ಸಾರಾಂಶ
- ವಿಶೇಷ ದತ್ತು ಸಂಸ್ಥೆ ಅಮೂಲ್ಯ ಕೇಂದ್ರ ಘಟಕ ಉದ್ಘಾಟನೆ । 2-3 ತಿಂಗಳಿನ ಐದು ಅನಾಥ ಕೂಸುಗಳಿಗೆ ನಾಮಕರಣ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಹೆತ್ತವಳಿಗೆ ಬೇಡವಾದ ಶಿಶುವನ್ನು ಆಕೆಗಿಂತಲೂ ಮಿಗಿಲಾಗಿ, ಪ್ರೀತಿಯಿಂದ ಆರೈಕೆ ಮಾಡುವ ಮೂಲಕ ದಾವಣಗೆರೆಯ ದತ್ತು ಸ್ವೀಕಾರ ಕೇಂದ್ರ ಮಾದರಿ ಮಾತೃತ್ವದ ಕೆಲಸ ಮಾಡುತ್ತಿದೆ. ಇಂತಹ ಕಡೆ ತಮ್ಮ ಮಕ್ಕಳ ಜನ್ಮದಿನ, ಹೊಸ ವರ್ಷ, ಹಬ್ಬ ಆಚರಿಸುವ ಮೂಲಕ ಇಲ್ಲಿನ ಮಕ್ಕಳನ್ನೂ ಸಂಭ್ರಮದಲ್ಲಿ ಭಾಗಿದಾರರಾಗಿ ಮಾಡಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ನಗರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶೇಷ ದತ್ತು ಸಂಸ್ಥೆ ಅಮೂಲ್ಯ(ಜಿ) ಕೇಂದ್ರ ಘಟಕ-2 ಮತ್ತು ಫಿಜಿಯೋಥೆರಪಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಹೆತ್ತ ತಾಯಿಯೂ ಮಾಡದಷ್ಟು ಆರೈಕೆಯನ್ನು ಇಲ್ಲಿ ಮಕ್ಕಳಿಗೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಎಲ್ಲಿಯೋ ಬಿಟ್ಟು ಹೋದ ಕೂಸು, ಹೆತ್ತ ಅಮ್ಮನಿಗೆ ಬೇಡವಾದ ಶಿಶುಗಳನ್ನು ಮಕ್ಕಳ ದತ್ತು ಸ್ವೀಕಾರ ಕೇಂದ್ರದಲ್ಲಿ ತಾಯಿಯ ಕರುಳ ಬಳ್ಳಿಯಂತೆ ನೋಡಿಕೊಳ್ಳಲಾಗುತ್ತದೆ. ಎರಡು ದಿನದ ನವಜಾತ ಶಿಶುವಿನಿಂದ 2 ತಿಂಗಳವರೆಗೆ ಶಿಶುಗಳು ದತ್ತು ಕೇಂದ್ರಕ್ಕೆ ತಲುಪುತ್ತವೆ. ಕೇಂದ್ರದಲ್ಲಿ 10 ಮಕ್ಕಳನ್ನು ಪೋಷಿಸಲು ಮಾತ್ರ ಅವಕಾಶವಿದೆ. ಆದರೆ, 27 ಮಕ್ಕಳು ಇಲ್ಲಿ ದಾಖಲಾಗಿವೆ. ಸುಮಾರು 2 ತಿಂಗಳಿನಿಂದ 3 ತಿಂಗಳ 5 ಮಕ್ಕಳಿಗೆ ನಾಮಕರಣ ಮಾಡಿದ್ದು, ಖುಷಿ ತಂದಿದೆ. ವಾತ್ಸಲ್ಯ ಸದನಕ್ಕಾಗಿ ಸ್ಥಳದ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಂಸದರು ಭರವಸೆ ನೀಡಿದರು.ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಪಂ ಸಿಇಒ ಸುರೇಶ ಬಿ. ಇಟ್ನಾಳ, ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ, ಡಿಎಚ್ಒ ಡಾ.ಷಣ್ಮುಖ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ ಸೇರಿದಂತೆ ಅಧಿಕಾರಿ, ಸಿಬ್ಬಂದಿ, ಕೇಂದ್ರದ ಆಯಾಗಳು, ಸಿಬ್ಬಂದಿ, ಮಕ್ಕಳು ಇದ್ದರು.
