ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಮುಂದಾಗಿ: ಡಾ.ವೈ.ಕೆ.ಭಾಗ್ಯ ಕರೆ

| Published : Mar 14 2024, 02:02 AM IST

ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಮುಂದಾಗಿ: ಡಾ.ವೈ.ಕೆ.ಭಾಗ್ಯ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆ ರಾಜಕೀಯವಾಗಿ ಶೇ.50ರಷ್ಟು ಮೀಸಲಾತಿ ಪಡೆಯಬೇಕಿದೆ. ಲಿಂಗ ತಾರತಮ್ಯ ತೊಲಗಿಸಲು ಶೈಕ್ಷಣಿಕವಾಗಿ ಮಹಿಳೆ ಸಬಲರಾಗಬೇಕು. ಮಹಿಳೆಯರ ಸಬಲೀಕರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ಯೋಜನೆಗಳು ಗ್ರಾಮೀಣ ಪ್ರದೇಶದ ಕಡೆಭಾಗದ ಮಹಿಳೆಗೂ ಸಮರ್ಪಕವಾಗಿ ತಲುಪಿಸುವ ಕೆಲಸವಾಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಮಹಿಳೆಯರು ಮುಂದಾಗಬೇಕಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ಪ್ರಾಧ್ಯಾಪಕಿ ಡಾ.ವೈ.ಕೆ.ಭಾಗ್ಯ ತಿಳಿಸಿದರು.

ತಾಲೂಕಿನ ಕೊತ್ತತ್ತಿ ಗ್ರಾಮದಲ್ಲಿ ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಮಂಡಳಿ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ವಿಶ್ವ ಮಹಿಳಾ ದಿನದ ನಿಮಿತ್ತ ಜರುಗಿದ ಮಹಿಳೆಯರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪುರುಷರಷ್ಟೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದಾಗ್ಯೂ ಬಾಲ್ಯವಿವಾಹ, ಹೆಣ್ಣುಭ್ರೂಣಹತ್ಯೆಯಂತ ಘಟನೆಗಳು ಜರುಗುತ್ತಿವೆ. ಮಹಿಳೆಯನ್ನು ಸಮಾನತೆಯಿಂದ ಕಾಣುವ ಔದಾರ್‍ಯ ಬೆಳೆಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಹಿಳೆ ರಾಜಕೀಯವಾಗಿ ಶೇ.50ರಷ್ಟು ಮೀಸಲಾತಿ ಪಡೆಯಬೇಕಿದೆ. ಲಿಂಗ ತಾರತಮ್ಯ ತೊಲಗಿಸಲು ಶೈಕ್ಷಣಿಕವಾಗಿ ಮಹಿಳೆ ಸಬಲರಾಗಬೇಕು. ಮಹಿಳೆಯರ ಸಬಲೀಕರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ಯೋಜನೆಗಳು ಗ್ರಾಮೀಣ ಪ್ರದೇಶದ ಕಡೆಭಾಗದ ಮಹಿಳೆಗೂ ಸಮರ್ಪಕವಾಗಿ ತಲುಪಿಸುವ ಕೆಲಸವಾಗಬೇಕು ಎಂದರು.

ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿಯ ಬೆಂಗಳೂರು ಶಿಕ್ಷಣಾಧಿಕಾರಿ ಸತೀಶ್‌ಕುಮಾರ್ ಮಾತನಾಡಿ, ಸಂಘಟಿತ ಉದ್ಯೋಗಸ್ಥ ಮಹಿಳೆಯರು, ಅಸಂಘಟಿತ ಗ್ರಾಮೀಣ ಮಹಿಳೆಯರಲ್ಲಿ ಹಲವು ಮೂಲ ಸೌಕರ್‍ಯಗಳ ಕುರಿತಾಗಿ ಜಾಗೃತಿ ಮೂಡಿಸಲು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಸಮಾರಂಭದಲ್ಲಿ ಪರಿಸರ ರೂರಲ್ ಡೆಮಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಆರ್ಥಿಕ ಸಾಕ್ಷರತೆ ಕುರಿತು ಕೆ.ಪಿ.ಅರುಣಕುಮಾರಿ, ಆರೋಗ್ಯ ಜಾಗೃತಿ ಕುರಿತು ಡಾ.ಸೌಮ್ಯ, ಸ್ವಯಂ ಉದ್ಯೋಗ ಕುರಿತು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಂಯೋಜಕಿ ಶ್ವೇತಾ ವಿಷಯ ಮಂಡಿಸಿದರು.