ಬಡವರ ಸೇವೆ ಸಂಕಲ್ಪ ಮಾಡಿ: ವೈದ್ಯ ವಿದ್ಯಾರ್ಥಿಗಳಿಗೆ ಪೊನ್ನಣ್ಣ ಕಿವಿಮಾತು

| Published : Mar 30 2025, 03:04 AM IST

ಸಾರಾಂಶ

ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರ ಮತ್ತು ಜವಾಬ್ದಾರಿಯುತ ವೃತ್ತಿಯಾಗಿದ್ದು ಜನಸೇವೆ ಮಾಡಲು ಅವಕಾಶ ಹೊಂದಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಲು ಆರಂಭದಲ್ಲಿಯೇ ವೈದ್ಯರು ಮಾನಸಿಕವಾಗಿ ಸಿದ್ದರಾಗಿರಬೇಕು ಎಂದು ಗಣ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮೆಡಿಕಲ್ ಕೋರ್ಸ್ ಸೇರುವಾಗಲೇ ತಮ್ಮ ಪದವಿ ಮುಗಿದ ಮೇಲೆ ನಿರ್ದಿಷ್ಟ ಕಾಲ ಗ್ರಾಮೀಣ ಭಾಗದಲ್ಲಿ ಬಡವರ ಸೇವೆ ಮಾಡುತ್ತೇವೆ ಎಂಬ ಧೃಡ ಸಂಕಲ್ಪ ಮಾಡಬೇಕು ಎಂದು ಮೆಡಿಕಲ್ ವಿದ್ಯಾರ್ಥಿಗಳಿಗೆ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಕಿವಿಮಾತು ಹೇಳಿದ್ದಾರೆ.

ಹತ್ತನೇ ವಾರ್ಷಿಕೋತ್ಸವದ ಸಲುವಾಗಿ ಕೊಡಗು ವೈದ್ಯಕೀಯ ಕಾಲೇಜು ಆಸ್ಪತ್ರೆ ಮಡಿಕೇರಿಯಲ್ಲಿ ಆಯೋಜಿಸಿದ ಅವೆನ್ಸಿಸ್-2025 ಬೃಹತ್ ಆರೋಗ್ಯ ಜಾಗೃತಿ ಪ್ರದರ್ಶನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರ ಮತ್ತು ಜವಾಬ್ದಾರಿಯುತ ವೃತ್ತಿಯಾಗಿದ್ದು ಜನಸೇವೆ ಮಾಡಲು ಅವಕಾಶ ಹೊಂದಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಲು‌ ಆರಂಭದಲ್ಲಿಯೇ ವೈದ್ಯರು ಮಾನಸಿಕವಾಗಿ ಸಿದ್ಧರಾಗಿರಬೇಕು ಎಂದು ಹೇಳಿದರು.

ರಾಷ್ಟ್ರೀಯ ಕ್ಷಯರೋಗ ದಿನಾಚರಣೆ ಅಂಗವಾಗಿ ನಡೆದ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿ ಕೊಡಗು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಿ ಪುರಸ್ಕರಿಸಿದರು.

ಸ್ತ್ರೀ ಮತ್ತು ಪ್ರಸೂತಿ ವಿಭಾಗದಲ್ಲಿ ವಿಶೇಷ ಸಾಧನೆಗೈದ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿದ ಕೊಡಗು ಮೆಡಿಕಲ್ ಕಾಲೇಜಿನ ಆಡಳಿತವರ್ಗ, ಡಾಕ್ಟರ್‌ಗಳು, ತಾಂತ್ರಿಕ ವರ್ಗದವರು, ನರ್ಸಿಂಗ್ ವಿಭಾಗ ಹಾಗೂ ಗ್ರೂಪ್ ಡಿ ವಿಭಾಗದ ಸದಸ್ಯರನ್ನು ಅಭಿನಂದಿಸಿದ ಪೊನ್ನಣ್ಣ, ಮುಂದಿನ ದಿನಗಳಲ್ಲಿ ಸಂಸ್ಥೆ ಮತ್ತಷ್ಟು ಉತ್ತಮ ಆಡಳಿತವನ್ನು ನೀಡಲಿ ಎಂದು ಹಾರೈಸಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಲೋಕೇಶ್ ಕುಮಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಪ್ರಾಂಶುಪಾಲ ಡಾ.ವಿಶಾಲ್, ಆಡಳಿತ ವಿಭಾಗದ ಮುಖ್ಯಸ್ಥ ಡಾ.ಸೋಮಶೇಖರ್, ಡಾ.ಕಾಮತ್, ಡಾ.ಮಂಜುನಾಥ್, ಡಾ.ಪುರುಷೋತ್ತಮ್, ವಿದ್ಯಾರ್ಥಿ ಮುಖಂಡರಾದ ಪೂರ್ಣಚಂದ್ರ, ಮನೋಜ್ ಶೇಖರ್, ಮಿಥುನ್ ಆರ್., ಪವನ್ ವಶಿಷ್ಠ, ನೇಹಾ, ಪುನೀತ್, ಕಾವ್ಯ ಗುಪ್ತಾ, ಸೂರ್ಯ ವೈ., ಅನುದೀಪ್, ಶಶಾಂಕ್ ವೈ., ನಾಝಿಯಾ ತಸ್ವೀನ್, ಮನು, ಪ್ರಜ್ನಾ, ಜಹರಾ, ಲಿಖಿತ ಬಿ.ಟಿ., ಐಶ್ವರ್ಯ ರಾಜ್, ಭವಾನಿ ರೆಡ್ಡಿ, ತೃಪ್ತಿ, ಚಂದನಶ್ರೀ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.