ಅಡ್ಯನಡ್ಕ ಬ್ಯಾಂಕ್ ಕಳವು ಪ್ರಕರಣ: ಬಂಧಿತರಿಂದ ಚಿನ್ನ, ಬೆಳ್ಳಿ, ನಗದು ವಶಕ್ಕೆ

| Published : Mar 16 2024, 01:47 AM IST

ಅಡ್ಯನಡ್ಕ ಬ್ಯಾಂಕ್ ಕಳವು ಪ್ರಕರಣ: ಬಂಧಿತರಿಂದ ಚಿನ್ನ, ಬೆಳ್ಳಿ, ನಗದು ವಶಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅಡ್ಯನಡ್ಕದಲ್ಲಿರುವ ಕರ್ಣಾಟಕ ಬ್ಯಾಂಕ್‌ನ ಹಿಂಭಾಗದ ಕಿಟಕಿಯ ಸರಳುಗಳನ್ನು ತುಂಡರಿಸಿ ಒಳನುಗ್ಗಿದ ಕಳ್ಳರು ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವುಗೈದ ಘಟನೆ ಫೆ.೮ರಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿತ್ತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಅಡ್ಯನಡ್ಕದಲ್ಲಿ ನಡೆದ ಕರ್ಣಾಟಕ ಬ್ಯಾಂಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಿಂದ 25,70,918 ರುಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕಾರ್ಯಾಚರಣೆ ನಡೆಸಿದ ತಂಡಕ್ಕೆ ದ.ಕ. ಜಿಲ್ಲಾ ಎಸ್ಪಿ ರಿಷ್ಯಂತ್ ನಗದು ಬಹುಮಾನ ಘೋಷಿಸಿದ್ದಾರೆ. ಬಂಟ್ವಾಳ ತಾಲೂಕು ಬಿಮೂಡ ಗ್ರಾಮದ ಗೂಡಿನ ಬಳಿ ಜುಮ್ಮಾ ಮಸೀದಿ ಬಳಿಯ ನಿವಾಸಿ ಮಹಮ್ಮದ್‌ ರಫೀಕ್ ಅಲಿಯಾಸ್ ಗೂಡಿನಬಳಿ ರಫೀಕ್‌ (35), ಮಂಜೇಶ್ವರ ತಾಲೂಕಿನ ಉಪ್ಪಳ ಮೊಗ್ರಾಳ ನಿವಾಸಿ ಇಬ್ರಾಹಿಂ ಖಲಂದರ್ (41), ಹಾಗೂ ಮಂಜೇಶ್ವರ ತಾಲೂಕು ಬಾಯಾರು ಗ್ರಾಮದ ಗಾಳಿಯಡ್ಕ ದಯಾನಂದ ಎಸ್.(37 ) ಬಂಧಿತ ಆರೋಪಿಗಳಾಗಿದ್ದು, ಉಳಿದಂತೆ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಅಡ್ಯನಡ್ಕದಲ್ಲಿರುವ ಕರ್ಣಾಟಕ ಬ್ಯಾಂಕ್‌ನ ಹಿಂಭಾಗದ ಕಿಟಕಿಯ ಸರಳುಗಳನ್ನು ತುಂಡರಿಸಿ ಒಳನುಗ್ಗಿದ ಕಳ್ಳರು ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವುಗೈದ ಘಟನೆ ಫೆ.೮ರಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿತ್ತು.

