ಸಾರಾಂಶ
ಕನ್ನಡಸೇನೆ ರಾಜ್ಯಾಧ್ಯಕ್ಷ ಕೆ.ಕುಮಾರ್ ಚಿಕ್ಕಮಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲಾ ಘಟಕದ ವತಿಯಿಂದ ಮಲ್ಲಂದೂರು ರಸ್ತೆಯಲ್ಲಿರುವ ಭಗತ್ಸಿಂಗ್ ಆಟೋ ನಿಲ್ದಾಣದಲ್ಲಿ ಸ್ವಾಗತ ಕೋರಲಾಯಿತು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಅಂಗಡಿಗಳ ನಾಮಫಲಕಗಳನ್ನು ಬದಲಾವಣೆಗೊಳಿಸದಿದ್ದಲ್ಲಿ ಫೆ.28ರ ಬಳಿಕ ಕನ್ನಡ ಸೇನೆ ಹಾಗೂ ಕನ್ನಡಪರ ಸಂಘಟನೆ ಜೊತೆಗೂಡಿ ಇಡೀ ರಾಜ್ಯಾದ್ಯಂತ ದೊಡ್ಡ ಅಭಿಯಾನ ಕೈಗೊಂಡು ಆಂಗ್ಲ ವ್ಯಾಮೋಹದ ವರ್ತಕರ ಅಂಗಡಿಗಳ ನಾಮಫಲಕಗಳಿಗೆ ಮಸಿ ಬಳೆಯಲಾಗುವುದು ಎಂದು ಕನ್ನಡಸೇನೆ ರಾಜ್ಯಾಧ್ಯಕ್ಷ ಕೆ.ಕುಮಾರ್ ಹೇಳಿದರು.ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಂಘಟನೆ ಕಾರ್ಯಕರ್ತರನ್ನು ಇಲ್ಲಿನ ಭಗತ್ ಸಿಂಗ್ ಆಟೋ ನಿಲ್ದಾಣದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಸಂಘವು ಯಾವುದೇ ಬೆದರಿಕೆಗಳಿಗೆ ಜಗ್ಗದೇ ಧೈರ್ಯವಾಗಿ ಮುನ್ನುಗ್ಗಿ ಕನ್ನಡ ಬೆಳವಣಿಗೆ ಸಹಕರಿಸುತ್ತಿದೆ. ಜೊತೆಗೆ ಅಂಗಡಿದಾರರು ನಾಮಫಲಕದಲ್ಲಿ ಶೇ.80ರಷ್ಟು ಕನ್ನಡ ಪದಗಳ ಬಳಕೆ ಮಾಡುವ ನಿಟ್ಟಿನಲ್ಲಿ ಫೆ.28ವರೆಗೆ ಗಡುವು ನೀಡಲಾಗಿದೆ ಎಂದರು.
ನಾಡಿನ ಸಾವಿರಾರು ವರ್ಷಗಳ ಪರಂಪರೆ ಹೊಂದಿರುವ ಕನ್ನಡ ಭಾಷೆ ಬೆಳವಣಿಗೆ ನಾವುಗಳೇ ಸಹಕರಿಸದಿದ್ದರೆ ಕನ್ನಡ ಮಣ್ಣಿನ ಕಂಪು ಮರೆಯಾಗುವ ಸಾಧ್ಯತೆಯಿರುವ ಹಿನ್ನೆಲೆ ರಾಜ್ಯದ ಅಂಗಡಿ ಮಾಲೀಕರು ಜಾಗೃತರಾಗಿ ನಾಮಫಲಕದಲ್ಲಿ ಶೇ.80ರಷ್ಟು ಕನ್ನಡ ಪದ ಬಳಸಿ ನಾಡಿನ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿದರು. ಈ ವೇಳೆ ಸೇನೆ ರಾಜ್ಯ ಮುಖಂಡ ರವಿ, ಜಿಲ್ಲಾ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಸಂಘಟನಾ ಕಾರ್ಯದರ್ಶಿ ಸತೀಶ್, ಮುಖಂಡರುಗಳಾದ ಶಂಕರೇಗೌಡ, ಹುಣಸೇಮಕ್ಕಿ ಲಕ್ಷ್ಮಣ್, ಶಿವು, ನವೀನ್, ಹರೀಶ್, ಪಾಲಾಕ್ಷಿ, ವಿನಯ್, ಅನ್ವರ್ ಹಾಜರಿದ್ದರು.