ಕನ್ನಡಪ್ರಭ ವಾರ್ತೆ ಚಿಂತಾಮಣಿ
ಗಾಂಜಾ, ಅಫೀಮು, ಕೊಕೇನ್, ಬ್ರೌನ್ ಶುಗರ್ ಮುಂತಾದವುಗಳನ್ನು ಮಾದಕ ವಸ್ತುಗಳಾಗಿದ್ದು, ಸಿಗರೇಟು ಮದ್ಯಪಾನ ಮುಂತಾದವುಗಳನ್ನು ಮಾದಕ ವಸ್ತುಗಳೊಂದಿಗೆ ವ್ಯಕ್ತಿಯ ದೈನಂದಿನ ದುಶ್ಚಟಗಳಾಗಿ ಬದಲಾಗುತ್ತದೆ. ಇದರಿಂದ ವ್ಯಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆಂದು ಅಬಕಾರಿ ಉಪ ಅಧೀಕ್ಷಕ ಜಿ.ಎಸ್.ಪಾಟೀಲ ನುಡಿದರು.ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿ, ಡ್ರಗ್ಸ್ ಅಥವಾ ಮಾದಕ ವಸ್ತುಗಳು ಮನುಷ್ಯನ ಮೇಲೆ ಅನಾನೂಕೂಲಕರವಾದ ಪರಿಣಾಮವನ್ನು ಬೀರಿ ಆರೋಗ್ಯವಂತ ವ್ಯಕ್ತಿಯನ್ನು ವ್ಯಸನಿಯನ್ನಾಗಿ ಇಡೀ ಕುಟುಂಬವನ್ನೇ ಬಲಿಪಡೆಯುವಂತೆ ಮಾಡುತ್ತದೆ. ಇಂತಹ ಡ್ರಗ್ಸ್ ಮಾದಕ ವಸ್ತುಗಳ ಸೇವೆನೆಯಿಂದ ವಿದ್ಯಾರ್ಥಿಗಳು ಮತ್ತು ಯುವಕ ಯುವತಿಯರು ದೂರವಿರಬೇಕು ಎಂದರು.
ವಲಯ ನಿರೀಕ್ಷಕಿ ರೇಣುಕಾ ಮಾತನಾಡಿ, ಮಾದಕ ವಸ್ತುಗಳ ಸೇವನೆ ಮಾಡುವಂತಹ ವ್ಯಕ್ತಿಗಳು ತಮ್ಮ ನಿರ್ಧಾರಗಳನ್ನು ತಾವು ಕೈಗೊಳ್ಳಲು ಸಾಧ್ಯವಾಗದ ಮಟ್ಟಕ್ಕೆ ವ್ಯಕ್ತಿಯ ಮನಸ್ಸನ್ನು ಬಂಧಿಸಿರುತ್ತವೆ. ಇದರಿಂದ ಮಾದಕ ವಸ್ತುಗಳು ಅವನ ದೇಹ ಮತ್ತು ಮನಸ್ಸನ್ನು ನಿಯಂತ್ರಿಸುತ್ತದೆ. ಆಗಲೇ ಅನೇಕ ಅಸಹನೀಯ, ಅನೈತಿಕ, ಅಸಹಜ ಅಪರಾಧ ಕೃತ್ಯಗಳಲ್ಲಿ ತೊಡಗಿ ಜೀವನವನ್ನು ನಾಶ ಪಡಿಸಿಕೊಳ್ಳುತ್ತಾರೆ ಎಂದರು.ಮಾದಕ ದ್ರವ್ಯ ಮತ್ತು ವಸ್ತುಗಳ ಸೇವನೆಗೆ ಒಳಗಾಗದಂತೆ ಹಾಗೂ ಇಂತಹ ಕೃತ್ಯಗಳಿಗೆ ಒಳಗಾಗುವವರನ್ನು ರಕ್ಷಿಸುವಂತೆ ವಿದ್ಯಾರ್ಥಿಗಳಿಂದ ಪ್ರಮಾಣ ಬೋಧನೆ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ವೆಂಕಟರೆಡ್ಡಿ, ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಅಬಕಾರಿ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.