ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹಡೆದ ಮಕ್ಕಳಿಗಿಂತ ಪಡೆದ ಮಕ್ಕಳು ಶ್ರೇಷ್ಠರು, ತಾಯಿ 9 ತಿಂಗಳು ಹೆತ್ತು ಹೊತ್ತು ಪಡೆದ ಮಕ್ಕಳಿಗಿಂತ ಶಿಕ್ಷಕ ತನ್ನ ಶಾಲೆಯಲ್ಲಿ ಪಡೆದ ಮಕ್ಕಳನ್ನು ಹೆತ್ತ ಮಕ್ಕಳಂತೆ ಕಾಣುವುದು ಉತ್ತಮ ಶಿಕ್ಷಕನ ಲಕ್ಷಣ. ಶಿಕ್ಷಕ ಪಂಚೇಂದ್ರೀಯಗಳ ಮೇಲೆ ಹಿಡಿತ ಸಾಧಿಸಿ ಬೋಧನೆ ಮಾಡುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುತ್ತದೆ ಎಂದು ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಡಾ.ಸಪ್ನಾ ಅನಿಗೋಳ ಹೇಳಿದರು.ಬವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯ ಆಯೋಜಿಸಿದ್ದ 2023-24 ನೇ ಸಾಲಿನ ಪಠ್ಯಪೂರಕ ಚಟುವಟಿಕೆಗಳ ಪ್ರಾರಂಭ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಕ ವೃತ್ತಿ ಪವಿತ್ರವಾದದ್ದು ಶಿಕ್ಷಕ ಒಳ್ಳೆಯ ಆಲೋಚನೆ, ಒಳ್ಳೆಯ ವಿಚಾರ, ಒಳ್ಳೆಯ ಹವ್ಯಾಸಗಳನ್ನೂ ತನ್ನ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರಿಂದ ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಸಾಗುತ್ತಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ.ರಾಜೇಶ್ವರಿ ತೆಗ್ಗಿ ಹೇಳಿದರು.
ಐಕ್ಯೂಎಸ್ಸಿ ಸಂಯೋಜಕರಾದ ಡಾ.ಸಿದ್ದಪ್ಪ ಭೂಮನ್ನವರ ಪ್ರಾಸ್ತಾವಿಕವಾಗಿ ಮಾತನಾಡಿ, ನಾವು ಬದುಕಿರೋದು ಸಾಯೋದಕ್ಕಲ್ಲ, ಏನಾದರೂ ಸಾಧನೆ ಮಾಡೋದಕ್ಕೆ ಎಂದು ಹೇಳಿದರು.ವೇದಿಕೆ ಮೇಲೆ ವಿದ್ಯಾರ್ಥಿ ಪ್ರತಿನಿಧಿಗಳಾದ ವಿನಾಯಕ ಹಿರೇಮಠ, ಮಾಲಾ ಗದ್ದಿಗೌಡರ, ಭಾಗ್ಯವತಿ ಯಾವಗಲ್ ಹಾಗೂ ಅಭಿಷೇಕ ಭಾರಕೆರ ಉಪಸ್ಥಿತರಿದ್ದರು. ಗೀತಾ ಮಟ್ಟಿಕ್ಕಲ್ಲಿ ಪ್ರಶಸ್ತಿಗಳನ್ನು ವಿತರಿಸಿದರು. ಡಾ.ರಮೇಶ ಯಾನಮಶೆಟ್ಟಿ ಸ್ವಾಗತಿಸಿ ಪರಿಚಯಿಸಿದರು. ಪ್ಯಾಟಿಶೆಟ್ಟರ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಧ್ಯಕ್ಷ ವೆಂಕಟೇಶ ರೋಡನ್ನವರ ವಂದಿಸಿದರು. ನಾಗರಾಜ ಸರ್ವದೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸಿತರಿದ್ದರು.