ಸಾರಾಂಶ
- ಮೆಕ್ಯಾನಿಕಲ್ ಇಂಜಿನಿಯರಿಂಗ್, ರೊಬೊಟಿಕ್ ಮತ್ತು ಎಐ ಇಂಜಿನಿಯರಿಂಗ್ ಯಾಂತ್ರಿಕ - 2025
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮೆಕ್ಯಾನಿಕಲ್ ಇಂಜಿನಿಯರಿಂಗ್ ರೋಬೋಟ್ಗಳ ಯಾಂತ್ರಿಕ ಭಾಗಗಳ ವಿನ್ಯಾಸ ಹಾಗೂ ಎಐ ತಂತ್ರಜ್ಞಾನಗಳು ರೋಬೋಟ್ಗಳಿಗೆ ಬುದ್ಧಿವಂತಿಕೆ ನೀಡಲು ಪೂರಕವಾಗಿದೆ ಎಂದು ಎಐಟಿ ಕಾಲೇಜು ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ್ ಹೇಳಿದರು.ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ನಡೆದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ರೊಬೊಟಿಕ್ ಮತ್ತು ಎಐ ಇಂಜಿನಿಯರಿಂಗ್ ಯಾಂತ್ರಿಕ - 2025ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಸಂವೇಧಕ ತಂತ್ರಜ್ಞಾನಗಳಲ್ಲಿನ ಪ್ರಗತಿಗಳು ರೋಬೊಟಿಕ್ಸ್ ನೊಳಗಿನ ಸಾಧ್ಯತೆಗಳು ಮತ್ತು ಅನ್ವಯಿಕೆಗಳನ್ನು ನಿರಂತರವಾಗಿ ವಿಸ್ತರಿಸುತ್ತದೆ. ಅಲ್ಲದೇ ಮುಂದುವರಿಸಲು ಒಂದು ರೋಮಾಂಚ ಕಾರಿ ಹಾಗೂ ಕ್ರಿಯಾತ್ಮಕ ಕ್ಷೇತ್ರವಾಗಿದೆ ಎಂದು ತಿಳಿಸಿದರು.ರೋಬೋಟಿಕ್ ವ್ಯವಸ್ಥೆಗಳ ಪರಿಕಲ್ಪನೆ, ಅಭಿವೃದ್ಧಿ ಮತ್ತು ಅನುಷ್ಟಾನದಲ್ಲಿ ಪರಿಣತಿ, ವ್ಯಾಪಕ ಕೌಶಲ್ಯ ಹೊಂದಿರುವ ವೃತ್ತಿಪರ, ಸ್ವತಂತ್ರ್ಯವಾಗಿ ಅಥವಾ ಕನಿಷ್ಠ ಮಾನವ ಹಸ್ತಕ್ಷೇಪದೊಂದಿಗೆ ವ್ಯಾಪಕ ಶ್ರೇಣಿ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಬುದ್ದಿವಂತ ಯಂತ್ರಗಳನ್ನು ರಚಿಸುವುದು ಪ್ರಾಥಮಿಕ ಉದ್ದೇಶವಾಗಿದೆ ಎಂದರು.ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಅತ್ಯಂತ ಹಳೆಯ ಮತ್ತು ಬಹುಮುಖ ವಿಭಾಗಗಳಲ್ಲಿ ಒಂದಾಗಿದೆ. ಭವಿಷ್ಯದ ವಾಹನಗಳನ್ನು ವಿನ್ಯಾಸಗೊಳಿಸುವುದು, ಇಂಧನ ವ್ಯವಸ್ಥೆಗಳನ್ನು ಸುಧಾರಿಸುವುದು, ರೋಬೋಟಿಕ್ ಯಾಂತ್ರೀಕರಣ ಅಭಿವೃದ್ಧಿಪಡಿಸುವುದು, ಮೆಕ್ಯಾನಿಕಲ್ ಎಂಜಿನಿಯರಿಂಗ್ ವ್ಯಾಪ್ತಿ ಯು ಊಹಿಸಬಹುದಾದ ಉದ್ಯಮವಾಗಿದೆ ಎಂದು ತಿಳಿಸಿದರು.ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಜಿ.ಎಂ.ಸತ್ಯನಾರಾಯಣ್ ಮಾತನಾಡಿ, ಮೆಕ್ಯಾನಿಕಲ್ ಇಂಜಿನಿಯರಿಂಗ್ ರೊಬೊಟಿಕ್ ಕೋರ್ಸ್ ರೊಬೊಟಿಕ್ಸ್ ವಿನ್ಯಾಸ, ಪ್ರೋಗ್ರಾಮಿಂಗ್ ಮತ್ತು ಅನುಷ್ಟಾನದ ಸಮಗ್ರ ತಿಳುವಳಿಕೆ ನೀಡುತ್ತದೆ. ವೈವಿಧ್ಯಮಯ ತಾಂತ್ರಿಕ ಪಾತ್ರಗಳಿಗೆ ಕೌಶಲ್ಯ ಅಭಿವೃದ್ಧಿಯನ್ನು ಬೆಳೆಸುತ್ತದೆ ಎಂದರು.ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎಸ್.ಸಂಪತ್ ಮಾತನಾಡಿ, ಇಂದಿನ ಆಧುನಿಕತೆ ಯುಗದಲ್ಲಿ ಪ್ರಪಂಚ ಹೊಸ ಹೊಸ ತಂತ್ರಜ್ಞಾನಗಳಿಂದ ಪ್ರತಿ ಕ್ಷೇತ್ರದಲ್ಲೂ ಪ್ರಗತಿ ಕಾಣುತ್ತಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನಗಳೆಡೆ ಹೆಚ್ಚು ಆಸಕ್ತಿ ವಹಿಸುವುದನ್ನು ಕಲಿಯಬೇಕಿದೆ ಎಂದು ತಿಳಿಸಿದರು.ಇದೇ ವೇಳೆ ವಿವಿಧ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಅತ್ಯುತ್ತಮ ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ಬಳಿಕ ವಿದ್ಯಾರ್ಥಿಗಳು ಸ್ವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಡಾ. ವೀರೇಂದ್ರ, ಆರ್ಟಿಫಿಶಿಯಲ್ ಇಂಟಲಿಜೆಂಟ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದ ಮುಖ್ಯಸ್ಥೆ ಡಾ. ಎಂ.ಆರ್.ಸುನೀತಾ, ಸಿವಿಲ್ ಇಂಜಿನಿಯರ್ ಮುಖ್ಯಸ್ಥ ಡಾ. ಕಿರಣ್, ಡಾಟಾ ಸೈನ್ಸ್ ಮುಖ್ಯಸ್ಥ ಡಾ. ಎಂ.ಜಿ.ಆದರ್ಶ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು. ವಿನುತ ಸಂಗಡಿಗರು ಪ್ರಾರ್ಥಿಸಿದರು. ಡಾ. ಜಿ.ಎಂ.ಸತ್ಯನಾರಾಯಣ್ ಸ್ವಾಗತಿಸಿದರು.
15 ಕೆಸಿಕೆಎಂ 1ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ನಡೆದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ರೊಬೊಟಿಕ್ ಮತ್ತು ಎಐ ಇಂಜಿನಿಯರಿಂಗ್ ಯಾಂತ್ರಿಕ - 2025 ಕಾರ್ಯಕ್ರಮವನ್ನು ಪ್ರಾಂಶುಪಾಲ ಡಾ. ಸಿ.ಟಿ. ಜಯದೇವ್ ಉದ್ಘಾಟಿಸಿದರು.