾಗಲು ಸರ್ಕಾರ ಹಾಗೂ ನಾನು ಬದ್ದವಾಗಿದ್ದೇನೆ ಎಂದು ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟ ಪಡಿಸಿದ್ದಾರೆ.ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ಯೋಜನೆಗಳು ನಿಂತು ಹೋಗಿವೆ. ವೀರಭದ್ರೇಶ್ವರ ಏತ ನೀರಾವರಿ ಯೋಜನೆಯ ಗುತ್ತಿಗೆದಾರರನ್ನು ಬದಲಾವಣೆ ಮಾಡಿ ಹೊಸ ಟೆಂಡರ್ ಕರೆದು 2027ರ ಡಿಸೆಂಬರ್ ವೇಳೆಗೆ ನೀರು ಹರಿಸಲಾಗುವುದು. ಶೇ.80ರಷ್ಟು ಪೂರ್ಣಗೊಂಡ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು 2027ರ ಮಾರ್ಚ್ ವೇಳೆಗೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.


ವೀರಭದ್ರೇಶ್ವರ ಏತ ನೀರಾವರಿ ಮೊದಲನೇ ಹಂತದಲ್ಲಿ ಭೂಸ್ವಾದೀನಗೊಂಡ ಒಟ್ಟು 58.13 ಎಕರೆ ಕ್ಷೇತ್ರದಲ್ಲಿ ಈಗಾಗಲೆ 52.10 ಎಕರೆ ಕ್ಷೇತ್ರವನ್ನು ಭೂಸ್ವಾದೀನ ಪಡಿಸಿ ಪರಿಹಾರವನ್ನು ವಿತರಿಸಲಾಗಿದೆ. ಬಾಕಿ 6.3 ಎಕರೆಗೆ ಕ್ಷೇತ್ರ ಭೂಸ್ವಾದೀನ ಆವಾರ್ಡ್‌ ಹಂತದಲ್ಲಿದ್ದು ಕೂಡಲೆ ಇದಕ್ಕೆ ಪರಿಹಾರ ಕಲ್ಪಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.ಈ ಯೋಜನೆ ಎರಡನೇ ಹಂತದಲ್ಲಿ (ಕಾಲುವೆಗಳ ಕಾಮಗಾರಿಗಳ) ಭೂಸ್ವಾದೀನಗೊಂಡ ಒಟ್ಟು 1084.20 ಎಕರೆ ಕ್ಷೇತ್ರದಲ್ಲಿ ಈಗಾಗಲೆ 153.10 ಎಕರೆ ಕ್ಷೇತ್ರವನ್ನು ಭೂಸ್ವಾದೀನ ಪಡಿಸಿ ಪರಿಹಾರ ವಿತರಿಸಲಾಗಿದೆ. ಬಾಕಿ 931.10 ಎಕರೆಗೆ ಭೂಸ್ವಾದೀನ ಪ್ರಕ್ರಿಯೆ ಜೆಎಂಸಿ ಹಾಗೂ ಅವಾರ್ಡ ಹಂತಗಳಲ್ಲಿದ್ದು ಸದರಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಪರಿಹಾರ ಕಲ್ಪಿಸುವುದಾಗಿ ತಿಳಿಸಿದ್ದಾರೆ.