ಸಾರಾಂಶ
14ರ ಬೆಳಿಗ್ಗೆ 9ರಿಂದ 15ರವರೆಗೆ ಖಾಕಿ ಕಾವಲು । ಜೆಎಂಎಫ್ಸಿ ನ್ಯಾಯಾಲಯ ಆದೇಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಪಟ್ಟಣದ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣ ಸಂಬಂಧ ಆರೋಪಿಯಾಗಿರುವ ವಕೀಲ ದೇವರಾಜೇಗೌಡರನ್ನು ಮೇ.೧೪ರ ಬೆಳಿಗ್ಗೆ ೯ ಗಂಟೆಯಿಂದ ಮೇ.15ರ ರಾತ್ರಿ ತನಕ ಎರಡು ದಿನ ಪೊಲೀಸ್ ಬಂಧನಕ್ಕೆ ನೀಡಿ ನಗರದ ಜೆಎಂಎಫ್ಸಿ ನ್ಯಾಯಾಲಯ ಆದೇಶ ನೀಡಿದೆ.
ಪಟ್ಟಣದ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆಯೊಬ್ಬರು ವಕೀಲ ದೇವರಾಜೇಗೌಡ ವಿರುದ್ಧ ಏಪ್ರಿಲ್ ಒಂದರಂದು ನೀಡಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಪರಸ್ಥಳಕ್ಕೆ ತೆರಳುತ್ತಿದ್ದ ವಕೀಲ ದೇವರಾಜೇಗೌಡರನ್ನು ಹಿರಿಯೂರಿನಲ್ಲಿ ಬಂಧಿಸಿ, ಶನಿವಾರ ಸಂಜೆ ನ್ಯಾಯಾದೀಶರ ಮನೆಯಲ್ಲಿ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಜೆಎಂಎಫ್ಸಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸಿದ್ಧರಾಮ ಎಸ್.೧೪ ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.ಸೋಮವಾರ ಬೆಳಿಗ್ಗೆ ನ್ಯಾಯಾಲಯದಲ್ಲಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಪೊಲೀಸರು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅರ್ಜಿ ಪರಿಗಣಿಸಿ, ಮೂರು ದಿನ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ. ಹಾಸನದ ಜಿಲ್ಲಾ ಕಾರಾಗೃಹದಲ್ಲಿ ಇರುವ ವಕೀಲ ದೇವರಾಜೇಗೌಡರನ್ನು ಮಂಗಳವಾರ ಬೆಳಿಗ್ಗೆ ೯ ಗಂಟೆಗೆ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.
ಶಾಸಕ ಎಚ್.ಡಿ.ರೇವಣ್ಣ ನಿವಾಸಕ್ಕೆ ಎಸ್ಐಟಿ ಹಾಗೂ ಎಫ್ಎಸ್ಎಲ್ ತಜ್ಞರ ತಂಡ ಭೇಟಿ:ಸಂತ್ರಸ್ತ ಮಹಿಳೆಯೊಬ್ಬರು ಶಾಸಕರ ನಿವಾಸದಲ್ಲೂ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ನೀಡಿದ್ದರು. ಇದರ ಹಿನ್ನೆಲೆಯಲ್ಲಿ ಪಟ್ಟಣದ ಶಾಸಕ ಎಚ್.ಡಿ.ರೇವಣ್ಣ ನಿವಾಸದಲ್ಲೂ ಸಾಕ್ಷ್ಯ ಸಂಗ್ರಹಿಸಲು ತನಿಖಾಧಿಕಾರಿ ಸ್ವರ್ಣ ನೇತೃತ್ವದಲ್ಲಿ ಎಫ್ಎಸ್ಎಲ್ ತಜ್ಞರ ತಂಡ ಆಗಮಿಸಿ, ಪರಿಶೀಲನೆ ನಡೆಸಿದರು.