ಸಾರಾಂಶ
ಕಾಯಕಯೋಗಿ ನುಲಿಯ ಚಂದಯ್ಯ ಜಯಂತ್ಯುತ್ಸವದಲ್ಲಿ
ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷಕನ್ನಡಪ್ರಭ ವಾರ್ತೆ ಬಳ್ಳಾರಿ
ಸಮಾಜ ಹಾಗೂ ಜನ ಸಾಮಾನ್ಯರ ಏಳ್ಗೆಗಾಗಿ ಪರಿತಪಿಸಿದ ವಿವಿಧ ಮಹನೀಯರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನ ನಡೆಸಬೇಕು. ಎಲ್ಲರೂ ಸಂಘಟಿತರಾಗಿ ದುಶ್ಚಟಗಳಿಂದ ದೂರವಿದ್ದು, ಸರ್ಕಾರದ ಯೋಜನೆಗಳನ್ನು ಸದುಪಯೋಗಪಡೆದುಕೊಳ್ಳಬೇಕು ಎಂದು ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್ ಹೇಳಿದರು.ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕಾಯಕಯೋಗಿ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದ ಅನುಭವ ಮಂಟಪದಲ್ಲಿ ವಚನಕಾರರಾಗಿದ್ದ ನುಲಿಯ ಚಂದಯ್ಯ ಕಾಯಕ ದಾಸೋಹಿಗಳಾಗಿದ್ದರು. ವಚನಕಾರರ ಕಾಲದ ಕಾಯಕಜೀವಿಗಳು ಎಲ್ಲ ಸಮುದಾಯಗಳ ಜತೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬೆರೆತು ಸೌಹಾರ್ದತೆಯ ಬದುಕು ಕಟ್ಟಿಕೊಟ್ಟರು. ಅದರಲ್ಲಿ ನುಲಿಯ ಚಂದಯ್ಯ ಒಬ್ಬರು. ಸಮಾಜದಲ್ಲಿ ಸಮಾನತೆ ತರಲು, ಸ್ವಾಸ್ಥ್ಯ ಕಾಪಾಡಲು ಹಾಗೂ ಸ್ವಾರ್ಥ ರಹಿತ ಜೀವನ ರೂಪಿಸಿಕೊಳ್ಳಲು 12ನೇ ಶತಮಾನದ ವಚನಕಾರರು ಮಾಡಿದ ಕಾರ್ಯವನ್ನು ಯಾರೂ ಮಾಡಲು ಸಾಧ್ಯವಿಲ್ಲ. ಬಸವಣ್ಣನವರ ನೇತೃತ್ವದಲ್ಲಿ ಹತ್ತಾರು ಶರಣರು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದರು ಎಂದು ಸ್ಮರಿಸಿದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಮಾತನಾಡಿ, ನುಲಿಯ ಚಂದಯ್ಯ ಅವರು ಶ್ರೇಷ್ಠ ಕಾಯಕ ಯೋಗಿಯಾಗಿದ್ದರು, ತಮ್ಮ ವೃತ್ತಿಯ ಬಗ್ಗೆ ಅಪಾರ ಗೌರವ ಹೊಂದಿದ್ದರು. ವೃತ್ತಿಯಿಂದ ಬಂದಂತಹ ಆದಾಯದಲ್ಲಿ ತಮ್ಮ ಜೀವನಕ್ಕೆ ಅಲ್ಪ ವ್ಯಯಮಾಡಿಕೊಂಡು ಉಳಿದ ಹಣದಲ್ಲಿ ಜಂಗಮರ ದಾಸೋಹಕ್ಕಾಗಿ ಮೀಸಲಿಟ್ಟಿದ್ದು, ಅವರ ನಿಸ್ವಾರ್ಥ ಸೇವೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಸಿಂಧನೂರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ಗಂಗಾಧರ ಎಲ್. ಉಪನ್ಯಾಸ ನೀಡಿದರು. ನುಲಿಯ ಚಂದಯ್ಯನವರು ಸುಮಾರು ಕ್ರಿಶ 1,130ರಲ್ಲಿ ವಿಜಯಪುರ ಜಿಲ್ಲೆಯ ಶಿವಣಿಗೆ ಗ್ರಾಮದಲ್ಲಿ ಜನಿಸಿದರು. ನಂತರ ಬಸವಣ್ಣನ ಕಾರ್ಯಕ್ಷೇತ್ರ ಕಲ್ಯಾಣಕ್ಕೆ ಬಂದರು. ಕಲ್ಯಾಣದ ಕೆರೆಗಳಲ್ಲಿ ಸಿಗುವ ಹೊಡಕೆ, ಚೇಣಿ ಮುಂತಾದ ನಾರುಗಳಿಂದ ಹಗ್ಗ ಹೊಸೆದು ಮಾರಾಟ ಮಾಡಿ ಬಂದ ಹಣದಿಂದ ಜಂಗಮ ದಾಸೋಹ ನಡೆಸುತ್ತಿದ್ದರು. ಈ ರೀತಿ ನುಲಿಯ ಕಾಯಕದಿಂದಾಗಿ ಮುಂದೆ ನುಲಿಯ ಚಂದಯ್ಯನೆಂದು ಹೆಸರಾದರು. ಕಲ್ಯಾಣದಲ್ಲಿ 1160ರ ವೇಳೆಯಲ್ಲಿ ನಡೆಯುತ್ತಿದ್ದ ಅನುಭವ ಗೋಷ್ಠಿಗಳಲ್ಲಿ ಇವರು ಚಂದೇಶ್ವರ ಲಿಂಗ ಎಂಬ ಅಂಕಿತನಾಮದಲ್ಲಿ ಸುಮಾರು 48 ವಚನ ರಚಿಸಿದ್ದಾರೆ ಎಂದು ತಿಳಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಪ್ರಾಸ್ತಾವಿಕ ಮಾತನಾಡಿದರು.ಕೊರವ ಸಮಾಜದ ಜಿಲ್ಲಾಧ್ಯಕ್ಷ ಶ್ರೀರಾಮುಲು, ಗೌರವಾಧ್ಯಕ್ಷ ಶಂಕರಪ್ಪ ಸೇರಿದಂತೆ ಸಮುದಾಯದ ಮುಖಂಡರು, ಮಹಿಳೆಯರು ಇತರರಿದ್ದರು.
ಮೆರವಣಿಗೆ:ಕಾಯಕಯೋಗಿ ನುಲಿಯ ಚಂದಯ್ಯ ಜಯಂತ್ಯುತ್ಸವ ಅಂಗವಾಗಿ ನಗರದಲ್ಲಿ ನುಲಿಯ ಚಂದಯ್ಯ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಪೂರ್ಣ ಕುಂಭ ಹೊತ್ತ ಮಹಿಳೆಯರು ಹಾಗೂ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿದ್ದವು.
ನಗರದ ಕೊರವ ಸಮುದಾಯ ಭವನ ಆವರಣದಿಂದ ಆರಂಭವಾಗಿ ಕೊರವ ಬೀದಿ-ಸುಂಕ್ಲಮ್ಮ ದೇವಸ್ಥಾನ-ಕೌಲ್ ಬಜಾರ್ ಮುಖ್ಯರಸ್ತೆ-ವಾಲ್ಮೀಕಿ ಭವನ-ಡಾ. ಬಾಬು ಜಗಜೀವನರಾಂ ಭವನದ ಮೂಲಕ ಡಾ. ಜೋಳದರಾಶಿ ದೊಡ್ಡನಗೌಡ ರಂಗಮದಿರದ ವೇದಿಕೆ ಸಭಾಂಗಣಕ್ಕೆ ತಲುಪಿ ಮೆರವಣಿಗೆ ಸಂಪನ್ನಗೊಂಡಿತು.