ಮಕ್ಕಳ ಸಾಮರಸ್ಯದ ಬದುಕಿಗೆ ಸಲಹೆ ನೀಡಿ

| Published : Jun 22 2025, 01:18 AM IST

ಸಾರಾಂಶ

ಮಕ್ಕಳನ್ನು ಸಮಾಜದ ಮತ್ತು ದೇಶದ ಶಕ್ತಿಯನ್ನಾಗಿಸಲು ಪಾಲಕರು ಮಕ್ಕಳ ನಿರಂತರ ದಿನದ ಚಟುವಟಿಕೆಗಳ ಬಗ್ಗೆ ಹಾಗೂ ಕೌಶಲ್ಯ ಗಮನಿಸಿ ಅವರಿಗೆ ಪ್ರೊತ್ಸಾಹಿಸಿಸಬೇಕು

ಹಾನಗಲ್ಲ: ಮಕ್ಕಳ ಹಕ್ಕುಗಳ ಅರಿವು ಮೂಡಿಸಿ ಪಾಲಕರು ಹಾಗೂ ಮಕ್ಕಳ ಸಹಭಾಗಿತ್ವದಲ್ಲಿ ಸಾಮರಸ್ಯದ ಬದುಕು ಕಟ್ಟಿಕೊಡಲು ಮಕ್ಕಳಿಗೆ ಸಲಹೆ ನೀಡಬೇಕು ಎಂದು ಲೋಯಲಾ ವಿಕಾಸ ಕೇಂದ್ರದ ನಿರ್ದೇಶಕ ವಿನ್ಸೆಂಟ್ ಜೇಸನ್ ತಿಳಿಸಿದರು.

ಹಾನಗಲ್ಲಿನ ಲೋಯಲಾ ವಿಕಾಸ ಕೇಂದ್ರದಲ್ಲಿ ಮಕ್ಕಳ ಹಕ್ಕುಗಳು ಹಾಗೂ ಪಾಲಕರಿಗೆ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಾನಗಲ್ಲ ತಾಲೂಕಿನ 14 ಹಳ್ಳಿಗಳಲ್ಲಿ ಸಮುದಾಯ ಕಲಿಕಾ ಕೇಂದ್ರ ತೆರೆದು ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಕ್ರಮ ಜರುಗಿಸಲಾಗುತ್ತಿದೆ. ಮೌಲ್ಯಾಧಾರಿತ ಶಿಕ್ಷಣ ಇಂದಿನ ಅಗತ್ಯವಾಗಿದೆ. ಅದಕ್ಕಾಗಿ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಕಾಳಜಿ ವಹಿಸುವ ಜವಾಬ್ದಾರಿ ಪಾಲಕರದ್ದೇ ಪ್ರಮುಖವಾಗಿದೆ ಎಂದರು.

ಲೊಯೋಲ ವಿಕಾಸ ಕೇಂದ್ರ ಸಂಸ್ಥೆಯ ಸಹ ನಿರ್ದೇಶಕ ಜೇಸನ್ ಪಾಯ್ಸ್ ಮಾತನಾಡಿ, ಮಕ್ಕಳನ್ನು ಸಮಾಜದ ಮತ್ತು ದೇಶದ ಶಕ್ತಿಯನ್ನಾಗಿಸಲು ಪಾಲಕರು ಮಕ್ಕಳ ನಿರಂತರ ದಿನದ ಚಟುವಟಿಕೆಗಳ ಬಗ್ಗೆ ಹಾಗೂ ಕೌಶಲ್ಯ ಗಮನಿಸಿ ಅವರಿಗೆ ಪ್ರೊತ್ಸಾಹಿಸಿಸಬೇಕು. ಅವರನ್ನು ಉತ್ತಮ ನಾಗರಿಕರನ್ನಾಗಿ ಬೆಳೆಸುವಲ್ಲಿ ಪಾಲಕರ ಪಾತ್ರ ಬಹಳ ಮುಖ್ಯ ಎಂದರು.

ಸಂಪನ್ಮೂಲ ವ್ಯಕ್ತಿ ಭೋವಿ ಹೊನ್ನಪ್ಪ ಮಾತನಾಡಿ, ಮಕ್ಕಳಿಗೆ ಮಕ್ಕಳ ಹಕ್ಕುಗಳಾದ ಬದುಕುವ ಹಕ್ಕು,ರಕ್ಷಣೆಯ ಹಕ್ಕು, ವಿಕಾಸ ಹೊಂದುವ ಹಕ್ಕು, ಭಾಗವಹಿಸುವ ಹಕ್ಕುಗಳ ಬಗ್ಗೆ ತಿಳಿಸಬೇಕಾಗಿದೆ. ಪಾಲಕರಿಗೆ ಮಕ್ಕಳ ರಕ್ಷಣೆ, ಮಕ್ಕಳ ಬೆಳವಣಿಗೆ ಹಾಗೂ ಪಾಲನೆಯ ಬಗ್ಗೆ ನೀತಿ ಕಥೆಗಳ ಮುಖಾಂತರ ತಿಳಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಲೊಯೋಲ ಸಂಸ್ಥೆಯ ಸಿಬ್ಬಂದಿ ಪೀರಪ್ಪಾ ಶಿರ್ಶಿ,ರಮೇಶ ಬಾರ್ಕಿ, ನಾಗರತ್ನಾ ಕೊಪ್ಪದ, ಶೋಭಾ ಗರಡೇರ, ಗೀತಾ ಬಿಸ್ಗಣ್ಣನವರ ವೇದಿಕೆಯಲ್ಲಿದ್ದರು.