- - - ಬಾಕ್ಸ್* ಆರೋಗ್ಯದ ಮೇಲೆ ಅತ್ಯುನ್ನತಮಟ್ಟದ ನಿಗಾ, ಭದ್ರತೆ- 64 ಮಕ್ಕಳು ಸ್ವದೇಶಿ ದಂಪತಿ, 9 ಮಕ್ಕಳು ವಿದೇಶಿ ದಂಪತಿಯಿಂದ ದತ್ತು ಸ್ವೀಕಾರ ನವಜಾತ ಶಿಶುಗಳನ್ನು ಎಷ್ಟೇ ನಿಗಾವಹಿಸಿ ಪೋಷಿಸಿದರೂ ಅನಾರೋಗ್ಯದಿಂದು ಶಿಶುಗಳು ಬಳಲುತ್ತವೆ. ಆದರೆ, ಈ ದತ್ತು ಕೇಂದ್ರದಲ್ಲಿ ಅಷ್ಟೇ ಸುರಕ್ಷಿತವಾಗಿ ಕೂಸುಗಳನ್ನು ಪೋಷಣೆ ಮಾಡಲಾಗುತ್ತದೆ. ಸೊಳ್ಳೆಗಳ ತಡೆಗೆ ಮೆಸ್, ಹೊಸ ತೊಟ್ಟಿಲು, ಮಕ್ಕಳ ಬಟ್ಟೆ ತೊಳೆಯಲು ವಾಷಿಂಗ್ ಮೆಶಿನ್ಗಳಿವೆ. ಆಯಾಗಳು ಮಕ್ಕಳನ್ನು ಹೇಗೆ ಪೋಷಿಸುತ್ತಾರೆ. ಅದರ ಮೇಲೆ ನಿಗಾ ವಹಿಸಲು ಸಿಸಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ಸಹ ಇಲ್ಲಿದೆ.
8 ಜನ ಆಯಾಗಳು, ಇಬ್ಬರು ಸಾಮಾಜಿಕ ಕಾರ್ಯಕರ್ತರು, ಇಬ್ಬರು ಸಂಯೋಜಕರು, ಒಬ್ಬ ಶುಶ್ರೂಷಕಿ ಸೇರಿ 13 ಸಿಬ್ಬಂದಿ ದತ್ತು ಸ್ವೀಕಾರ ಕೇಂದ್ರದಲ್ಲಿದ್ದಾರೆ. ಆಯಾಗಳು ಪ್ರತಿ 4 ಗಂಟೆಗೆ ಒಬ್ಬರಂತೆ 3 ಪಾಳಿಯಲ್ಲಿ ತಾಯಿಯಂತೆ ಕೆಲಸ ಮಾಡುವರು. ಯಾವುದೇ ಮಗು ಕೇಂದ್ರಕ್ಕೆ ಬಂದ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಾಹಿತಿ ದಾಖಲು ಮಾಡಲಾಗುತ್ತದೆ.ಮಗುವಿನ ಕುರಿತು ಪತ್ರಿಕೆಗಳಿಗೆ ಮಾಹಿತಿ ನೀಡಲಾಗುತ್ತದೆ. ಅನಂತರ ವಾರಸುದಾರರಿಗಾಗಿ 2 ತಿಂಗಳು ಕಾಯಲಾಗುತ್ತದೆ. ಯಾರೂ ಬಾರದಿದ್ದರೆ ಮಕ್ಕಳ ಸಂರಕ್ಷಣಾ ಸಮಿತಿಯಿಂದ ಈ ಮಗು ಅನಾಥ ಎಂಬುದಾಗಿ ಅನುಮತಿ ಪಡೆದು, ದತ್ತು ಸ್ವೀಕಾರ ಕೇಂದ್ರಕ್ಕೆ ಪಡೆಯಲಾಗುತ್ತದೆ. ಬಳಿಕ ಮಗುವಿನ ವಿವರ ಆನ್ಲೈನ್ಗೆ ಹಾಕಲಾಗುತ್ತದೆ. ಆನ್ಲೈನ್ನಲ್ಲೇ ದತ್ತು ಪಡೆಯ ಬಯಸುವ ಪೋಷಕರು ಕೂಡ ತಮ್ಮ ಮಾಹಿತಿ ನಮೂದಿಸುತ್ತಾರೆ. ಅನಂತರ ಪೋಷಕರ ಹಿನ್ನೆಲೆ, ಉದ್ದೇಶಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ. ಎಲ್ಲವೂ ಸರಿ ಕಂಡುಬಂದಲ್ಲಿ ಸಾಕುವ ಪೋಷಕರಿಗೆ ಮಗುವನ್ನು ದತ್ತು ನೀಡಲಾಗುತ್ತದೆ.