ಕಳವು ಕೃತ್ಯದಲ್ಲಿ ಭಾಗಿಯಾದವರೆಲ್ಲರೂ ಕೇರಳಕ್ಕೆ ಪಲಾಯನ ಮಾಡಿತ್ತು. ಬಳಿಕ ಅಲ್ಲಿಂದ ಎಲ್ಲರೂ ಬೇರ್ಪಟ್ಟು ಬೇರೆ ಬೇರೆ ಕಡೆಗಳಿಗೆ ತೆರಳಿದ್ದರು ಎನ್ನಲಾಗಿದೆ. ಬ್ಯಾಂಕ್‌ನ ಹಿಂಭಾಗ ಪೊದೆಯಿಂದ ಆವೃತವಾಗಿದ್ದು, ಈ ದಾರಿಯಾಗಿ ಬಂದ ಕಳ್ಳರು ಕಬ್ಬಿಣ ತುಂಡರಿಸುವ ಗರಗಸ ಬಳಸಿ ಕಿಟಕಿಯ ಸರಳುಗಳನ್ನು ತುಂಡು ಮಾಡಿ ಒಳಗೆ ನುಸುಳಿದ್ದರು. ಬಳಿಕ ಬ್ಯಾಂಕ್‌ನಿಂದ 17,28,735 ರು. ನಗದು ಹಾಗೂ 696.21 ಗ್ರಾಂ ಚಿನ್ನಭರಣ ಹಾಗೂ 1,00,000 ರು. ಮೌಲ್ಯದ ಬೆಳ್ಳಿ ಕಳ್ಳತನ ಮಾಡಲಾಗಿತ್ತು. ಗ್ರಾಹಕರ ವೈಯಕ್ತಿಕ ಲಾಕರ್‌ಗಳ ಪೈಕಿ ನಾಲ್ಕನ್ನು ತೆರೆಯುವಲ್ಲಿಯೂ ತಂಡ ಯಶಸ್ವಿಯಾಗಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಶೇಷ ತಂಡ ರಚಿಸಿ ತನಿಖೆ: ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಸಫಲವಾಗಿದೆ. ಬಂಧಿತರಿಂದ 2,40,700 ರು. ನಗದು , ಕಳ್ಳತನದ ಹಣದಿಂದ ಖರೀದಿಸಿದ 2 ಲಕ್ಷ ರು. ಮೌಲ್ಯದ ಗೃಹಉಪಯೋಗಿ ಸಾಮಗ್ರಿ, 12,48,218 ಮೌಲ್ಯದ ಚಿನ್ನಾಭರಣ, ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಒಂದು ಬ್ರೀಝಾ ಕಾರು, ಒಂದು ಗ್ಯಾಸ್‌ ಕಟರ್‌ ಹಾಗೂ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡು ಸೊತ್ತುಗಳ ಒಟ್ಟು ಮೌಲ್ಯ 25,70,918 ರು. ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಯನ್ನು ದ.ಕ ಜಿಲ್ಲಾ ಪೊಲೀಸ್‌ ಅಧೀಕ್ಷಕ ಸಿ.ಬಿ. ರಿಷ್ಯಂತ್‌ ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಧರ್ಮಪ್ಪ ಎನ್‌.ಎಂ ಹಾಗೂ ರಾಜೇಂದ್ರ ಡಿ. ಎಸ್‌. ಮಾರ್ಗದರ್ಶನದಂತೆ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್.‌ ವಿಜಯ ಪ್ರಸಾದ್‌ ನಿರ್ದೇಶನದಂತೆ ಆರಂಭಿಸಲಾಗಿತ್ತು. ವಿಟ್ಲ ಪೊಲೀಸ್ ಠಾಣಾ ಪೊಲೀಸ್‌ ನಿರೀಕ್ಷಕ ನಾಗರಾಜ್‌ ಎಚ್‌. ನೇತೃತ್ವದಲ್ಲಿ ಪೊಲೀಸ್‌ ಉಪ ನಿರೀಕ್ಷಕ ನಂದಕುಮಾರ್‌, ಉದಯರವಿ, ಹರೀಶ್‌ ಕುಮಾರ್‌, ವಿದ್ಯಾ ಕೆ.ಜೆ. ಸಿಬ್ಬಂದಿ ವೆಂಕಟರಮಣ ಗೌಡ, ಪ್ರವೀಣ್‌ ಮೂರುಗೋಳಿ, ಉದಯ ರೈ, ರಕ್ಷಿತ್‌ ರೈ , ಪ್ರವೀಣ್‌ ರೈ ಪಾಲ್ತಾಡಿ, ಅದ್ರಾಮ, ಕರುಣಾಕರ, ರಾಹುಲ್‌ ರಾವ್‌, ಶ್ರೀಧರ ಸಿ ಎಸ್‌, ಜಗದೀಶ್‌ ಅತ್ತಾಜೆ, ಹೇಮರಾಜ್‌, ಅಶೋಕ್‌, ವಿವೇಕ್‌ ಕೆ., ಕುಮಾರ್‌ ಹೆಚ್.ಕೆ. , ಸಂಪತ್‌, ದಿವಾಕರ್‌, ಸಂತೋಷ್‌ ,ಕುಮಾರ್‌ ಮಾಯಪ್ಪ ಅವರು ಭಾಗವಹಿಸಿದ್ದಾರೆ.