ಒಂದು ಮಗು ದತ್ತು ಪಡೆಯಲು ಕನಿಷ್ಠ 1 ವರ್ಷ ಬೇಕಾಗುತ್ತದೆ. ಹೀಗೆ ಸ್ವೀಕರಿಸಿದ ನಂತರ 2 ವರ್ಷದವರೆಗೂ ದತ್ತು ಕೇಂದ್ರ ಮಗುವಿನ ಪೋಷಣೆ ಕುರಿತು ಕಾಲಕಾಲಕ್ಕೆ ವರದಿ ಸಂಗ್ರಹಿಸುತ್ತದೆ. ದಾವಣಗೆರೆಯಲ್ಲಿ 2012ರಿಂದ ದತ್ತು ಸ್ವೀಕಾರ ಕೇಂದ್ರ ಆರಂಭವಾಗಿದ್ದು, ಈವರೆಗೆ ಸುಮಾರು 212 ಮಕ್ಕಳನ್ನು ದಾಖಲಿಸಿಕೊಂಡಿದ್ದಾರೆ. ಈವರೆಗೆ 73 ಮಕ್ಕಳನ್ನು ದತ್ತು ನೀಡಲಾಗಿದೆ. ಅದರಲ್ಲಿ 64 ಮಕ್ಕಳ ಸ್ವದೇಶಿ ದಂಪತಿ ಹಾಗೂ 9 ಮಕ್ಕಳು ವಿದೇಶಿ ದಂಪತಿ ದತ್ತು ಸ್ವೀಕರಿಸಿದ್ದಾರೆ.- - - -3ಕೆಡಿವಿಜಿ8.ಜೆಪಿಜಿ: ದಾವಣಗೆರೆಯಲ್ಲಿ ವಿಶೇಷ ದತ್ತು ಸಂಸ್ಥೆ ಅಮೂಲ್ಯ(ಜಿ) ಕೇಂದ್ರ ಘಟಕ-2 ಮತ್ತು ಫಿಜಿಯೋಥೆರಪಿ ಕೇಂದ್ರವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿದರು. -3ಕೆಡಿವಿಜಿ9, 10.ಜೆಪಿಜಿ: ದಾವಣಗೆರೆಯಲ್ಲಿ ವಿಶೇಷ ದತ್ತು ಸಂಸ್ಥೆ ಅಮೂಲ್ಯ(ಜಿ) ಕೇಂದ್ರ ಘಟಕ-2 ಮತ್ತು ಫಿಜಿಯೋಥೆರಪಿ ಕೇಂದ್ರ ಉದ್ಘಾಟಿಸಿದರು. ಅನಂತರ ಐದು ಕೂಸುಗಳ ನಾಮಕರಣ ಸಂಭ್ರಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪಾಲ್ಗೊಂಡರು.